ಕಿಕ್ಕಿರಿದ ಅಭಿಮಾನಿಗಳ ನಡುವೆ ಜಾಗ್ವಾರ್ ಧ್ವನಿಸುರಳಿ ಬಿಡುಗಡೆ
ಮಂಡ್ಯ, ಸೆಪ್ಟೆಂಬರ್ 3: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅಭಿನಯಿಸಿರುವ ಚಿತ್ರ ಜಾಗ್ವಾರ್'ನ ಧ್ವನಿಸುರಳಿ ಬಿಡುಗಡೆ ಅಭಿಮಾನಿಗಳು, ಜನಸಾಗರದ ಮಧ್ಯೆ ಮಂಡ್ಯದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.
ಸಿನಿಮಾ ನಟ-ನಟಿಯರ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಾಗ್ವಾರ್ ಧ್ವನಿಸುರುಳಿಯನ್ನು ನೆರೆದಿದ್ದ ಜನಸ್ತೋಮದ ಮಧ್ಯೆ ಚಿತ್ರದ ನಾಯಕ ನಿಖಿಲ್ ಕುಮಾರ್ ಬಿಡುಗಡೆ ಮಾಡಿದರು. ಒಂದಷ್ಟು ವಿಭಿನ್ನತೆ ಕಾರ್ಯಕ್ರಮದಲ್ಲಿ ಕಂಡು ಬಂದಿತು.
ಧ್ವನಿಸುರಳಿ ಬಿಡುಗಡೆಗಾಗಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ವೇದಿಕೆ ಏರಿದ್ದರು. ಚಿತ್ರದ ನಾಯಕ ನಿಖಿಲ್ ಗೌಡ ಅಲ್ಲಿಯವರೆಗೂ ಕಾಣಿಸಿಕೊಂಡಿರಲಿಲ್ಲ. ಚಿತ್ರದ ನಾಯಕ ಎಲ್ಲೋ ಕಾಣೆಯಾಗಿದ್ದಾರೆ, ಎಲ್ಲಿದ್ದೀಯಾ ವೇದಿಕೆಗೆ ಬಾ ಎಂದು ಕುಮಾರಸ್ವಾಮಿ ಕೂಗಿದ ನಂತರ ಜನರ ಮಧ್ಯದಲ್ಲೇ ಇದ್ದ ನಿಖಿಲ್ ಗೌಡ, ನಾನು ಪ್ರೀತಿಯ ಜನರ ಮಧ್ಯೆಯೇ ಇದ್ದೇನೆ ಎಂದು ತಿಳಿಸಿದರು.[ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]
ನಂತರ ಜನರ ಮಧ್ಯದಲ್ಲೇ ಆಡಿಯೋ ಬಿಡುಗಡೆ ಮಾಡುವುದಾಗಿ ಇಚ್ಛೆ ವ್ಯಕ್ತಪಡಿಸಿದರು. ಅದಕ್ಕೆ ಕುಮಾರಸ್ವಾಮಿ ದಂಪತಿ ಸಹಮತ ವ್ಯಕ್ತಪಡಿಸಿದರಲ್ಲದೆ, ಅವರೂ ಜನರ ಮಧ್ಯಕ್ಕೇ ತೆರಳಿ ಆಡಿಯೋ ಬಿಡುಗಡೆಯನ್ನು ವಿಶೇಷವಾಗಿ ನಡೆಸುವುದರೊಂದಿಗೆ ಎಲ್ಲರ ಗಮನ ಸೆಳೆದರು.
ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 75 ರೈತ ಕುಟುಂಬಕ್ಕೆ ಪರಿಹಾರ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಚಿತ್ರದ ನಿರ್ದೇಶಕ ಎ. ಮಹದೇವ್, ಚಿತ್ರಕಥೆ ಬರೆದಿರುವ ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್, ಜಗಪತಿಬಾಬು, ತಮನಾ ಸೇರಿದಂತೆ ಇಡೀ ಚಿತ್ರ ತಂಡವೇ ವೇದಿಕೆಯಲ್ಲಿತ್ತು.[ಟ್ರೆಂಡಿಂಗ್ ಆಗ್ತಿದೆ 'ಜಾಗ್ವಾರ್' ಚಿತ್ರದ ಈ ರೊಮ್ಯಾಂಟಿಕ್ ಸಾಂಗ್]
ರಾಜಮೌಳಿ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರ ಕಥೆಯನ್ನಾಧರಿಸಿ ನಿರ್ದೇಶಕ ಎ.ಮಹದೇವ್ ಆಕ್ಷನ್- ಕಟ್ ಹೇಳಿದರೆ, ಸಿನಿಮಾದಲ್ಲಿ ನಿಖಿಲ್ ಹಾಗೂ ದೀಪ್ತಿಸತಿ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಜಾಗ್ವಾರ್ ಆಡಿಯೋ ಪೆನ್ ಡ್ರೈವ್ ನಲ್ಲಿ ಸಿಗಲಿದೆ. ಆ ನಿಟ್ಟಿನಲ್ಲಿ ಲಹರಿ ವೇಲು ಅವರು ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ನಿಖಿಲ್ ಅಭಿನಯದ ಸಿನಿಮಾಕ್ಕೆ ಬೋಲ್ಟ್ ಕ್ಯಾಮೆರಾ ಕೈಚಳಕವಿದೆ, ಈ ಸಿನಿಮಾಕ್ಕೆ ಎಸ್.ಎಸ್. ತಮನ್ ಸಂಗೀತವಿದೆ. ಒಟ್ಟಾರೆ ವಿಭಿನ್ನ ಮತ್ತು ವಿಶಿಷ್ಟವಾಗಿ ನಡೆದ ಧ್ವನಿ ಸುರಳಿ ಬಿಡುಗಡೆ ಸಮಾರಂಭಕ್ಕೆ ಕಿಕ್ಕಿರಿದು ಜನ ಸೇರಿದ್ದು, ಗಮನಾರ್ಹವಾಗಿತ್ತು.