ಎಚ್ಡಿಕೆ ಸರಣಿ ಅಮಾವಾಸ್ಯೆ ಪೂಜೆಯ ಹಿಂದಿನ ಸಂಕಲ್ಪವೇನು?
ಮೈಸೂರು, ಜೂನ್ 25: ಪ್ರತಿ ಹುಣ್ಣಿಮೆಗೆ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೂ, ಅಮಾವಾಸ್ಯೆಗೆ ಮಂಡ್ಯದ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕಾಲಭೈರವೇಶ್ವರಸ್ವಾಮಿ ದೇಗುಲಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿರುವ ಹೆಚ್.ಡಿ.ಕುಮಾರ ಸ್ವಾಮಿ ದಂಪತಿ ಈ ಬಾರಿಯ ಅಮಾವಾಸ್ಯೆಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಆದಿಚುಂಚನಗಿರಿ ಕಾಲಭೈರವೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಪ್ರತಿ ಅಮಾವಾಸ್ಯೆಗೆ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿರುವುದರಿಂದ ಕುಮಾರಸ್ವಾಮಿ ದಂಪತಿ ಆಗಮಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತಂತೆ ಮಾತನಾಡಿದ ಅವರು, ಈ ವರ್ಷದವಾದರೂ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ತುಂಬುವಂತೆ ಶ್ರೀ ಕಾಲಭೈರವೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. ಆದರೆ ಅವರ ಸಂಕಲ್ಪಗಳು ರಾಜಕೀಯ ಕುರಿತಾಗಿರುವುದು ಎಂಬುದರಲ್ಲಿ ಅನುಮಾನವಿಲ್ಲ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗುವ ಸಂಕಲ್ಪ ಅವರದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದೆಡೆ ಪಕ್ಷದ ಸಂಘಟನೆ ಮತ್ತೊಂದು ಕಡೆ ದೇವರ ಮೊರೆ ಹೋಗುತ್ತಿರುವ ಅವರು ರಾಜ್ಯದಲ್ಲಿ ಜೆಡಿಎಸ್ನ್ನು ಅಧಿಕಾರಕ್ಕೆ ತರಲೇ ಬೇಕೆಂಬ ಹಠಕ್ಕೆ ಬಿದ್ದಿರುವುದಂತು ಸತ್ಯ. ಹೀಗಾಗಿಯೇ ಕಾಲಭೈರವೇಶ್ವರನಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ಪ್ರತಿ ಅಮಾವಾಸ್ಯೆಯಂದು ನೆರವೇರಿಸುತ್ತಾ ಬಂದಿದ್ದಾರೆ.
ಕಳೆದ ಎರಡು ಅಮಾವಾಸ್ಯೆಗಳಲ್ಲಿ ಆದಿಚುಂಚನಗಿರಿ ಕ್ಷೇತ್ರದ ಶ್ರೀಕಾಲಭೈರವೇಶ್ವರ ಸ್ವಾಮಿ ಸನ್ನಿಧಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಸಹಿತ ಆಗಮಿಸಿದ ಕುಮಾರಸ್ವಾಮಿ ವಿವಿಧ ಪೂಜೆಗಳನ್ನು ನೆರವೇರಿಸಿದ್ದಾರೆ. ಈ ಬಾರಿ ಶನಿವಾರ ಎಳ್ಳಮವಾಸ್ಯೆಯಾದ ಮೂರನೇ ಅಮಾವಾಸ್ಯೆಯಲ್ಲಿ ಪೂಜಾ ವಿಧಿ ವಿಧಾನಗಳು, ಹೋಮ- ಹವನಗಳನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರವೇರಿಸಿದ್ದಾರೆ.