ಅಂಬರೀಶ್ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಮನವಿ
ಮಂಡ್ಯದ ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ಎಂಬುವರು ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ದೂರು ನೀಡಿದ್ದಾರೆ.
ಮಂಡ್ಯ,ಏಪ್ರಿಲ್ 29: ಮಂಡ್ಯದ ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ಎಂಬುವರು ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ದೂರಿನ ಪ್ರತಿಯನ್ನು ಮಾಧ್ಯಮದವರಿಗೆ ನೀಡಿರುವ ಅವರು, ಅಂಬರೀಶ್ ಅವರು ಸಚಿವ ಸ್ಥಾನ ಕಳೆದುಕೊಂಡ ನಂತರ ವಿಧಾನಸಭೆಯ ಕಲಾಪಗಳಿಗೆ ನಿರಂತರ ಗೈರು ಮತ್ತು ಪರಿಣಾಮಕಾರಿಯಾಗಿ ಶಾಸಕ ಸ್ಥಾನ ನಿರ್ವಹಿಸದೆ ಸಂಪೂರ್ಣ ನಿಷ್ಕ್ರಿಯರಾಗಿರುವುದರಿಂದ ಮಂಡ್ಯ ತಾಲೂಕು ಕ್ಷೇತ್ರದ ಜನರ ಕುಂದು ಕೊರತೆಗಳನ್ನು ಆಲಿಸುವವರು ಇಲ್ಲದಂತಾಗಿದೆ. ಜನಪ್ರತಿನಿಧಿಯಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ವಜಾ ಮಾಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವರಾಗಿ ಕಾಲದಲ್ಲಿಯೂ ಕಲಾಪಗಳಿಗೆ ಹೋಗದೆ ಕಾಲ ಕಳೆದ ಮಾಜಿ ಸಚಿವ ಅಂಬರೀಶ್ ಅವರು, ತಮ್ಮ ರಾಜಕೀಯ ಅವಧಿಯಲ್ಲಿ ಲೋಕಸಭೆ, ವಿಧಾನಸಭೆಯ ಕಲಾಪಗಳಲ್ಲಿ ಭಾಗಿಯಾಗಿ ಚರ್ಚೆ ಮಾಡಿದ್ದು ಅಪರೂಪವೇ..
ಜನ ಮತ ಹಾಕಿ ಗೆಲ್ಲಿಸಿ ಜನನಾಯಕನನ್ನಾಗಿ ಮಾಡಿದರೂ ಚುನಾವಣೆ ಸಂದರ್ಭ, ಯಾವುದಾದರೂ ಸಮಾರಂಭ ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಜನರ ನಡುವೆ ಬಂದು ಪಕ್ಕಾ ಜನಪ್ರತಿನಿಧಿಯಾಗಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿದ್ದು ವಿರಳವೇ..
ಮಂಡ್ಯ ಜನರ ಮತದಿಂದ ಆಯ್ಕೆಯಾಗಿ ವಿಧಾನಸಭೆಗೆ ಹೋದರೂ ಸ್ಥಳೀಯ ಜನರ ಕಷ್ಟಸುಖಗಳನ್ನು ಆಲಿಸಲೇ ಇಲ್ಲ. ಕಾವೇರಿ ಹೋರಾಟಗಳಲ್ಲೂ ತುಟಿಬಿಚ್ಚಲಿಲ್ಲ. ವಸತಿ ಸಚಿವರಾಗಿದ್ದಾಗ ಅಲ್ಲಿ ಇಲ್ಲಿ ಕಾಣಿಸಿಕೊಂಡರಾದರೂ ಆ ಖಾತೆಯನ್ನು ಸಮರ್ಪಕವಾಗಿ ಬಳಸಿಕೊಂಡು ರಾಜಕೀಯವಾಗಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವಲ್ಲಿ ವಿಫರಾದರು.
ಕೆಲವೇ ಕೆಲವು ಆಪ್ತರನ್ನು ಮಾತ್ರ ತನ್ನ ಪಕ್ಕಕ್ಕಿಟ್ಟುಕೊಂಡು ಉಳಿದವರನ್ನು ದೂರವಿಟ್ಟರು. ಪರಿಣಾಮ ಮಂಡ್ಯ ಕಾಂಗ್ರೆಸ್ನಲ್ಲಿ ತಿಕ್ಕಾಟಗಳು ಆರಂಭವಾದವು. ಅಂಬರೀಶ್ ಇರುವಾಗಲೇ ನಟಿ, ಮಾಜಿ ಸಂಸದೆ ರಮ್ಯಾ ಅವರನ್ನು ಮಂಡ್ಯದಲ್ಲಿ ಬೆಳೆಸುವ ಪ್ರಯತ್ನಗಳು ಮತ್ತೊಂದೆಡೆ ಪಕ್ಷದಲ್ಲಿ ನಡೆಯಿತು.
ಆಗಲೂ ಅಂಬರೀಶ್ ತಲೆಕೆಡಿಸಿಕೊಳ್ಳಲಿಲ್ಲ. ಯಾವಾಗ ಸಚಿವ ಸ್ಥಾನ ಕೈಬಿಟ್ಟು ಹೋಯಿತೋ ಗರಂ ಆದರು. ಅಷ್ಟೇ ಅಲ್ಲ ಸಂಪೂರ್ಣ ರಾಜಕೀಯ ಚಟುವಟಿಕೆಯಿಂದ ದೂರವಾಗಿ ಬಿಟ್ಟರು. ಸಚಿವ ಸ್ಥಾನವಿಲ್ಲದಿದ್ದರೂ ಶಾಸಕನಾಗಿ ತನ್ನ ಕ್ಷೇತ್ರದ ಜನರ ಕುಂದು ಕೊರತೆಗಳನ್ನು ಆಲಿಸಬಹುದಿತ್ತು. ಅದನ್ನು ಕೂಡ ಮಾಡಲಿಲ್ಲ.
ಈ ನಡುವೆ ಮಂಡ್ಯಕ್ಕೆ ಬರುವುದೇ ಅಪರೂಪವಾಯಿತು. ಬಂದರೂ ಆಪ್ತರ ಮನೆಗೆ ಭೇಟಿ ನೀಡಿ ಹೋಗತೊಡಗಿದರು. ಕೆಲವು ಸಮಯಗಳ ಹಿಂದೆ ಸರ್ಕಾರಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮವನ್ನು ತನ್ನ ಆಪ್ತನ ಮನೆಯಲ್ಲಿ ಮಾಡಿ ಕೈತೊಳೆದುಕೊಂಡು ಹೋದರಾದರೂ ಅದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.
ಸಾರ್ವಜನಿಕ ಸಭೆ ಸಮಾರಂಭ ಹಾಗೂ ಪಕ್ಷದ ಚಟುವಟಿಕೆಗಳಿಂದ ದೂರವಿರುವುದು ಕಂಡು ಬರುತ್ತಿದ್ದು, ರಾಜಕೀಯವಾಗಿ ಆಸಕ್ತಿ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇಷ್ಟಕ್ಕೂ ತನ್ನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗದಂತಾಗಿದೆ.