ಲಕ್ಷಾಂತರ ರುಪಾಯಿಯ ಶ್ರೀಕೃಷ್ಣನ ವಿಗ್ರಹ ಮಾರಲು ಯತ್ನಿಸುತ್ತಿದ್ದವರ ಬಂಧನ
ಲಕ್ಷಾಂತರ ರುಪಾಯಿ ಬೆಲೆ ಬಾಳುವ ಶ್ರೀಕೃಷ್ಣನ ವಿಗ್ರಹದ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ 8 ಮಂದಿಯನ್ನು ಪ್ರಿನ್ಸ್ ಲಾಡ್ಜ್ ನಲ್ಲಿ ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ವಿಗ್ರಹ ಯಾವ ದೇಗುಲದಿಂದ ಕಳವು ಮಾಡಿದ್ದು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ
ಮಂಡ್ಯ, ಏಪ್ರಿಲ್ 30: ಪಂಚಲೋಹದ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಮುಂದಾಗಿದ್ದ ಎಂಟು ಮಂದಿ ಆರೋಪಿಗಳು ಮಂಡ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಐನೆಕ್ಕಿದು ಗ್ರಾಮದ ಎನ್.ಎಂ.ಸುಜನ್, ದರ್ಬೆಯ ಲಕ್ಷ್ಮಿ ಲೇಔಟ್ ನ ಮಹಮದ್ ಸುನೀಪ್, ಕರಿಯಂಗಳ ಮನೆಯ ಮಹಮ್ಮದ್ ಬಸೀರ್, ಮಂಡ್ಯದ ನೆಹರು ನಗರದ ಗೋವಿಂದರಾಜು, ತಾವರೆಗೆರೆಯ ಮುಜಾಬ್, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಲ್ಕರೆ ಗ್ರಾಮದ ಬಾಲರಾಜು, ಹಾಸನದ ಹೊಯ್ಸಳ ನಗರದ ಪುಟ್ಟಸ್ವಾಮಿ, ಬೆಂಗಳೂರಿನ ಬೆನ್ಸನ್ ಟೌನ್ ನ ರಫೀವುದ್ದೀನ್ ಬಂಧಿತರಾಗಿದ್ದಾರೆ.[ಖೈದಿಗೆ ವಿಶೇಷ ಆತಿಥ್ಯ, ಮಂಡ್ಯ ಜೈಲು ಅಧೀಕ್ಷಕ ಸತೀಶ್ ಅಮಾನತು]
ಲಕ್ಷಾಂತರ ರುಪಾಯಿ ಬೆಲೆಬಾಳುವ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಈ ಎಂಟು ಮಂದಿ ಮಂಡ್ಯ ನಗರಕ್ಕೆ ಬಂದು ಪ್ರಿನ್ಸ್ ಲಾಡ್ಜ್ ನ ಕೊಠಡಿಯಲ್ಲಿ ತಂಗಿದ್ದರು. ಅಲ್ಲದೆ, ಇಲ್ಲಿಯೇ ಕುಳಿತು ವಿಗ್ರಹವನ್ನು ಮಾರಾಟ ಮಾಡುವ ವ್ಯವಹಾರ ಕುದುರಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಶ್ಚಿಮ ಠಾಣೆ ಪೊಲೀಸರಿಗೆ ಸಿಕ್ಕಿದ್ದು, ತಕ್ಷಣವೇ ದಾಳಿ ನಡೆಸಿದ್ದರಿಂದ ಆರೋಪಿಗಳು ಶ್ರೀಕೃಷ್ಣನ ಪಂಚಲೋಹದ ವಿಗ್ರಹದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.[ಅಂಬರೀಶ್ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಮನವಿ]
ಇದೀಗ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಅವರಿಗೆ ವಿಗ್ರಹ ಎಲ್ಲಿಂದ ಬಂತು, ಯಾವ ದೇವಾಲಯದಿಂದ ಕಳವು ಮಾಡಲಾಗಿದೆ, ಇದರ ಹಿಂದೆ ಯಾರಿದ್ದಾರೆ ಮುಂತಾದ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.