ಧರಣಿಗೆ ಕೊನೆಯಿಲ್ಲ, ಸರ್ಕಾರದ ಮನಸ್ಸು ಕರಗಿಲ್ಲ!
ಮಂಡ್ಯ, ಆಗಸ್ಟ್ 5: ದಿನಕ್ಕೊಂದು ರೀತಿಯಲ್ಲಿ ವಿಭಿನ್ನ ಮತ್ತು ವಿಶಿಷ್ಟವಾಗಿ ಪ್ರತಿಭಟನೆ ನಡೆಸುವ ಮೂಲಕ ನಾಲೆಗಳಿಗೆ ನೀರು ಹರಿಸಲು ರೈತರು ಹಾಗೂ ವಿವಿಧ ಸಂಘಟನೆಗಳು ಸರ್ಕಾರದ ಕಣ್ತೆರೆಸಲು ಮಾಡುತ್ತಿರುವ ಕಾವೇರಿ ಚಳವಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ಮಂಡ್ಯದಲ್ಲಿ ಸಿದ್ದರಾಮಯ್ಯ, ಎಂ.ಬಿ ಪಾಟೀಲ್ ಅಣಕು ತಿಥಿ ಆಚರಣೆ
ಆಹೋರಾತ್ರಿ ಧರಣಿಯನ್ನು ಆರಂಭಿಸಿ ತಿಂಗಳು ತುಂಬಿದರೂ ಸರ್ಕಾರದ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿರುವುದು ರೈತರು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿದೆ. ಈಗಾಗಲೇ ಮಂಡ್ಯ ಜಿಲ್ಲೆಯಾದ್ಯಂತ ಹಲವು ರೀತಿಯ ಪ್ರತಿಭಟನೆಗಳನ್ನು ಮಾಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ಮೌನಕ್ಕೆ ಶರಣಾಗಿರುವುದು ಕಂಡು ಬರುತ್ತಿದೆ.
ಈಗಾಗಲೇ ಕೃಷ್ಣರಾಜ ಸಾಗರ ಜಲಾಶಯದಲ್ಲಿ 90 ಅಡಿಗಳಷ್ಟು ನೀರಿದ್ದು, ನಾಲೆಗಳಿಗೆ ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಹಾಗೂ ಜನ-ಜಾನುವಾರುಗಳನ್ನು ರಕ್ಷಿಸುವಂತೆ ಆಗ್ರಹಿಸಿಕೊಂಡು ಬರಲಾಗುತ್ತಿದ್ದರೂ ಅದಕ್ಕೆ ಕಿವಿಗೊಡದೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಮಂಡ್ಯದಲ್ಲಿ ಜಮೀನಿಗೆ ನೀರು ಹರಿಸಲು ಒತ್ತಾಯಿಸಿ 24 ದಿನದಿಂದ ಪ್ರತಿಭಟನೆ
ಇದನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಕಾವೇರಿ ನದಿಗಿಳಿದು ನಾಲೆಗಳಿಗೆ ನೀರು ಹರಿಸಿ ಜನ-ಜಾನುವಾರುಗಳು ಹಾಗೂ ಪಕ್ಷಿ ಸಂಕುಲಗಳನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಮದ್ದೂರಿನ ದೇಶಹಳ್ಳಿ ಕೆರೆಯಂಗಳದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ತಿಂಗಳು ತುಂಬುತ್ತಿದೆ. ಇಲ್ಲಿ ಶ್ರೀ ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಕೆರೆಯಂಗಳದಲ್ಲೇ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ವಿನೂತನವಾಗಿ ಪ್ರತಿಭಟಿಸಲಾಗಿದೆ.
ಮಂಡ್ಯ ನಗರದ ಸರ್ ಎಂ.ವಿ. ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯು 3ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಿ ಜಿಲ್ಲೆಯ ಎಲ್ಲಾ ನಾಲೆಗಳಿಗೂ ನೀರು ಹರಿಸಿ ರೈತರ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ಆದರೆ ಇದ್ಯಾವುದನ್ನೂ ನೋಡಿಯೂ ನೋಡದಂತೆ ಸರ್ಕಾರ ಮೌನಕ್ಕೆ ಶರಣಾಗಿದೆ. ಇನ್ನು ಸ್ಥಳೀಯ ಜನಪ್ರತಿನಿಧಿಗಳಂತು ತಲೆಹಾಕುತ್ತಿಲ್ಲ. ಚುನಾವಣೆ ಬಂದಾಗ ಬರುವ ರಾಜಕಾರಣಿಗಳು ರಾಜಕೀಯ ಲೆಕ್ಕಾಚಾರದಲ್ಲಿ ನಿರತರಾಗಿದ್ದು, ಬಡವನ ಕಷ್ಟ ಅವರಿಗೆ ತಿಳಿಯದಾಗಿದೆ. ನೀರು ಕೊಡಿ ಬೆಳೆ ಬೆಳೆದು ಬದುಕಿಕೊಳ್ಳುತ್ತೇವೆ ಎಂದು ಅಂಗಲಾಚುತ್ತಿದ್ದರೂ ರೈತರ ಉದ್ಧಾರ ಮಾಡುತ್ತೇವೆ ಎಂದು ಅಧಿಕಾರ ಹಿಡಿದವರು ಅವರತ್ತ ಇಣುಕಿಯೂ ನೋಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.