ರೆಬೆಲ್ ಸ್ಟಾರ್ ಮಾಯ : ಅಂಬಿ ಕುರ್ಚಿಗೆ ಹಕ್ಕೊತ್ತಾಯ
ರೈತರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಅಂಬರೀಶ್ ಅವರಿಗೆ ಮನವಿ ಕೊಡಲು ರೈತ ಸಂಘ ಕಾರ್ಯಕರ್ತರು ತೆರಳಿದ್ದರು. ಶಾಸಕರು ಇಲ್ಲದ್ದರಿಂದ ಅವರ ಹಾಟ್ಸೀಟ್ಗೆ ಹಕ್ಕೊತ್ತಾಯದ ಮನವಿ ನೀಡಿ 'ನಾಲಾಯಕ್ ಶಾಸಕ' ಎಂದು ಜರಿದರು.
ಮಂಡ್ಯ, ನವೆಂಬರ್ 4 : ರೈತರ ಸಮಸ್ಯೆಗಳ ಕುರಿತು ರೆಬೆಲ್ ಸ್ಟಾರ್ ರನ್ನು ಬಳಿ ಚರ್ಚಿಸಿ ಮನವಿ ಕೊಡಲು ಹೋದರೆ ಅಂಬಿಯೇ ಇಲ್ಲ. ಹೀಗಾಗಿ ರೈತ ಸಂಘದ ಕಾರ್ಯಕರ್ತರು ಅವರ ಕುರ್ಚಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಕ್ಷೇತ್ರದ ಶಾಸಕ ಅಂಬರೀಶ್ ಅವರಿಗೆ ಮನವಿ ಕೊಡಲು ರೈತ ಸಂಘ ಕಾರ್ಯಕರ್ತರು ತೆರಳಿದ್ದರು. ಶಾಸಕರು ಇಲ್ಲದ್ದರಿಂದ ಅವರ ಹಾಟ್ಸೀಟ್ಗೆ ಹಕ್ಕೊತ್ತಾಯದ ಮನವಿ ನೀಡಿ 'ನಾಲಾಯಕ್ ಶಾಸಕ' ಎಂದು ಕಿಡಿಕಾರಿದ ಘಟನೆ ಗುರುವಾರ ನಡೆಯಿತು.
ಅಧಿವೇಶನದಲ್ಲಿ ರೈತರ ಸಮಸ್ಯೆ ಚರ್ಚಿಸುವ ಸಂಬಂಧ ರೈತ ಸಂಘ ಗುರುವಾರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿತ್ತು. ಅದರಂತೆ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿರುವ ಮಾಜಿ ಸಚಿವ ಅಂಬರೀಶ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿ, ಕಚೇರಿಗೆ ಹೋದರು. ಆದರೆ, ಅಂಬರೀಶ್ ಇರಲಿ, ಕಚೇರಿಯ ಸಿಬ್ಬಂದಿ ಕೂಡ ಯಾರೂ ಇರಲಿಲ್ಲ.[ಬಳಸಿ ಬಿಸಾಡೋಕೆ ನಾನೇನು ಚಪ್ಲೀನಾ : ಶಾಲುಸುತ್ತಿ ಬಾರಿಸಿದ ಅಂಬಿ]
ಇದರಿಂದ ಆಕ್ರೋಶಗೊಂಡ ರೈತರು ಅಂಬರೀಶ್ ಅವರಿ ಕುರ್ಚಿಗೇ ಹಕ್ಕೊತ್ತಾಯದ ಮನವಿ ನೀಡಿ, ರಾಜ್ಯದಲ್ಲಿ ಮಂಡ್ಯ ತಾಲೂಕಿನಲ್ಲೇ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಒಂದು ದಿನವೂ ಶಾಸಕ ಅಂಬರೀಶ್ ಅವರು ಚರ್ಚಿಸಿಲ್ಲ ಎಂದು ಕಿಡಿಕಾರಿದರು.
ಮೈಶುಗರ್ ಆರಂಭಿಸಬೇಕು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣವನ್ನು ಬಟವಾಡೆ ಮಾಡಿಸಬೇಕು, ಕಬ್ಬಿನ ಕಾರ್ಖಾನೆಗಳಿಗೆ ಸರಬರಾಜು ಮಾಡಿದ, ಕಬ್ಬಿನ ಹಣವನ್ನು ಸಹ ಕೊಡಿಸಬೇಕು. ಹೀಗೆ ವಿವಿಧ ಬೇಡಿಕೆಗಳನ್ನು ಹೊತ್ತು ಬಂದ ಕಾರ್ಯಕರ್ತರಿಗೆ ತಣ್ಣೀರು ಎರಚಿದಂತಾಗಿದೆ.['ಅಂಬರೀಶ್, ಶ್ರೀನಿವಾಸ್ ಪ್ರಸಾದ್ ರನ್ನು ಜೆಡಿಎಸ್ ಗೆ ಆಹ್ವಾನಿಸಿಲ್ಲ']
ಜಿಲ್ಲೆಯ ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಮದ್ದೂರಿನಲ್ಲಿ ಆಯಾ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬೊಮ್ಮೇಗೌಡ, ಮುಖಂಡರಾದ ಹನಿಯಂಬಾಡಿ ನಾಗರಾಜು, ವೆಂಕಟೇಶ್ ಇತರರು ಭಾಗವಹಿಸಿದ್ದರು.