ಸಕ್ಕರೆ ನಾಡಲ್ಲಿ ಹೈಅಲರ್ಟ್, ಕೆಆರ್ಎಸ್ಗೆ ಬಿಗಿಭದ್ರತೆ
ಮಂಡ್ಯ, ಆಗಸ್ಟ್ 06 : ಮೈಸೂರಿನ ಜೆಎಂಎಫ್ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್ ಸ್ಪೋಟದ ಬಳಿಕ, ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಕೃಷ್ಣ ರಾಜ ಸಾಗರ ಅಣೆಕಟ್ಟೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಈ ನಡುವೆ ಶನಿವಾರ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಿಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದವು. ಆ.15ರಂದು ನಡೆಯಲಿರುವ 69ನೇ ಸ್ವಾತಂತ್ರ್ಯೋತ್ಸವದಲ್ಲೂ ದುಷ್ಕೃತ್ಯ ಎಸಗಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಎಲ್ಲಾ ರಾಜ್ಯಗಳಿಗೂ ಮಾಹಿತಿ ನೀಡಿರುವುದರಿಂದ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. [ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?]
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ಕುಮಾರ್ ರೆಡ್ಡಿ ಅವರು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಿದ್ದಾರೆ. ಶ್ವಾನದಳ ಹಾಗೂ ಸ್ಫೋಟಕ ಪತ್ತೆ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಶ್ರೀರಂಗಪಟ್ಟಣ, ಕೆ.ಆರ್.ಎಸ್. ಹಾಗೂ ಪ್ರವಾಸಿತಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದೆ. [ಬಕ್ಕ ಬರಿದಾದ ಕೆಆರ್ಎಸ್, ಕೊಡಗಿನಲ್ಲಿ ಮಳೆ ಸಿಂಚನ]
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಯಾಲಯ ಸಂಕೀರ್ಣ, ಉಪ ನೋಂದಣಾಧಿಕಾರಿಗಳ ಕಚೇರಿ, ಕ್ರೀಡಾಂಗಣ, ರೈಲು ಹಾಗೂ ಬಸ್ ನಿಲ್ದಾಣ, ಬಿಎಸ್ಎನ್ಎಲ್ ಕಚೇರಿ, ಅಂಚೆ ಕಚೇರಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಚೇರಿಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಒಟ್ಟಾರೆ ಮಂಡ್ಯದಲ್ಲಿ ಎಚ್ಚರಿಕೆ ವಹಿಸಲಾಗಿದೆ. [ಅಸ್ಸಾಂ ಉಗ್ರರ ದಾಳಿಯಲ್ಲಿ ಕೋಲಾರದ ಯೋಧ ಹುತಾತ್ಮ]