ನಾಗಮಂಗಲದಲ್ಲಿ ಸಿಲಿಂಡರ್ ಸ್ಪೋಟದಿಂದ ಮನೆ ಭಸ್ಮ
ಮಂಡ್ಯ, ಜುಲೈ 31: ಅಡುಗೆಗೆ ಬಳಸುತ್ತಿದ್ದ ಸಿಲಿಂಡರ್ ಸ್ಪೋಟಗೊಂಡು ಮನೆಯೊಳಗಿದ್ದ ವಸ್ತುಗಳೆಲ್ಲ ನಾಶವಾದ ಘಟನೆ ನಾಗಮಂಗಲ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡಿದ್ದು, ನಂತರ ಸಿಲಿಂಡರ್ ಸ್ಪೋಟಗೊಂಡಿದ್ದು ಸ್ಫೋಟದಲ್ಲಿ ಮನೆ ಸಂಪೂರ್ಣ ಜಖಂಗೊಂಡಿದೆ.
ಗ್ರಾಮದ ನಿವಾಸಿ ದೇವರಾಜೇಗೌಡ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಎಲ್ಲವನ್ನು ಕಳೆದುಕೊಂಡು ದೇವರಾಜೇಗೌಡರ ಇಡೀ ಕುಟುಂಬ ಬೀದಿ ಪಾಲಾಗಿದೆ.
ನವದೆಹಲಿ: ಟೀ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ, ಐವರು ಸಾವು
ಮನೆಯಲ್ಲಿ ಭಾನುವಾರ ಮಧ್ಯಾಹ್ನ ಕುಟುಂಬದವರೆಲ್ಲಾ ಊಟ ಮಾಡುತ್ತಿದ್ದ ವೇಳೆ ಅಡುಗೆ ಮನೆಯಲ್ಲಿನ ಗ್ಯಾಸ್ ಒಲೆಯ ಮೇಲೆ ಸಾಂಬಾರು ಬಿಸಿ ಮಾಡಲು ಇಡಲಾಗಿತ್ತು. ಆದರೆ ಸಿಲಿಂಡರಿಗೆ ಅಳವಡಿಸಲಾಗಿದ್ದ ರೆಗ್ಯುಲೇಟರ್ ಹೊರಬಂದು ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದೆ.
ತಕ್ಷಣ ಎಲ್ಲರೂ ಮನೆಯಿಂದ ಹೊರ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಸಿಲಿಂಡರ್ ಸ್ಪೋಟಗೊಂಡಿದ್ದು, ಪರಿಣಾಮ ಮನೆ ಜಖಂಗೊಂಡಿದ್ದಲ್ಲದೆ ಹೊತ್ತಿ ಉರಿದಿದೆ. ಇದರಿಂದಾಗಿ ಮನೆಯಲ್ಲಿದ್ದ 50 ಸಾವಿರ ಕೊಬ್ಬರಿ, 5 ಸಾವಿರ ತೆಂಗಿನಕಾಯಿ, 100ಕ್ಕೂ ಹೆಚ್ಚು ಪಿವಿಸಿ ಪೈಪ್ಗಳು, 10 ಚೀಲ ರಾಗಿ, 5 ಚೀಲ ಭತ್ತ, ಮಂಚ, ಕುರ್ಚಿ ಸೇರಿದಂತೆ ಗೃಹೋಪಯೋಗಿ ವಸ್ತುಗಳು, ಜಮೀನಿನ ಮತ್ತು ಇತರೆ ಪ್ರಮುಖವಾದ ಅಗತ್ಯ ದಾಖಲೆಗಳು, 40 ಸಾವಿರ ರೂ. ನಗದು ಮತ್ತು 400 ಗ್ರಾಂ ಚಿನ್ನದ ಒಡವೆಗಳು ಬೆಂಕಿಗೆ ಆಹುತಿಯಾಗಿವೆ.
ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತಾದರೂ ಗ್ರಾಮಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ವೇಳೆಗೆ ಮನೆಯ ಬಹುತೇಕ ಭಾಗ ಸುಟ್ಟು ಭಸ್ಮವಾಗಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರಿಂದ ಪಕ್ಕದ ಮನೆಗಳಿಗೆ ಬೆಂಕಿ ಹರಡಿ ಆಗಬಹುದಾಗಿದ್ದ ಅನಾಹುತ ತಪ್ಪಿದಂತಾಗಿದೆ.