ಪಾಂಡವಪುರದಲ್ಲಿ ಧರ್ಮದ ವಿಚಾರದಲ್ಲಿ ದ್ವೇಷ: ಒಬ್ಬನ ಹತ್ಯೆ
ಒಂದೇ ಕೋಮಿನ ಇಬ್ಬರ ಮಧ್ಯೆ ಧರ್ಮದ ವಿಚಾರವಾಗಿ ದ್ವೇಷ ಬೆಳೆದು ಕೊಲೆಗೆ ಕಾರಣವಾದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ
ಮಂಡ್ಯ, ಫೆಬ್ರವರಿ 11: ಒಂದೇ ಕೋಮಿನ ಎರಡು ಸಮುದಾಯದ ಯುವಕರ ಮಧ್ಯೆ ಧರ್ಮದ ವಿಚಾರವಾಗಿ ನಡೆದ ಜಗಳ ಒಬ್ಬನ ಸಾವಿನೊಂದಿಗೆ ಅಂತ್ಯಗೊಂಡ ಘಟನೆ ಪಾಂಡವಪುರದಲ್ಲಿ ಶುಕ್ರವಾರ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಗಳ ತಾರಕಕ್ಕೇರಿ ಯುವಕನೊಬ್ಬನನ್ನು ಜನನಿಬಿಡ ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದನ್ನು ನೋಡಿದ ಜನ ಭಯಗೊಂಡಿದ್ದಾರೆ.
ಪಾಂಡವಪುರದ ನಿವಾಸಿ ಮುನವರ್ ಪಾಷಾ ಅಲಿಯಾಸ್ ಪೆಟ್ರೋಲ್ ಮುನ್ನ ಎಂಬುವರ ಪುತ್ರ ಲುಕ್ಮಾನ್ (19) ಹತ್ಯೆಗೀಡಾದವನು. ಆರೋಪಿ ಸುಹೇಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಜೊತೆಗಿದ್ದ ವಸೀಂ, ಕೋಂಡಾ ಪಾಷಾ ಮತ್ತು ಖಲೀಲ್ ಎಂಬುವರು ತಲೆಮರೆಸಿಕೊಂಡಿದ್ದಾರೆ.[ಮಂಡ್ಯದ ಅಶೋಕ್ ಪೈ ಹತ್ಯೆ ಯತ್ನ ಪ್ರಕರಣದ 11 ಆರೋಪಿಗಳ ಬಂಧನ]
ಮೃತ ಲುಕ್ಮಾನ್ ಸುನ್ನಿ ಪಂಗಡದವನಾಗಿದ್ದು, ಈತನನ್ನು ಕೊಲೆ ಮಾಡಿದ ಸುಹೇಲ್ ಮತ್ತು ಇತರರು ತಬ್ಲಿಕ್ ಪಂಗಡದವರಾಗಿದ್ದಾರೆ. ಲುಕ್ಮಾನ್ ಮತ್ತು ಆತನ ಗೆಳೆಯರನ್ನು ಸುಹೇಲ್ ತಂಡದವು ತಬ್ಲಿಕ್ ಪಂಗಡಕ್ಕೆ ಸೇರಬೇಕು ಎಂದು ಒತ್ತಡ ಹಾಕುತ್ತಿದ್ದರು, ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಲುಕ್ಮಾನ್ ಮೇಲೆ ದ್ವೇಷ ಸಾಧಿಸಿ, ಹತ್ಯೆಗೆ ಸಂಚು ರೂಪಿಸಿದ್ದರು.
ಶುಕ್ರವಾರ ಬೆಳಗ್ಗೆ 10.30ರ ಸಮಯದಲ್ಲಿ ನಾಗಮಂಗಲ ರಸ್ತೆಯಲ್ಲಿರುವ ಕೆಎಸ್ ಆರ್ ಟಿಸಿ ಡಿಪೋ ಮುಂಭಾಗದ ದರ್ಗಾ ಬಳಿ ಜಕ್ಕನಹಳ್ಳಿಯಲ್ಲಿ ವೆಲ್ಡಿಂಗ್ ಕೆಲಸಕ್ಕೆ ಹೋಗುತ್ತಿದ್ದಾಗ ಆರೋಪಿಗಳು ಲುಕ್ಮಾನ್ ನನ್ನು ಅಡ್ಡಗಟ್ಟಿದ್ದಾರೆ. ವಸೀಂ ಎಂಬಾತ ಬಿಗಿಯಾಗಿ ಹಿಡಿದುಕೊಂಡರೆ, ಸುಹೇಲ್ ಎಂಬಾತ ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.[ಸೈಟ್ ಮೇಲೆ ಸೈಟು ಹೊಡೆದಿದ್ದ ಕಾಳೇಗೌಡನ ಆಸ್ತಿ ವಿವರ]
ತಕ್ಷಣ ನೆರೆದ ಜನ ಲುಕ್ಮಾನ್ ಗೆ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಲುಕ್ಮಾನ್ ಮರಣೋತ್ತರ ಪರೀಕ್ಷೆ ನಡೆಸಿ, ಮೃತ ದೇಹವನ್ನು ವಾರಸುದಾರರಿಗೆ ನೀಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಎಎಸ್ ಪಿ ಸವಿತಾ, ಡಿವೈಎಸ್ ಪಿ ವಿಶ್ವನಾಥ್, ಸರ್ಕಲ್ ಇನ್ ಸ್ಪೆಕ್ಟರ್ ಪ್ರಭಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡ ಪಟ್ಟಣ ಠಾಣೆ ಪೊಲೀಸರು ಆರೋಪಿ ಸುಹೇಲ್ ನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡವರ ಪತ್ತೆಗೆ ಬಲೆ ಬೀಸಲಾಗಿದೆ.