ಮಂಡ್ಯ: ಆಟೋ ಮಗುಚಿ ಬಿದ್ದು ವಿದ್ಯಾರ್ಥಿನಿ ಸಾವು
ಮಂಡ್ಯ, ಜುಲೈ 14: ಆಟೋವೊಂದು ಮಗುಚಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ: ತಾಲೂಕಿನ ಚಟ್ಟಂಗೆರೆ ತಿರುವಿನಲ್ಲಿ ಜು.13 ರಂದು ಮಧ್ಯಾಹ್ನ ನಡೆದಿದೆ.
ನಿಶ್ಚಿತಾರ್ಥವಾಗಿದ್ದ ಮಂಡ್ಯದ ಯುವತಿ ಡೆಂಗ್ಯೂಗೆ ಬಲಿ
ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ನಿವೇದಿತಾ(17) ಮೃತಪಟ್ಟ ವಿದ್ಯಾರ್ಥಿನಿ. ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಚಟ್ಟಂಗೆರೆ ಗ್ರಾಮದ ತನ್ನ ಅಜ್ಜಿ ಮನೆಯಲ್ಲಿ ವಾಸವಾಗಿದ್ದ ನಿವೇದಿತಾ ಮೂಲತಃ ಗುಂಡ್ಲುಪೇಟೆ ತಾಲೂಕಿನ ಕೊಡುಸೋಗೆ ಗ್ರಾಮದ ನಿವಾಸಿ ವೆಂಕಟೇಶ್ ಅವರ ಪುತ್ರಿ.
ಸಂಜೆ 3.30ಕ್ಕೆ ತರಗತಿಯನ್ನು ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಚಟ್ಟಂಗೆರೆ ಗ್ರಾಮದ ಬಳಿಯ ಕ್ರಾಸ್ನಲ್ಲಿ ಆಟೋ ಮಗುಚಿ ಬಿದ್ದ ಪರಿಣಾಮ ನಿವೇದಿತಾ ಸ್ಥಳದಲ್ಲಿಯೇ ಮೃತಪಟ್ಟರೆ, ಆಟೋದಲ್ಲಿದ್ದ ಸಹ ಪ್ರಯಾಣಿಕರಾದ ರಚನಾ, ಸುಪ್ರಿತಾ, ಜ್ಯೋತಿ ಎಂಬುವವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.