ಮಂಡ್ಯದಲ್ಲಿ ಕುಡಿಯುವ ನೀರನ್ನೂ ಕಸಿದುಕೊಂಡ ರಾಜಕೀಯ ಪ್ರತಿಷ್ಠೆ
ಮಂಡ್ಯ, ಮಾರ್ಚ್ 4: ಅಭಿವೃದ್ಧಿ ಕಾರ್ಯಗಳು ಕೆಲವೊಮ್ಮೆ ರಾಜಕೀಯ ಪ್ರತಿಷ್ಠೆಗಳಿಗೆ ಸಿಲುಕಿ ನೆನೆಗುದಿಗೆ ಬೀಳುತ್ತವೆ. ಇದಕ್ಕೆ ಉತ್ತಮ ನಿದರ್ಶನ ತಾಲೂಕಿನ ಚೀರನಹಳ್ಳಿಯಲ್ಲಿ ಅರ್ಧಕ್ಕೇ ನಿಂತ ಶುದ್ಧ ಕುಡಿಯುವ ನೀರು ಘಟಕ.
ಎಲ್ಲವೂ ಸರಿಹೋಗಿದ್ದರೆ ಇಷ್ಟರಲ್ಲೇ ಕಾಮಗಾರಿ ಮುಗಿದು ನೀರು ಹರಿಯಬೇಕಿತ್ತು. ಆದರೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಅವರ ರಾಜಕೀಯ ಪ್ರತಿಷ್ಠೆಯಿಂದ ಘಟಕ ಇನ್ನೂ ಪೂರ್ಣಗೊಂಡಿಲ್ಲ.
ಚೀರನಹಳ್ಳಿ ಸುತ್ತ ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಸ್ಥಳೀಯರು ಪ್ರತಿದಿನ ನೀರಿಗಾಗಿ ಪರದಾಡುತ್ತಿದ್ದರೂ ಈ ಭಾಗದ ರಾಜಕೀಯ ನಾಯಕರು ತಲೆಕೆಡಿಸಿಕೊಳ್ಳುತ್ತಿಲ್ಲ. ನೀರಿನ ಅಭಾವ ತಪ್ಪಿಸುವ ಸಲುವಾಗಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 28 ಡಿಸೆಂಬರ್ 2015ರಲ್ಲಿ ಚೀರನಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಿದೆ.
ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲೇ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುಮತಿ ಪಡೆದು ಅಡಿಪಾಯದ ಕೆಲಸವನ್ನೂ ಪೂರ್ಣಗೊಳಿಸಲಾಗಿದೆ. ಆದರೂ ಗ್ರಾಮಸ್ಥರಿಗೆ ನೀರು ಒದಗಿಸುವ ಉದ್ದೇಶಕ್ಕಿಂತ ರಾಜಕೀಯ ಹಿತಾಸಕ್ತಿಯೇ ಮಹತ್ವದ್ದೆನಿಸಿ ಮತ ಹಾಕಿದ ಗ್ರಾಮಸ್ಥರು ಕಂಗಾಲಾಗುವಂತಾಗಿದೆ.
ಕಾಮಗಾರಿ ಬೇಗ ಮುಗಿಸಿ ನಮಗೆ ನೀರು ಕೊಡಿ ಎನ್ನುವುದು ಜನರ ಆಗ್ರಹ. ಬಿರುಬೇಸಿಗೆ ಆರಂಭವಾಗುವ ಮೊದಲಾದರೂ ಈ ಕಾಮಗಾರಿಯಲ್ಲೇನಾದರೂ ಪ್ರಗತಿಯಾಗುತ್ತಾ ಅಂತ ಕಾದುನೋಡಬೇಕಿದೆ.