ಶ್ರೀರಂಗಪಟ್ಟಣ ಸಿಡಿಎಸ್ ನಾಲಾ ಏರಿ ಕಳಪೆ ಸಾಬೀತು!
ಶ್ರೀರಂಗಪಟ್ಟಣ, ಸೆಪ್ಟೆಂಬರ್ 1: ತಾಲೂಕಿನ ನೆಲಮನೆ ಗ್ರಾಮದ ಬಳಿ ಎರಡು ತಿಂಗಳ ಹಿಂದಷ್ಟೇ ದುರಸ್ತಿ ಮಾಡಿದ್ದ ಸಿಡಿಎಸ್ ನಾಲಾ ಏರಿ ಬುಧವಾರ ಸುರಿದ ಮಳೆಗೆ ಒಡೆದು ಹೋಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.
ನಾಲೆಯ ಏರಿಗೆ ಹಾಕಿದ್ದ ಕಬ್ಬಿಣ ಮತ್ತು ಕಾಂಕ್ರೀಟ್ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದು ಕಳಪೆ ಕಾಮಗಾರಿ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಮಗಾರಿ ನಡೆಸುವಾಗ ಮಣ್ಣು ಹಾಕಿ ರೋಲ್ ಹೊಡೆದು, ಬಿಗಿ ಮಾಡದಿದ್ದರಿಂದ ಮಳೆ ಸುರಿದ ಹಿನ್ನೆಲೆಯಲ್ಲಿ ನಾಲಾ ಏರಿ ಒಡೆದು ಪಕ್ಕದಲ್ಲಿದ್ದ ಜಮೀನುಗಳ ಮಣ್ಣು ಸಹ ಕೊಚ್ಚಿ ಹೋಗಿದೆ. ತಮ್ಮ ಜಮೀನುಗಳ ಏರಿ ಮತ್ತು ಮಣ್ಣು ಕೊಚ್ಚಿ ಹೋಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಶ್ರೀರಂಗಪಟ್ಟಣದ ವಿಕಲಚೇತನ ದಯಾಮರಣ ಕೋರಿದ್ದೇಕೆ?]
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಡಿಎಸ್ ನಾಲೆಯ 72, 73, 74, 75 ಮೈಲಿಯ ಟೂಬ್ ಬಳಿ ಸುಮಾರು 15 ಮೀಟರ್ ವರೆಗೂ ನಾಲೆಯ ಏರಿಗೆ ಹಾಕಿದ್ದ ಕಾಂಕ್ರೀಟ್, ಕಬ್ಬಿಣ ಸೇರಿದಂತೆ ಮಣ್ಣು ಕೊಚ್ಚಿ ಹೋಗಿದೆ. ಅಲ್ಲದೆ 75 ಮೈಲಿಯ ನಂತರ ಇದೇ ರೀತಿ ನಾಲೆ ಏರಿಗಳು ಕೊಚ್ಚಿ ಹೋಗಿವೆ. ಗುತ್ತಿಗೆದಾರರು ನಾಲಾ ಆಧುನೀಕರಣದ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.[ಪರಮೇಶ್ವರರಿಗೆ ಹಾರದ ಬದಲು ರೈತರ ಕಪ್ಪು ಬಾವುಟ!]
ಸಿಡಿಎಸ್ ನಾಲಾ ಆಧುನೀಕರಣದ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿರುವ ನೀರಾವರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ನೆಲಮನೆ ಗ್ರಾಮಸ್ಥರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಧುನೀಕರಣದ ಹೆಸರಿನಲ್ಲಿ ನೀರಾವರಿ ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಂಡು, ರೈತರಿಗೆ ಅಗಿರುವ ನಷ್ಟಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.