ಮಂಡ್ಯದ ಕಿಕ್ಕೇರಿ ಬಳಿ ರು. 4ಲಕ್ಷ ಮೌಲ್ಯದ ಅಕ್ರಮ ಮರಳು ವಶ
ಮಂಡ್ಯ: ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ದೊಡ್ಡತಾರಹಳ್ಳಿ ಕೆರೆಯಲ್ಲಿ ಗ್ರಾಮದ ಕೆಲವರು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಸುಮಾರು ರು.4ಲಕ್ಷ ಮೌಲ್ಯದ ಮರಳನ್ನು ಕಿಕ್ಕೇರಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಮೊದಲಿನಿಂದಲೂ ದೊಡ್ಡತಾರಹಳ್ಳಿ ಗ್ರಾಮಕ್ಕೆ ಸೇರಿದ ಬಿಸಲಹಳ್ಳಿ ಕೆರೆ ಮತ್ತು ಅಕ್ಕಪಕ್ಕದಲ್ಲಿ ಅಕ್ರಮವಾಗಿ ಗ್ರಾಮದ ಕೆಲವರು ಮರಳನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಗ್ರಾಮದಲ್ಲಿ ಗೊತ್ತಿದ್ದರೂ ಆ ಬಗ್ಗೆ ಯಾರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ.[ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ]
ಆದರೆ ಈ ನಡುವೆ ಕಿಕ್ಕೇರಿ ಪೊಲೀಸರಿಗೆ ದೊಡ್ಡತಾರಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿರುವ ಕುರಿತು ಖಚಿತ ಮಾಹಿತಿ ಬಂದಿತ್ತು. ಹೀಗಾಗಿ ಸಬ್ಇನ್ಸ್ ಪೆಕ್ಟರ್ ಆರ್.ಸಿದ್ದರಾಜು ಸೇರಿದಂತೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದ ದಂಧೆಕೋರರು ನಾಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ರು. 4ಲಕ್ಷ ಮೌಲ್ಯದ 7 ಟ್ರಕ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಇಷ್ಟೊಂದು ಮೌಲ್ಯದ ಮರಳನ್ನು ಸಂಗ್ರಹಿಸಿಟ್ಟಿದ್ದು ಯಾರು? ಯಾರಿಗೆ ಇದರಲ್ಲಿ ಪಾಲಿದೆ? ಮೊದಲಾದ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಪೊಲೀಸರು ತನಿಖೆ ಆರಂಭಿಸಿದ್ದು ಅಕ್ರಮ ಮರಳು ದಂಧೆ ನಡೆಸುತ್ತಿರುವ ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಒಂದು ಟ್ರಕ್ ಮರಳಿಗೆ ಮಾರುಕಟ್ಟೆಯಲ್ಲಿ ಸುಮಾರು ರು. 60ಸಾವಿರ ಬೆಲೆಯಿದ್ದು, 7 ಟ್ರಕ್ ನಷ್ಟು ಮರಳು ದೊರೆತಿದ್ದು, ಮರಳಿನ ಮೌಲ್ಯ ರು.4ಲಕ್ಷ ಎಂದು ಅಂದಾಜಿಸಲಾಗಿದೆ. ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ(ತಹಸೀಲ್ದಾರ್) ಗಮನಕ್ಕೆ ತಂದು ಮರಳು ಹರಾಜಿಗೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಪಿಎಸ್ಐ ಸಿದ್ದರಾಜು ತಿಳಿಸಿದ್ದಾರೆ.