ಮಂಡ್ಯ ವಿದ್ಯಾರ್ಥಿಗಳಿಂದ ಅಗ್ಗದ 'ಜಿಎಸ್ಟಿ' ಸಾಫ್ಟ್ ವೇರ್
ಮಂಡ್ಯ, ಜೂನ್ 25: ಅಕೌಂಟಿಂಗ್ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ಸೆಮಿಸ್ಟರಿನ ಇಬ್ಬರು ವಿದ್ಯಾರ್ಥಿಗಳು ಕುಬೇರ' ಆ್ಯಪ್ನ್ನು ಅಭಿವೃದ್ಧಿಪಡಿಸುವ ಮೂಲಕ ಗಮನಸೆಳೆದಿದ್ದಾರೆ.
ಇದು ವಿಶ್ವದಲ್ಲೇ ಅಗ್ಗದ ಜಿಎಸ್ಟಿ ಸಾಫ್ಟ್ ವೇರ್ ಆಗಿದೆ ಎಂದು ಇದನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳಾದ ಜಿ.ರಾಕೇಶ್ ಮತ್ತು ಜಿ.ಸಿ.ಶೈಲಜಾ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ಈ ಆ್ಯಪ್ಗೆ ಆರು ಜಾಗತಿಕ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಜಿಎಸ್ ಟಿ ಕಾಲ್ ಸೆಂಟರ್ ಜೂನ್ 25ರಿಂದ ಆರಂಭ
ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಮತ್ತು ಉದ್ಯೋಗ ನಿಯುಕ್ತಿ ಅಧಿಕಾರಿ ಡಾ.ಆರ್.ಗಿರೀಶ್ ಮಾರ್ಗದರ್ಶನದಲ್ಲಿ ಎಲೆಕ್ಟ್ರಿಕಲ್ ವಿಭಾಗದ ಅಂತಿಮ ಸೆಮಿಸ್ಟರಿನ ವಿದ್ಯಾರ್ಥಿಗಳಾದ ಜಿ.ರಾಕೇಶ್ ಮತ್ತು ಜಿ.ಸಿ.ಶೈಲಜಾ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ವರ್ತಕರಿಗೆ ಹೊಸ ತೆರಿಗೆ ಪದ್ಧತಿಗೆ ಹೊಂದಿಕೊಳ್ಳಲು ಸವಾಲಾಗಿರುವುದರಿಂದ ಅಂಥವರಿಗೆ ಹೊಸ ತೆರಿಗೆ ನೀತಿ-ನಿಯಮಗಳನ್ನು ಅಳವಡಿಸಿಕೊಂಡು ಮುನ್ನಡೆಯಲು ಅಗ್ಗದ ಈ ಅಕೌಂಟಿಂಗ್ ಸಾಫ್ಟ್ ವೇರ್ ಪ್ರಯೋಜನಕ್ಕೆ ಬರಲಿದೆಯಂತೆ.
ಅಕೌಂಟಿಂಗ್ ಸಾಫ್ಟ್ವೇರ್ ಗಳ ಅಭಿವೃದ್ಧಿಗೆ ಬಹುರಾಷ್ಟ್ರೀಯ ಕಂಪನಿಗಳು ಕೋಟ್ಯಂತರ ಡಾಲರ್ ವಿನಿಯೋಗಿಸುತ್ತವೆ. ಆದರೆ, 'ಕುಬೇರ ಆ್ಯಪ್' ಅತ್ಯಂತ ಅಗ್ಗದಲ್ಲಿ ದೊರಕುತ್ತಿದ್ದು, ಈ ಆ್ಯಪ್ನ್ನು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಅತ್ಯಂತ ಚಿಕ್ಕ ವ್ಯಾಪಾರಿ ಕೂಡ ಈ ಆ್ಯಪ್ನ್ನು ಅತಿ ಕಡಿಮೆ ಖರ್ಚಿನಲ್ಲಿ ಬಳಸಬಹುದಾಗಿದೆ.
ಕೃತಕ ಬುದ್ಧಿವಂತಿಕೆ, ಮೆಷಿನ್ ಲರ್ನಿಂಗ್ ಮತ್ತು ಫಜಿ ಹೀಗೆ ಎಲ್ಲ ರೀತಿಯ ಅಂಶಗಳನ್ನು ಒಳಗೊಂಡಿದ್ದು, ಪ್ರಾಯೋಗಿಕವಾಗಿ ಮಂಡ್ಯದ ಹಲವಾರು ವ್ಯಾಪಾರಿಗಳು ಉಪಯೋಗಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆ, ವ್ಯವಹಾರಸ್ಥರು, ಉದ್ಯಮಿಗಳಿಗೆ, ರೆಸ್ಟೋರೆಂಟ್, ಬೇಕರಿಗಳಿಗೆ ಅನುಕೂಲವಾಗಲಿದೆ ಎಂದು ಪ್ರೊ. ಡಾ.ಆರ್.ಗಿರೀಶ್ ಹೇಳಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪ್ಗಳ ಪೈಕಿ ಇದು ಅತ್ಯಂತ ಅಗ್ಗ ಮತ್ತು ಆಧುನಿಕವಾಗಿದ್ದು, ವರ್ಷಕ್ಕೆ ಕೇವಲ 999 ರೂ.ನಿಂದ 4999 ರೂ.ವರೆಗಿನ ದರದಲ್ಲಿ ಲಭ್ಯವಿದೆ. ಗೂಗಲ್ ಪ್ಲೇ-ಸ್ಟೋರ್ನಲ್ಲಿ ಇದು ಲಭ್ಯವಿದ್ದು ಐಒಎಸ್ ಮತ್ತು ವಿಂಡೋಸ್ಗೆ ಸದ್ಯದಲ್ಲೇ ಬರಲಿದೆಯಂತೆ.
ಜಿಎಸ್ಟಿ ಜಾರಿಗೆ ಬರುತ್ತಿರುವ ಬೆನ್ನಲ್ಲೇ ಅಕೌಂಟಿಂಗ್ ಕ್ಷೇತ್ರಕ್ಕೆ ಅಗತ್ಯವಿರುವ ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಮೂಲಕ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ 'ಕುಬೇರ ಆಪ್' ಯಾವ ರೀತಿಯಲ್ಲಿ ಜನಪ್ರಿಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.