ಖೈದಿಗೆ ವಿಶೇಷ ಆತಿಥ್ಯ, ಮಂಡ್ಯ ಜೈಲು ಅಧೀಕ್ಷಕ ಸತೀಶ್ ಅಮಾನತು
ಮಂಡ್ಯ ಜಿಲ್ಲಾ ಉಪಕಾರಾಗೃಹದಲ್ಲಿ ಅಧೀಕ್ಷಕರಾಗಿದ್ದ ಸತೀಶ್ ಅಮಾನತುಗೊಂಡಿದ್ದಾರೆ. ಇವರು ಕಾಂಗ್ರೆಸ್ ಮುಖಂಡ ಎಚ್.ಪಿ.ನಾಗೇಂದ್ರ ಕೊಲೆ ಆರೋಪಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಮಂಡ್ಯ, ಏಪ್ರಿಲ್ 29: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತು ಇವರಿಗೆ ಸರಿಯಾಗಿ ಒಪ್ಪುತ್ತದೆ. ಕಾನೂನು ಉಲ್ಲಂಘಿಸಿ ಖೈದಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ಉಪ ಕಾರಾಗೃಹದ ಅಧೀಕ್ಷಕರನ್ನು ಅಮಾನತುಗೊಳಿಸಿ ಬಂಧಿಖಾನೆ ಡಿಜಿ ಸುಬ್ರಹ್ಮಣ್ಯ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲಾ ಉಪಕಾರಾಗೃಹದಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಪದಕ ಪುರಸ್ಕೃತ ಸತೀಶ್ ಅಮಾನತುಗೊಂಡವರಾಗಿದ್ದಾರೆ. ಇವರು ಕಾಂಗ್ರೆಸ್ ಮುಖಂಡ, ಅಬಕಾರಿ ಉದ್ಯಮಿ ಆಗಿದ್ದ ಎಚ್.ಪಿ.ನಾಗೇಂದ್ರ ಕೊಲೆ ಆರೋಪಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.[ಅಂಬರೀಶ್ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಮನವಿ]
ಇಷ್ಟಕ್ಕೂ ಮಂಡ್ಯ ಜೈಲಿನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಇಲ್ಲಿನ ಖೈದಿಗಳು ತಮ್ಮ ಪ್ರಭಾವ ಬಳಸಿಕೊಂಡು ಏನೆಲ್ಲ ಪಡೆಯಬೇಕೋ ಅದೆಲ್ಲವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಇದೀಗ ಮುಖ್ಯಮಂತ್ರಿ ಪದಕ ಪುರಸ್ಕೃತ ಸತೀಶ್ ಕಾರ್ಯವೈಖರಿ ಬಯಲಾಗಿದೆ.
ಶಿವು ಅಲಿಯಾಸ್ ಡೇಂಜರ್ ಶಿವ ಎಂಬಾತ ಕಾಂಗ್ರೆಸ್ ಮುಖಂಡ, ಅಬಕಾರಿ ಉದ್ಯಮಿ ಎಚ್.ಪಿ.ನಾಗೇಂದ್ರ ಅವರನ್ನು ಹತ್ಯೆಗೈದ ಆರೋಪದಡಿ ಜೈಲ್ ಸೇರಿದ್ದ. ಈತನನ್ನು ಜೈಲ್ನಲ್ಲಿ ಸಾಮಾನ್ಯ ಖೈದಿಯಂತೆ ನೋಡಿಕೊಳ್ಳದೆ ಮೊಬೈಲ್ ಬಳಸಲು, ಗಾಂಜಾ ಸೇವಿಸಲು ಜೈಲ್ ಅಧೀಕ್ಷಕ ಸತೀಶ್ ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪವಿದೆ.[ಕಾಲಭೈರವೇಶ್ವರನಿಗೆ ನಮೋ ಎಂದ ಎಚ್ಡಿಕೆ ದಂಪತಿ!]
ಇಷ್ಟೇ ಅಲ್ಲದೆ ಜೈಲ್ನಲ್ಲಿ ಅಕ್ರಮಗಳು ನಡೆಯುತ್ತಿವೆ, ಗಾಂಜಾ, ಮದ್ಯ ಬಳಕೆಯಾಗುತ್ತಿದೆ. ಹಣ ಕೊಟ್ಟರೆ ಜೈಲ್ನಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.
ಹೀಗಾಗಿ ಪೊಲೀಸ್ ಅಧಿಕಾರಿಗಳ ತಂಡ ಕಾರಾಗೃಹಕ್ಕೆ ಇತ್ತೀಚೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ದಾಳಿಯ ಸಂದರ್ಭ ಜೈಲ್ನಲ್ಲಿ ಖೈದಿಗಳ ಬಳಿ ಗಾಂಜಾ, ಮೊಬೈಲ್ ಮೊದಲಾದವು ಪತ್ತೆಯಾಗಿದ್ದವು. ಇದನ್ನು ವಶಪಡಿಸಿಕೊಂಡು ವರದಿಯನ್ನು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸಲ್ಲಿಸಲಾಗಿತ್ತು. ಇದನ್ನು ಎಸ್ಪಿ ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿ ಆಧಾರದ ಮೇರೆಗೆ ಬಂಧಿಖಾನೆ ಡಿಜಿ ಸುಬ್ರಹ್ಮಣ್ಯ ಅವರು ಜೈಲು ಅಧೀಕ್ಷಕ ಸತೀಶ್ ಅವರನ್ನು ಇದೀಗ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜೈಲಿಗೆ ಶಿವ
ಮತ್ತೊಂದು ಬೆಳವಣಿಗೆಯಲ್ಲಿ ಜೈಲ್ ಅಧೀಕ್ಷಕ ಸತೀಶ್ ಅಮಾನತು ಆದ ಬೆನ್ನಲ್ಲೇ ಅವರಿಂದ ವಿಶೇಷ ಸೌಲಭ್ಯ ಪಡೆದುಕೊಂಡಿದ್ದ ಖೈದಿ ಶಿವು ಅಲಿಯಾಸ್ ಡೇಂಜರ್ ಶಿವನನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.
ಆತ ಜೈಲಿನಲ್ಲಿದ್ದುಕೊಂಡೇ ಮಾರ್ಕೆಟ್ ಕುಮಾರನನ್ನು ಎತ್ತಲು ಮಹಿಳಾ ರೌಡಿ ಭಾಗ್ಯ ಎಂಬಾಕೆ ಮೂಲಕ ಸ್ಕೆಚ್ ಹಾಕುತ್ತಿದ್ದನು ಎಂಬ ಆರೋಪವೂ ಇದೆ. ಈ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಆತನ ಸ್ಥಳಾಂತರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯ ಜೈಲಿಗೆ ಭಾಗ್ಯ !
ಕ್ರಿಮಿನಲ್ ಹಿನ್ನಲೆಯುಳ್ಳ ಮಹಿಳಾ ಡಾನ್ ಭಾಗ್ಯ ಸದ್ಯ ಮೈಸೂರು ಜೈಲಿನಲ್ಲಿದ್ದು ಅಲ್ಲಿಂದಲೇ ಡೇಂಜರ್ ಶಿವುನ ಸಂಪರ್ಕ ಸಾಧಿಸಿ ಮಾರ್ಕೆಟ್ ಕುಮಾರನ ಎತ್ತಲು ಸಂಚು ನಡೆಸುತ್ತಿದ್ದಾಳೆ ಎಂಬುದು ಪೊಲೀಸರ ಗಮನಕ್ಕೆ ಬಂದಿತ್ತು. ಮಂಡ್ಯ ಜೈಲಿಗೆ ದಾಳಿ ಮಾಡಿದ ಸಂದರ್ಭ ಶಿವು ಬಳಿ ಸಿಕ್ಕಿದ್ದ ಮೊಬೈಲ್ ನಲ್ಲಿ ಆಕೆಯನ್ನು ಶಿವು ಸಂಪರ್ಕಿಸಿರುವುದು ಪತ್ತೆಯಾಗಿತ್ತು.
ಇದರಿಂದ ಮಂಡ್ಯ ಪೂರ್ವ ಠಾಣೆ ಪೊಲೀಸರು ಮೈಸೂರು ಜೈಲಿನಲ್ಲಿದ್ದ ಭಾಗ್ಯಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಬಳಿಕ ಜಿಲ್ಲಾ ಉಪ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ನೂತನ ಅಧೀಕ್ಷಕರು
ಸತೀಶ್ ಅಮಾನತುಗೊಂಡ ಹಿನ್ನಲೆಯಲ್ಲಿ ತುಮಕೂರು ಉಪ ಕಾರಾಗೃಹದ ಅಧೀಕ್ಷಕರಾಗಿದ್ದ ಲೋಕೇಶ್ ರನ್ನು ಮಂಡ್ಯ ಜಿಲ್ಲಾ ಉಪಕಾರಾಗೃಹದ ಅಧೀಕ್ಷಕರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.