ಮಂಡ್ಯದಲ್ಲಿ ಗ್ರಾಮೀಣ ಬ್ಯಾಂಕ್ ದರೋಡೆ ಯತ್ನ ವಿಫಲ
ಮಂಡ್ಯ, ಜನವರಿ 23: ಬ್ಯಾಂಕ್ ದರೋಡೆ ಮಾಡಲು ಬೀಗ ಒಡೆಯುತ್ತಿದ್ದ ವೇಳೆ ಶಬ್ದ ಕೇಳಿ ಕಟ್ಟಡದ ಮಾಲಿಕ ಬಂದಿದ್ದರಿಂದ ಹೆದರಿ ಕಳ್ಳರು ಓಡಿ ಹೋದ ಘಟನೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಭಾನುವಾರ ನಡೆದಿದೆ.
ದೊಡ್ಡನರಸಿಕೆರೆ ಗ್ರಾಮದ ನಿವಾಸಿ ಚಿಕ್ಕಣ್ಣ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಸುಸಜ್ಜಿತ ಕಟ್ಟಡವಾಗಿದ್ದರೂ ಬಾಗಿಲಿನ ಬೀಗ ಒಡೆದು ಒಳ ನುಗ್ಗಿ ಬ್ಯಾಂಕ್ ದರೋಡೆ ಮಾಡಲು ಕಳ್ಳರ ತಂಡವೊಂದು ತಯಾರಿ ನಡೆಸಿತ್ತು.[ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ]
ಅದರಂತೆ ಭಾನುವಾರ ಬೆಳಗ್ಗಿನ ಸುಮಾರು 2ಗಂಟೆಗೆ ಗ್ರಾಮದಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಬ್ಯಾಂಕ್ ಇರುವ ಕಟ್ಟಡದತ್ತ ಬಂದ ಕಳ್ಳರ ತಂಡ ಬ್ಯಾಂಕಿಗೆ ಹಾಕಿದ್ದ ಬಾಗಿಲಿನ ಬೀಗವನ್ನು ಒಡೆಯಲು ಯತ್ನಿಸುತ್ತಿತ್ತು. ಈ ಸಂದರ್ಭ ಶಬ್ದ ಬಂದಿದ್ದು, ಶಬ್ಧಕ್ಕೆ ಎಚ್ಚರಗೊಂಡ ಕಟ್ಟಡದ ಮಾಲೀಕ ಚಿಕ್ಕಣ್ಣ ಅವರು ಏನು ಮಾಡುತ್ತಿದ್ದಾರೆ ಇಷ್ಟು ಹೊತ್ತಿನಲ್ಲಿ ಎಂದು ಯೋಚಿಸುತ್ತಾ ಮನೆಯಿಂದ ಹೊರ ಬಂದು ನೋಡಿದ್ದಾರೆ. ಆಗ ಅವರಿಗೆ ಬ್ಯಾಂಕ್ ಬಾಗಿಲ ಬೀಗ ಒಡೆಯುತ್ತಿರುವುದು ಕಾಣಿಸಿದೆ. ಕೂಡಲೇ ಅವರು ಕಳ್ಳ ಕಳ್ಳ ಎಂದು ಕೂಗಿ ಕೊಂಡಿದ್ದಾರೆ. ಅವರು ಜೋರಾಗಿ ಕೂಗಿದ್ದರಿಂದ ಎಚ್ಚರಗೊಂಡ ಕಳ್ಳರು ಹೆದರಿ ತಮ್ಮ ಬಳಿಯಿದ್ದ ಕಲ್ಲನ್ನು ಚಿಕ್ಕಣ್ಣನವರತ್ತ ತೂರಿ ಅಲ್ಲಿಂದ ಪರಾರಿಯಾಗಿದ್ದಾರೆ.[ಮೈಸೂರಲ್ಲಿ 10 ಮಂದಿ ದರೋಡೆಕೋರರ ಬಂಧನ]
ಈ ಬಗ್ಗೆ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಜಗದೀಶ್ ಮತ್ತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಮಾಲಿಕ ಚಿಕ್ಕಣ್ಣ ಅವರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ವೃತ್ತ ನಿರೀಕ್ಷಕ ಶಿವಮಲ್ಲಯ್ಯ ಅವರು ಬೆರಳಚ್ಚು ಮತ್ತು ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕಿನಲ್ಲಿದ್ದ ಸಿಸಿಟಿವಿಯ ದೃಶ್ಯಾವಳಿಗಳನ್ನು ವೀಕ್ಷಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಮುಂದಿನ ಕ್ರಮ ಕೈಗೊಂಡಿದ್ದಾರೆ.