ಹಲಗೂರು: ಎಟಿಎಂ ಮಶೀನನ್ನೇ ಹೊತ್ತೊಯ್ದ ಖದೀಮರು!
ಮಂಡ್ಯ, ಫೆಬ್ರವರಿ. 01 : ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹಾಡ್ಲಿ ಮೇಗಳಾಪುರ ವೃತ್ತದಲ್ಲಿರುವ ಎಸ್.ಬಿ.ಎಂ.ಗೆ ಕನ್ನ ಹಾಕಿದ ಕಳ್ಳರು ಬ್ಯಾಂಕ್ ಒಳಗೆ ಅಳವಡಿಸಿದ್ದ ಎಟಿಎಂ ಬಾಕ್ಸ್ ಸಮೇತ 15.29 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಸುಕುಧಾರಿಗಳಾಗಿ ಬಂದ ಕಳ್ಳರು ಮಂಗಳವಾರ ಮುಂಜಾನೆ 1.49ರ ಸಮಯದಲ್ಲಿ ಬ್ಯಾಂಕ್ ನ ಬೀಗ ಮುರಿದು ಒಳನುಗ್ಗಿದ್ದಾರೆ. ಆ ನಂತರ ಎಟಿಎಂ ಮೆಷಿನ್ ತೆರೆದು ಹಣ ದೋಚಲು ಅಸಾಧ್ಯವಾಗಿದ್ದರಿಂದ ಮಶೀನನ್ನೇ ಹೊತ್ತೊಯ್ದಿದ್ದಾರೆ.[ಮಂಡ್ಯದಲ್ಲಿ ಗ್ರಾಮೀಣ ಬ್ಯಾಂಕ್ ದರೋಡೆ ಯತ್ನ ವಿಫಲ]
ಎಟಿಎಂ ಮಶೀನ್ ನಲ್ಲಿ 15,29,300 ರೂ.ಗಳಿತ್ತು ಎನ್ನಲಾಗಿದೆ. ಬ್ಯಾಂಕ್ ಒಳಗೆ ಕಳ್ಳರು ಪ್ರವೇಶಿಸುವ ವೇಳೆ ಸಿಸಿ ಕ್ಯಾಮೆರಾಗೆ ಮುಖ ಕಾಣದಂತೆ ಮುಸುಕು ಹಾಕಿಕೊಂಡಿದ್ದಾರೆ. ಬಳಿಕ ಮಶೀನ್ ಹೊತ್ತು ಹೊರತಂದು ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರೆ.
ವಿಷಯ ತಿಳಿದು ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದರಲ್ಲದೆ, ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕ ರವಿಕುಮಾರ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಸೋಮವಾರದಂದು ಎಟಿಎಂಗೆ 16 ಲಕ್ಷ ರೂ. ಹಾಕಿದ್ದು, 69,700 ರೂ.ಗಳನ್ನು ಗ್ರಾಹಕರು ಪಡೆದಿದ್ದರು, ಉಳಿದ 15,29,300 ರೂ.ಗಳು ಎಟಿಎಂ ಬಾಕ್ಸ್ನಲ್ಲೇ ಇತ್ತು ಎನ್ನಲಾಗಿದೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳು ಸೇರಿದಂತೆ ಹಲವು ಕಡೆಗಳಿಂದ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಪ್ರಕರಣದ ಹಿಂದೆ ಸ್ಥಳೀಯರ ಕೈವಾಡ ಇರಬಹುದು ಎಂಬ ಶಂಕೆ ಮೂಡುತ್ತಿದೆ. ಪೊಲೀಸರ ತನಿಖೆಯಿಂದಷ್ಟೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.