'ಪತ್ರ ಬರೆದು ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ'
ಮಂಡ್ಯ, ಆಗಸ್ಟ್ 26 : 'ಕೇವಲ ಪತ್ರ ಬರೆಯುವ ಮೂಲಕ ರಾಜ್ಯದ ವಾಸ್ತವ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಸರ್ಕಾರ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ರೈತ ಹಿತ ಕಾಪಾಡುತ್ತದೆ ಎಂಬ ನಂಬಿಕೆಯಿಲ್ಲ' ಎಂದು ಎಚ್.ಡಿ.ಕುಮಾರಸ್ವಾಮಿ ದೂರಿದರು.
ಗುರುವಾರ ಮಂಡ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ಕುರಿತು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಚಳವಳಿಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಚಳವಳಿ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ' ಎಂದು ಸ್ಪಷ್ಟಪಡಿಸಿದರು. [ಕಾವೇರಿ ನೀರು ಹಂಚಿಕೆ ವಿವಾದದ ಬಗ್ಗೆ ಸರ್ವಪಕ್ಷ ಸಭೆ]
'3 ತಿಂಗಳಿನಿಂದ ತಮಿಳುನಾಡಿಗೆ 43 ಟಿಎಂಸಿ ನೀರು ಹರಿದಿದೆ. ಆದರೆ, ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ 7.5 ಟಿಎಂಸಿ ನೀರು ಸಿಕ್ಕಿದೆ. ಜಯಲಲಿತಾ ಅವರು 50 ಟಿಎಂಸಿ ನೀರಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ ಬರೆದುಕೊಂಡು ಕುಳಿತಿದ್ದಾರೆ' ಎಂದು ಆರೋಪಿಸಿದರು.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಮತ್ತೊಂದು ಕಡೆ ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಸರ್ಕಾರ ತೀವ್ರ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಆಗಸ್ಟ್ 27ರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ...[65 ಟಿಎಂಸಿಯಲ್ಲಿ 50 ಟಿಎಂಸಿ ಕೊಟ್ಟರೆ ಉಳಿಯುವುದೆಷ್ಟು!?]
ಚಳವಳಿ ಹಾದಿ ಹಿಡಿಯಲಾಗಿದೆ
'ಮೂರು ತಿಂಗಳಿನಿಂದ ತಮಿಳುನಾಡಿಗೆ 43 ಟಿಎಂಸಿ ನೀರು ಹರಿದಿದೆ. ಆದರೆ, ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ 7.5 ಟಿಎಂಸಿ ನೀರು ಸಿಕ್ಕಿದೆ. ಕಾವೇರಿ ಅಚ್ಚುಕಟ್ಟು ವ್ಯಾಪ್ತಿ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿರುವುದರಿಂದ ಒತ್ತಡ ಹೇರಲು ಚಳವಳಿ ಹಾದಿ ಹಿಡಿಯಲಾಗಿದೆ' ಎಂದು ಕುಮಾರಸ್ವಾಮಿ ಹೇಳಿದರು.
ಅಧಿಕ ನೀರನ್ನು ಹರಿಸಲಾಗಿದೆ
'ಕರ್ನಾಟಕ ಸರ್ಕಾರ ನ್ಯಾಯಮಂಡಳಿಯ ತೀರ್ಪಿಗೂ ಮೀರಿ ಅಧಿಕ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಿದೆ. ಅಲ್ಲದೆ, ಬೇಸಿಗೆ ಅವಧಿಯಲ್ಲಿ ಕಾವೇರಿ ಕೊಳ್ಳದ ರೈತರಿಗೆ ಕುಡಿಯಲು 4 ಟಿಎಂಸಿ ನೀರು ಉಪಯೋಗಿಸಿಕೊಳ್ಳಲಾಗಿದೆ' ಎಂದು ಕುಮಾರಸ್ವಾಮಿ ಹೇಳಿದರು.
ಮೌನ ವಹಿಸಿದರೆ ಸವಾರಿ ಮಾಡುವರು
'ತಮಿಳುನಾಡು ಮುಖ್ಯಮಂತ್ರಿ 22 ಟಿಎಂಸಿ ನೀರನ್ನು ಬೆಳೆಗಳಿಗೆ ಬಳಸಿಕೊಂಡಿದ್ದಾರೆ ಎಂದು ಸುಳ್ಳು ಅರ್ಜಿ ಸಲ್ಲಿಸಿದ್ದಾರೆ. 50.52 ಟಿಎಂಸಿ ನೀರು ಬಿಡಲು ಸೂಚನೆ ನೀಡಿ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈಗಲೂ ನಾವು ಮೌನ ವಹಿಸಿದರೆ ನಮ್ಮ ಮೇಲೆ ಸವಾರಿ ಮಾಡುತ್ತಾರೆ' ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಕಾಗೋಡು ಹೇಳಿಕೆಗೆ ಖಂಡನೆ
'ನೀರೇನು ಅಂಗಡಿಯಲ್ಲಿ ತರಕಾರಿ ತಂದ ಹಾಗೇನು?' ಎಂಬ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆಯನ್ನು ಖಂಡಿಸಿದ ಕುಮಾರಸ್ವಾಮಿ ಅವರು, 'ಸ್ಪೀಕರ್ ಆಗಿದ್ದಾಗ ಒಂದು ರೀತಿ, ಸಚಿವರಾದ ನಂತರ ಮತ್ತೊಂದು ರೀತಿ ವರ್ತಿಸುವುದನ್ನು ಬಿಟ್ಟು ಕಾಗೋಡು ತಿಮ್ಮಪ್ಪ ತಮ್ಮ ವಯಸ್ಸು ಮತ್ತು ಅನುಭವಕ್ಕೆ ತಕ್ಕಂತೆ ಮಾತನಾಡಬೇಕು' ಎಂದು ಹೇಳಿದರು.
ಡಿಕೆಶಿ ವಿರುದ್ಧ ವಾಗ್ದಾಳಿ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, 'ಕೃಷಿ ಮತ್ತು ನೀರಾವರಿ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲದ ವ್ಯಕ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿದೆ. ಅಂತಹ ವ್ಯಕ್ತಿಗಳಿಗೆ ಉಸ್ತುವಾರಿ ವಹಿಸಿದರೆ ಬೆಳೆಗಳಿಗೆ ನೀರು ಎಲ್ಲಿ ಸಿಗುತ್ತದೆ?' ಎಂದು ಪ್ರಶ್ನಿಸಿದರು.