ನಿಶ್ಚಿತಾರ್ಥವಾಗಿದ್ದ ಮಂಡ್ಯದ ಯುವತಿ ಡೆಂಗ್ಯೂಗೆ ಬಲಿ
ಮಂಡ್ಯ, ಜುಲೈ 6: ಎರಡು ವಾರಗಳ ಹಿಂದೆಯಷ್ಟೆ ನಿಶ್ಚಿತಾರ್ಥ ಮುಗಿಸಿಕೊಂಡಿದ್ದ ಯುವತಿಯೊಬ್ಬಳು ಮದುವೆಯಾಗಿ ದಾಂಪತ್ಯ ಜೀವನದ ಕನಸು ಕಾಣುತ್ತಿದ್ದಾಗಲೇ ಡೆಂಗ್ಯೂ ಜ್ವರ ಆಕೆಯನ್ನು ಬಲಿತೆಗೆದುಕೊಂಡ ಘಟನೆ ಜಿಲ್ಲೆಯ ಬಿದರಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ(ಜು.5) ನಡೆದಿದೆ.
ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?
ಬಿದರಹೊಸಹಳ್ಳಿ ಗ್ರಾಮದ ನಿವಾಸಿ ದೊಡ್ಡತಾಯಮ್ಮ-ಚೌಡೇಗೌಡ ದಂಪತಿ ಪುತ್ರಿ ರೇಖಾ (22) ಎಂಬಾಕೆಯೇ ಡೆಂಗ್ಯೂ ಜ್ವರಕ್ಕೆ ಬಲಿಯಾದ ದುರ್ದೈವಿ.
ಈಕೆಗೆ 15 ದಿನಗಳ ಹಿಂದೆಯಷ್ಟೆ ವಿವಾಹದ ನಿಶ್ಚಿತಾರ್ಥ ನಡೆದಿದ್ದು, ಮದುವೆಗೆ ದಿನಾಂಕ ಗೊತ್ತು ಮಾಡಿಕೊಂಡು ಮದುವೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಂಭ್ರಮದಲ್ಲಿ ಹೆತ್ತವರಿದ್ದರು.
ರೇಖಾ ಕೂಡ ನವ ಬದುಕಿನ ಹೊಂಗಸನುಗಳಲ್ಲಿದ್ದರು. ಹೀಗಿರುವಾಗಲೇ ಕಳೆದೈದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಮನೆಯವರು ಮಾಮೂಲಿ ಜ್ವರವಿರಬಹುದು. ಸರಿ ಹೋಗುತ್ತದೆ ಎಂದು ಔಷಧಿ ನೀಡಿದ್ದರಾದರೂ ಯಾವುದೇ ಪ್ರಯೋಜನವಾಗದೆ ಇದ್ದಾಗ ಮಂಡ್ಯದ ಶಿಲ್ಪ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣದಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಜ್ವರ ಉಲ್ಬಣವಾಗಿದ್ದರಿಂದ ಯಾವುದೇ ರೀತಿಯ ಚಿಕಿತ್ಸೆ ನೀಡಿದರೂ ಪ್ರಯೋಜನ ಕಾಣದೆ ಜು.5 ರಂದು ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಶವದ ಅಂತ್ಯಸಂಸ್ಕಾರವು ಸ್ವಗ್ರಾಮದ ರುದ್ರಭೂಮಿಯಲ್ಲಿ ನೆರವೇರಿದೆ. ನಿಶ್ಚಿತಾರ್ಥ ಮುಗಿಸಿ ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.