ಸುಪ್ರೀಂ ಆದೇಶದ ವಿರುದ್ಧ ಮಂಡ್ಯದಲ್ಲಿ ಬೊಗಸೆ ಚಳವಳಿ
ಮಂಡ್ಯ, ಸೆಪ್ಟೆಂಬರ್ 30 : ತಮಿಳುನಾಡಿಗೆ ಕೆಆರ್ಎಸ್ನಿಂದ 36 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ಮತ್ತು ಮೂರೇ ದಿನದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವ ನಿಲುವನ್ನೂ ಪ್ರಕಟಿಸಿರುವ ಕೇಂದ್ರ ಸರ್ಕಾರದ ಘೋರ ತೀರ್ಮಾನವನ್ನು ಪ್ರತಿರೋಧಿಸಿ ಮಹಾಲಯ ಅಮಾವಾಸ್ಯೆ ದಿನವಾದ ಶುಕ್ರವಾರ ಮಂಡ್ಯದಲ್ಲಿ ವಿವಿಧ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ನಡೆಸಿದವು.
ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ವಿವಿಧ ಸಂಘಟನೆಗಳ ಮುಖಂಡರು ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಮಾವೇಶಗೊಂಡು ಸುಪ್ರೀಂ ತೀರ್ಪು ಮತ್ತು ಮಂಡಳಿ ರಚನೆಯ ನಿಲುವಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ನ ಕರ್ನಾಟಕ ವಿರೋಧಿ ಧೋರಣೆಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. [ನೀರು ಬಿಡದೆ ಜೈಲಿಗೆ ಹೋಗಲು ಸಿದ್ಧರಾಗಿ : ಮಾದೇಗೌಡ]
ಜಿಲ್ಲಾದ್ಯಂತ ರೈತರು ಮಹಾಲಯ ಅಮಾವಾಸ್ಯೆ ಹಬ್ಬದ ಆಚರಣೆಯ ನಡುವೆಯೂ ಇಂತಹದೊಂದು ಕರಾಳ ತೀರ್ಪು ಹೊರಬಿದ್ದಿದ್ದು, ಹಬ್ಬದ ಸಂಭ್ರಮವನ್ನು ಬದಿಗೊತ್ತಿ ಬೀದಿಗಿಳಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವುದರ ಮೂಲಕ ಕಾವೇರಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ವ್ಯಕ್ತಪಡಿಸಿದರು. ['ನಾರಿಮನ್ ಕರ್ನಾಟಕ ಪರ ವಾದ ಮಾಡಲ್ಲ ಎಂದು ಹೇಳಿಲ್ಲ!']
ಬೊಗಸೆ ನೀರಿನ ಚಳವಳಿ : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯ ಪ್ರಸ್ತಾಪದ ಉದ್ದೇಶವನ್ನು ತೀವ್ರವಾಗಿ ಖಂಡಿಸಿ ಬೊಗಸೆ ನೀರು ಚಳವಳಿಯನ್ನು ನಡೆಸಲಾಯಿತು.
ಇದುವರೆಗೆ ಬೆಳೆ, ಕೈಗಾರಿಕೆ ಸೇರಿದಂತೆ ಇತರೆ ಬಳಕೆಗೆ ಬೇಕಾದ ನೀರನ್ನು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ನಿಂದ ಕೇಳಿ ಪಡೆಯುತ್ತಿದ್ದೆವು. ಮಂಡಳಿ ರಚನೆಯಾದರೆ ಬೊಗಸೆ ನೀರಿಗೂ ಕೇಂದ್ರ ಸರ್ಕಾರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಅಮಾನವೀಯ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಆಕ್ರೋಶ ವ್ಯಕ್ತಪಡಿಸಿದರು. [ಕಾವೇರಿ ನೀರು ಬಿಡಿ, ಇಲ್ಲ ಪರಿಣಾಮ ಎದುರಿಸಿ : ಸುಪ್ರೀಂ]
ಕಳೆದ 125 ವರ್ಷಗಳಿಂದ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಾ ಬಂದಿದೆ. 1924ರ ಒಪ್ಪಂದ, 1991 ಮತ್ತು 2007ರ ನ್ಯಾಯಾಧೀಕರಣ ತೀರ್ಪಿನಲ್ಲೂ ಕೂಡ ನಮಗೆ ನ್ಯಾಯ ದೊರಕಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಮನೆಯ ಒಡೆವೆಯನ್ನು ಅಡವಿಟ್ಟು ಕಟ್ಟಿಸಿದ ಕೃಷ್ಣರಾಜಸಾಗರ ಅಣೆಕಟ್ಟು ನಾಡಿನ ಕೈತಪ್ಪಿ ಹೋಗುತ್ತಿರುವುದು ಘೋರ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಗಾಯದ ಮೇಲೆ ಬರೆ : ಸುಪ್ರೀಂಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಂಡಳಿ ರಚನೆಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದರೂ ಕೇಂದ್ರವೇ ಸ್ವಯಂಪ್ರೇರಣೆಯಿಂದ ಮಂಡಳಿ ರಚಿಸಿ ಕೆಆರ್ಎಸ್ ಅಣೆಕಟ್ಟೆಯನ್ನು ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿದೆ. ರಾಜ್ಯ ಬಿಜೆಪಿ ಸಂಸದರು ಇದರ ವಿರುದ್ಧ ಹೋರಾಟ ನಡೆಸಬೇಕು. ಪ್ರಧಾನಿ ನರೇಂದ್ರ ಮೋದಿಗೆ ಒತ್ತಡ ಹೇರುವಂತೆ ಎಂದು ಪ್ರತಿಭಟನಾಕಾರರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದರು. [ಅ.1ರಿಂದ 6ರವರೆಗೆ ಕಾವೇರಿ ನೀರು ಹರಿಸಿ : ಸುಪ್ರೀಂ ಕೋರ್ಟ್]
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರೈತಸಂಘದ ಹನಿಯಂಬಾಡಿ ನಾಗರಾಜು, ಹನಿಯಂಬಾಡಿ ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಾಳೇನಹಳ್ಳಿ ತಿಮ್ಮೇಗೌಡ, ರೈತಸಂಘ ಪ್ರತ್ಯೇಕ ಬಣದ ಬೋರಾಪುರ ಶಂಕರೇಗೌಡ, ಇಂಡುವಾಳು ಚಂದ್ರಶೇಖರ್, ಕೆ.ಎಸ್.ಸುಧೀರ್ಕುಮಾರ್, ದಿನೇಶ್, ಎಲೆಚಾಕನಹಳ್ಳಿ ಮಹೇಶ್, ಹಿಂದೂ ಪರ ಸಂಘಟನೆಗಳ ಮುಖಂಡರಾದ ಸಿ.ಟಿ.ಮಂಜುನಾಥ್, ಸಿದ್ದರಾಜುಗೌಡ ಮತ್ತಿತರರು ಪಾಲ್ಗೊಂಡಿದ್ದರು.