ಹೆರಿಗೆಗಾಗಿ ತವರಿಗೆ ಬಂದಿದ್ದ ಗರ್ಭಿಣಿ ನಾಪತ್ತೆ
ನಾಪತ್ತೆಯಾಗಿರುವ ಮಹಿಳೆಯನ್ನು ನಾಲ್ಕು ವರ್ಷಗಳ ಹಿಂದೆ ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಎಲ್.ಬಿ.ಶ್ರೀಧರ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಮಂಡ್ಯ: ಹೆರಿಗೆಯ ಆರೈಕೆಗೆಂದು ಗಂಡನ ಮನೆಯಿಂದ ತವರಿಗೆ ಬಂದಿದ್ದ ಗರ್ಭಿಣಿ ಮಹಿಳೆಯೊಬ್ಬರು ಸ್ನೇಹಿತೆ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದಲ್ಲಿ ನಡೆದಿದೆ.
ಮತ್ತೀಕೆರೆ ನಿವಾಸಿ ಬೋರೇಗೌಡ ಎಂಬುವರ ಪುತ್ರಿ ರಮ್ಯ(25) ನಾಪತ್ತೆಯಾದ ಗರ್ಭಿಣಿ ಮಹಿಳೆ. ಈಕೆಯನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಎಲ್.ಬಿ.ಶ್ರೀಧರ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಮದುವೆಯಾದ ಬಳಿಕ ಇದೀಗ ಗರ್ಭಿಣಿಯಾಗಿದ್ದ ರಮ್ಯಳನ್ನು ಸಂಪ್ರದಾಯದಂತೆ ಚೊಚ್ಚಲ ಹೆರಿಗೆಗಾಗಿ ತವರು ಮನೆಯಾದ ಮತ್ತೀಕೆರೆಗೆ ಕರೆತರಲಾಗಿತ್ತು. ತನ್ನ ತವರು ಮನೆಯಲ್ಲಿದ್ದ ಈಕೆ ಏ.13ರಂದು ಮನೆಯಲ್ಲಿದ್ದು ಬೋರ್ ಆಗಿದ್ದು ಗೆಳತಿ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರುವುದಾಗಿ ತನ್ನ ತಾಯಿತಂದೆಯೊಂದಿಗೆ ಹೇಳಿ ಮಧ್ಯಾಹ್ನ 2ರ ಸಮಯದಲ್ಲಿ ಹೋಗಿದ್ದಾಳೆ.
ಹೀಗೆ ಹೋದವಳು ಸಂಜೆಯಾದರೂ ಬಾರದೆ ಇದ್ದಾಗ ಆತಂಕಗೊಂಡು ಫೋನ್ ಮಾಡಿ ವಿಚಾರಿಸುವ ಪ್ರಯತ್ನ ಮಾಡಲಾಗಿದ್ದು, ಆಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾಳೆ. ಆಕೆಯ ಗೆಳತಿಯರನ್ನು ಕೇಳಿದರೆ ತಮ್ಮ ಮನೆಗೆ ಬಂದಿಲ್ಲ ಎಂಬ ಉತ್ತರ ನೀಡಿದ್ದಾರೆ.
ಆತಂಕಗೊಂಡ ಆಕೆಯ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಕೆ ಎಲ್ಲಿಗೆ ಹೋಗಿದ್ದಾಳೆ ಎಂಬುದೇ ಪತ್ತೆಯಾಗಿಲ್ಲ. ಈ ಸಂಬಂಧ ಸಂಬಂಧಿಕರು, ಆಕೆಯ ಪರಿಚಿತರು ಎಲ್ಲರ ಮನೆಗೆ ತೆರಳಿ ವಿಚಾರಿಸಿದರೂ ಎಲ್ಲೆಡೆಯೂ ಆಕೆಯನ್ನು ನಾವು ನೋಡಿಲ್ಲ ಎಂಬ ಉತ್ತರವೇ ಬರುತ್ತಿದೆ.
ಮನೆಯಿಂದ ಹೊರಹೋಗುವಾಗ ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದಳು ಎನ್ನಲಾಗಿದ್ದು, ಆಕೆಯ ಮೈಮೇಲೆ ಸುಮಾರು 75ಗ್ರಾಂನಷ್ಟು ಚಿನ್ನಾಭರಣವಿತ್ತು ಎನ್ನಲಾಗಿದೆ. ಮಗಳು ನಾಪತ್ತೆಯಾದಲ್ಲಿಂದ ಅವಳ ಹೆತ್ತವರು ಸಂಪೂರ್ಣ ಕಂಗಾಲಾಗಿದ್ದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡದೆ ತಮಗೆ ತಿಳಿದ ಜಾಗವನ್ನೆಲ್ಲ ಹುಡುಕಾಡಿದ ಬಳಿಕ ಇದೀಗ ಬೇರೆ ದಾರಿ ಕಾಣದೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಠಾಣೆಯ ಎಸ್ಐ ಕೆ.ಎನ್.ಗಿರೀಶ್ ಅವರು ಎಲ್ಲಾದರು ರಮ್ಯಳ ಸುಳಿವು ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ 9480804860, 08230-262440 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.