ಮಂಡ್ಯದ ಅಶೋಕ್ ಪೈ ಹತ್ಯೆ ಯತ್ನ ಪ್ರಕರಣದ 11 ಆರೋಪಿಗಳ ಬಂಧನ
ಮಂಡ್ಯದ ಅಶೋಕ್ ಪೈ ಹತ್ಯೆಗೆ ಯಾಕೆ ಯತ್ನಿಸಲಾಯಿತು ಎಂಬ ಬಗ್ಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಹನ್ನೊಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ಮಂಡ್ಯ, ಫೆಬ್ರವರಿ 9: ಮಂಗಳವಾರ ನಡೆದ ರೌಡಿ ಶೀಟರ್ ಅಶೋಕ್ ಪೈ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ಮಂದಿಯನ್ನು ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ವಾಹನಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯದ ಮರೀಗೌಡ ಬಡಾವಣೆಯ ನಿವಾಸಿ ಎನ್.ರಾಘವೇಂದ್ರ ಅಲಿಯಾಸ್ ಗುರು, ಕಲ್ಲಹಳ್ಳಿ ಸಿ.ಚೇತನ್ ಕುಮರ್, ಮೊತ್ತಹಳ್ಳಿ ಗ್ರಾಮದ ಎನ್.ಮನು, ಬೇವುಕಲ್ಲು ಗ್ರಾಮದ ಎನ್. ಮೋಹನ್ ಕುಮಾರ್, ನಾಗರಾಜು ಅಲಿಯಾಸ್ ನಾಗ, ಹೂಟಗಹಳ್ಳಿ ಗ್ರಾಮದ ಸಿ.ಅನಿಲ್ ಗೌಡ ಅಲಿಯಾಸ್ ಅನಿ, ಕೋಣನಹಳ್ಳಿ ತಿಟ್ಟು ಗ್ರಾಮದ ಸಿ.ನಂದೀಶ,[ಮಂಗಳವಾರ ಮಂಡ್ಯದಲ್ಲೂ ಭೂಕಂಪ : ನಿಜವೇ, ಸುಳ್ಳೇ]
ಕೋಣನಹಳ್ಳಿ ತಿಟ್ಟಿನ ಎಂ.ಜಿ.ಬಡಾವಣೆಯ ಎಚ್.ಎ.ಭೈರವ, ಶ್ರೀರಂಗಪಟ್ಟಣ ರಂಗನಾಥನಗರದ ಎಂ.ಸೋಮ, ಮಂಡ್ಯ ಶಂಕರಮಠದ ಹಣ್ಣಿನ ವ್ಯಾಪಾರಿ ಅಜ್ಮಲ್ ಪಾಷಾ ಅಲಿಯಾಸ್ ಅಜ್ಜು, ಚನ್ನಪಟ್ಟಣ ಕುವೆಂಪುನಗರದ ಧನು ಬಂಧಿತ ಆರೋಪಿಗಳು.
ಅಶೋಕ್ ಪೈ ಹತ್ಯೆಗೆ ಕಾರಣ ಏನು ಎಂಬುದನ್ನು ಬಂಧಿತರು ಬಾಯಿ ಬಿಟ್ಟಿದ್ದು, ಆರೋಪಿ ರಾಘವೇಂದ್ರ ಅಲಿಯಾಸ್ ಗುರು ತಾನು ಮನೆ ಮಾರಾಟ ಮಾಡಿದ್ದ 500, 1000 ರುಪಾಯಿಯನ್ನು ಬದಲಾಯಿಸಿಕೊಡುವಂತೆ ಅಶೋಕ್ ಪೈಗೆ ನೀಡಿದ್ದ. ಆದರೆ ಹಣವನ್ನು ವಾಪಸ್ ಕೊಡದೆ ಆತ ಸತಾಯಿಸುತ್ತಿದ್ದ.[ಕೃಷ್ಣ ರಾಜೀನಾಮೆ: ಮಂಡ್ಯದಲ್ಲಿ ಅತಂತ್ರವಾಯ್ತು ಕಾಂಗ್ರೆಸ್!]
ಇದರಿಂದ ಕೋಪಗೊಂಡ ರಾಘವೇಂದ್ರ ತನ್ನ ಸಹಚರರೊಂದಿಗೆ ಫೆಬ್ರವರಿ 7ರ ಮುಂಜಾನೆ 3ರ ಸಮಯದಲ್ಲಿ ಮದ್ದೂರು ತಾಲೂಕಿನ ಮಾದರಹಳ್ಳಿಯಲ್ಲಿ ವಾಸವಿದ್ದ ಅಶೋಕ್ ಪೈ ಮನೆಯ ಬಾಗಿಲು ಮುರಿದು ಒಳ ನುಗ್ಗಿದ್ದರು. ಈ ಸಂದರ್ಭದಲ್ಲಿ ಎಚ್ಚರಗೊಂಡ ಅಶೋಕ್ ಪೈ ಮನೆಯ ಅಟ್ಟದ ಮೇಲೇರಿ ಮನೆಯ ಕಲ್ನಾರ್ ಶೀಟ್ ಛಾವಣಿಯನ್ನು ತನ್ನ ತಲೆಯಿಂದ ಒಡೆದು ಮೇಲೆ ಬಂದು, ಭಾವಮೈದುನ ನಂದೀಶ್ ಮತ್ತಿತರರಿಗೆ ಮೊಬೈಲ್ ನಿಂದ ಕರೆ ಮಾಡಿದ್ದ.
ಗ್ರಾಮಸ್ಥರು ಸಹ ಎಚ್ಚರಗೊಂಡು ಮನೆ ಬಳಿ ಬಂದಿದ್ದರಿಂದ ಆರೋಪಿಗಳು ಮೊಬೈಲ್, ವಾಹನ ಹಾಗೂ ಮಾರಕಾಸ್ತ್ರಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ ಪಿ ಮ್ಯಾಥ್ಯೂಸ್ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಸಿಪಿಐ ಶಿವಮಲವಯ್ಯ, ಸಂತೋಷ್ ಕುಮಾರ್, ಪಿಎಸ್ ಐಗಳಾದ ಅಯ್ಯನಗೌಡ, ನಿರಂಜನ್, ಶಿವರುದ್ರ ಅವರ ತಂಡವು ತನಿಖೆ ಆರಂಭಿಸಿದ್ದರು.
ದಾಳಿ ವೇಳೆ ಆರೋಪಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ನಿಂದ ಆರೋಪಿಗಳ ಸುಳಿವು ಪತ್ತೆ ಹಚ್ಚಿದ ಪೊಲೀಸರ ತಂಡ, ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಆರೋಪಿಗಳು ಇರುವುದನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ.