ಲಬೋಲಬೋ ಎಂದು ಹೊಯ್ಕೊಂಡ ಮಂಡ್ಯದ ರೈತರು!
ಕರ್ನಾಟಕದ ಕಾವೇರಿ ಕೊಳ್ಳದ ಅಣೆಕಟ್ಟುಗಳು ಬರಿದಾಗಿವೆ ಎಂದು ಕೇಂದ್ರ ತಜ್ಞರ ಸಮಿತಿ ವರದಿ ಸಲ್ಲಿಸಿದ್ದರೂ ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದ್ದು ಮಂಡ್ಯದ ರೈತರನ್ನು ಮತ್ತೆ ಬಡಿದೆಬ್ಬಿಸಿದೆ.
ಮಂಡ್ಯ, ಅಕ್ಟೋಬರ್ 18 : ಮುಂದಿನ ಆದೇಶದವರೆಗೂ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡುತ್ತಿದ್ದಂತೆ ಮಂಡ್ಯದಲ್ಲಿ ಮಂಗಳವಾರ ಸಂಜೆ ಮತ್ತೆ ಕಾವೇರಿ ಆಕ್ರೋಶ ಭುಗಿಲೆದ್ದಿದೆ.
ಸುಪ್ರೀಂ ಆದೇಶ ಹೊರಬೀಳುತ್ತಿದ್ದಂತೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ವಿ.ಸಿ. ಉಮಾಶಂಕರ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಜಲ ಆಯೋಗದ ತಜ್ಞರ ಸಮಿತಿ, ಕಾವೇರಿ ಕೊಳ್ಳದಲ್ಲಿ ನೀರಿಲ್ಲ ಎಂದು ವರದಿ ಸಲ್ಲಿಸಿದ್ದರೂ ನೀರು ಹರಿಸಿ ಎಂದು ನ್ಯಾಯಮೂರ್ತಿಗಳು ಆದೇಶ ನೀಡಿರುವುದು ಮಲತಾಯಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ರಾಜು ಮಾತನಾಡಿ, ಸುಪ್ರೀಂ ಕೋರ್ಟ್ ಯಾವಾಗಲೂ ಕರ್ನಾಟಕದ ವಿರುದ್ಧವೇ ಆದೇಶ ನೀಡುತ್ತಿದ್ದು, ಗಾಯದ ಮೇಲೆ ಬರೆ ಎಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಕೆ.ಆರ್.ಎಸ್.ನಿಂದ ನೀರನ್ನು ಹರಿಸಬಾರದು ಎಂದು ಒತ್ತಾಯಿಸಿದರು. [ನೀರು ಬಿಡಿ ಎಂದ ಸುಪ್ರೀಂ, ಯಸ್ ಯುವರ್ ಆನರ್ ಎಂದ ಕರ್ನಾಟಕ]
ಕೇಂದ್ರ ತಜ್ಞರ ಸಮಿತಿಯ ಅಧ್ಯಕ್ಷ ಜಿ.ಎಸ್. ಝಾ ಅವರು ಕರ್ನಾಟಕದಲ್ಲಿ ಬೆಳೆ ಇರಲಿ, ಕುಡಿಯುವ ನೀರಿಗೂ ತೊಂದರೆ ಇದೆ ಎಂದು ವರದಿ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಉತ್ತಮ ಪರಿಸ್ಥಿತಿ ಇಲ್ಲದಿದ್ದರೂ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ತಮಿಳುನಾಡಿಗೆ ನೀರು ಹರಿಸಿ ಎಂದು ಹೇಳುತ್ತಿರುವುದು ಯಾವ ಆಧಾರದ ಮೇಲೆ ಎಂದು ಖಾರವಾಗಿ ಪ್ರಶ್ನಿಸಿದರು. [ತೀರ್ಪು ವ್ಯತಿರಿಕ್ತವಾದರೆ ಉಗ್ರ ಹೋರಾಟ : ಮಾದೇಗೌಡ]
ಸುಪ್ರೀಂ ಕೋರ್ಟ್ ಯಾವಾಗಲೂ ತಮಿಳುನಾಡಿನ ಪರ ಆದೇಶ ನೀಡುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್ ಮತ್ತಿತರರು ಭಾಗವಹಿಸಿದ್ದರು. [ಮುಂದಿನ ವಿಚಾರಣೆ ತನಕ ನೀರು ಬಿಡಬೇಕು : ಸುಪ್ರೀಂ]