ಮಂಡ್ಯದಲ್ಲಿ ಕಾವೇರಿ ಜಲಸಂಗ್ರಾಮ ತಾತ್ಕಾಲಿಕ ಸ್ಥಗಿತ
ಮಂಡ್ಯ, ಸೆಪ್ಟೆಂಬರ್ 24 : ತಮಿಳುನಾಡಿಗೆ ಕೆ.ಆರ್.ಎಸ್.ನಿಂದ ನೀರು ಹರಿಸುವುದಿಲ್ಲ ಹಾಗೂ ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿರುವುದರಿಂದ ಕಳೆದ 18 ದಿನಗಳಿಂದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಸತ್ಯಾಗ್ರಹ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ.
ಚಳವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುವುದನ್ನು ದೃಢಪಡಿಸಿರುವ ಸಮಿತಿಯ ಅಧ್ಯಕ್ಷ ಜಿ.ಮಾದೇಗೌಡ ಅವರು, 28ರಂದು ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ನದಿ ನೀರು ಬಿಡುವ ಸಂಬಂಧ ವಿಚಾರಣೆ ಇದ್ದು, ಅಂದಿನ ಆದೇಶ ನೋಡಿ ಚಳವಳಿಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ. [ಜಾಣ್ಮೆಯ ನಡೆ : ರಂಗೋಲಿ ಕೆಳಗೆ ನುಸುಳಿದ ಕರ್ನಾಟಕ!]
ಪರಿಹಾರದ ಭರವಸೆ : ಕಾವೇರಿ ಜಲಾನಯನ ಪ್ರದೇಶಗಳಾದ ಕಬಿನಿ, ಹೇಮಾವತಿ, ಹಾರಂಗಿ ಹಾಗೂ ಕೆ.ಆರ್.ಎಸ್. ವ್ಯಾಪ್ತಿಯ ರೈತಾಪಿ ವರ್ಗ ಅನುಭವಿಸಿರುವ ಬೆಳೆಯ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಮಾದೇಗೌಡರು ತಿಳಿಸಿದರು.
ಕಾವೇರಿ ಗಲಭೆಯಲ್ಲಿ ಬಂಧಿತರಾಗಿರುವ ಎಲ್ಲ ಜನರನ್ನೂ ಬಿಡುಗಡೆ ಮಾಡುವುದರ ಜೊತೆಗೆ, ಅವರ ಮೇಲಿನ ಕೇಸುಗಳನ್ನು ವಾಪಸ್ಸು ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದ್ದು, ಮುಖ್ಯಮಂತ್ರಿಗಳ ಮನವಿ ಮೇರೆಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಚಳವಳಿ ವಾಪಸ್ಸು ಪಡೆಯಲು ತೀರ್ಮಾನ ಕೈಗೊಳ್ಳಲಾಯಿತು ಎಂದು ವಿವರಿಸಿದರು. [ಕಾವೇರಿಯಲ್ಲಿ ಹೋದ ಮಾನಕ್ಕೆ ತೇಪೆ ಹಚ್ಚಲು ಮುಂದಾದ ಬಿಜೆಪಿ]
18 ದಿನಗಳಲ್ಲಿ ಕಾವೇರಿ ವಿಚಾರವಾಗಿ ಜಲಸಂಗ್ರಾಮದಲ್ಲಿ ನಾಡಿನ ಎಲ್ಲಾ ವರ್ಗದ ಜನರು ಬೀದಿಗಿಳಿದು ಹೋರಾಟ ನಡೆಸಿದರು. ಜೊತೆಗೆ ನಗರದ ಸರ್.ಎಂ.ವಿ. ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿದ್ದ ಚಳವಳಿಯಲ್ಲಿ ಮಠಾಧೀಶರು, ಹಿರಿ-ಕಿರಿಯ ಸಾಹಿತಿಗಳು, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದರು, ತಂತ್ರಜ್ಞರು, ಸಮಾಜ ಸೇವಕರು, ಎಲ್ಲಾ ಪಕ್ಷದ ರಾಜಕೀಯ ಮುಖಂಡರು, ವಿಧಾನಸಭಾ, ಪರಿಷತ್ ಸದಸ್ಯರು, ವಿವಿಧ ಮಹಿಳಾ ಸಂಘಟನೆಗಳು, ಯುವ ಸಂಘಟನೆಗಳು, ಕಾಲೇಜು, ವಿದ್ಯಾರ್ಥಿಗಳು, ಅಧ್ಯಾಪಕರು, ರೈತರು, ವಾಣಿಜ್ಯೋದ್ಯಮಿಗಳು, ತಮಿಳು ಬಾಂಧವರು, ಕನ್ನಡಪ ಸಂಘಟನೆಗಳು ಸೇರಿದಂತೆ ಹಲವರು ಜಲಸಂಗ್ರಾಮದಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.