ಮಂಡ್ಯದ ತಣ್ಣೀರುಬಾವಿಯಲ್ಲಿ ಬಿಸಿನೀರು!
ಮಂಡ್ಯ, ಸೆಪ್ಟೆಂಬರ್ 28: ಮಂಡ್ಯದಲ್ಲಿ ಕಾವೇರಿ ಕಾವು ಪಸರಿಸಿದೆ. ಕಾವೇರಿ ನೀರನ್ನು ಉಳಿಸಿಕೊಳ್ಳಲಾಗದಿದ್ದಕ್ಕೆ ಆಕ್ರೋಶದಿಂದ ಜನ ಮಾತ್ರವಲ್ಲ ನೆಲ ಜಲವೂ ಕುದಿಯುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ನಗರದ ಗುತ್ತಲು ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರ ವುಡ್ ವರ್ಕ್ಸ್ ಮಾಲೀಕ ವೆಂಕಟೇಶ್ ಎಂಬುವರ ಮನೆ ಆವರಣದ ಬಾವಿಯು ಬಿಸಿ ನೀರನ್ನು ಹೊರಹಾಕುತ್ತಿದೆ.
ವೆಂಕಟೇಶ್ ಅವರಿಗೆ ಸೇರಿದ ಮನೆ ಆವರಣದಲ್ಲಿ 60 ವರ್ಷಗಳ ಹಿಂದೆ ಬಾವಿಯನ್ನು ತೆಗೆಸಲಾಗಿತ್ತು. ಇಲ್ಲಿಯವರೆಗೂ ಅದೇ ನೀರನ್ನು ಉಪಯೋಗಿಸಲಾಗುತ್ತಿದೆ. ಸದ್ಯ ಬಾವಿಯಲ್ಲಿ ಸುಮಾರು 35 ಅಡಿ ನೀರು ಇದೆ. ಸೋಮವಾರ ಮಧ್ಯಾಹ್ನ ಬಾವಿಯಲ್ಲಿ ಬಿಸಿ ನೀರು ಕಂಡುಬಂತು. ಬಿಸಿಲ ತಾಪ ಹೆಚ್ಚಾಗಿರುವ ಕಾರಣ ನೀರು ಸಹಜವಾಗಿಯೇ ಬಿಸಿಯಾಗಿರಬಹುದು ಎಂದು ಜನ ಅದಕ್ಕೆ ಸೊಪ್ಪು ಹಾಕಲಿಲ್ಲ.[ಮಂಗಳೂರು : ಬಾವಿಯಿಂದ ಬಿಸಿನೀರ ಬುಗ್ಗೆ, ಜನರಿಗೆ ಕುತೂಹಲ]
ಮಂಗಳವಾರ ಬೆಳಗ್ಗೆ ಮತ್ತೆ ಬಾವಿಯ ನೀರನ್ನು ತೆಗೆದು ನೋಡಿದಾಗ ಬಾವಿಯಲ್ಲಿನ ನೀರು ಶೇ. 70ರಷ್ಟು ಬಿಸಿಯಾಗಿದ್ದುದು ಕಂಡುಬಂತು. ತಕ್ಷಣ ವೆಂಕಟೇಶ್ ಅವರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರು. ಮಂಡಳಿಯ ಅಧಿಕಾರಿಗಳು ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.[ಬಾವಿ ನೀರೇನೋ ಆರಿತು, ಆದರೆ ಯಾಕೆ ಹಾಗಾಯಿತು?]
ಇತ್ತ ವಿಷಯ ತಿಳಿದು ಜನ ಅಚ್ಚರಿಯಿಂದ ಬಾವಿಯತ್ತ ಬರತೊಡಗಿದ್ದಾರೆ. ನಗರಸಭಾ ಸದಸ್ಯ ಅನಿಲ್ ಅವರೂ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಬಾವಿಯಲ್ಲಿ ಬಿಸಿ ನೀರು ಕಾಣಿಸಿಕೊಂಡಿರುವುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಸಂಶೋಧನೆ ನಡೆದ ಬಳಿಕವಷ್ಟೆ ನೀರು ಬಿಸಿಯಾಗಲು ಕಾರಣ ಏನು ಎಂಬುದು ಪತ್ತೆಯಾಗಬೇಕಿದೆ.