ಕಳ್ಳರ ಕೈ ಚಳಕ: ಮಂಡ್ಯದಲ್ಲಿ ಒಂದೇ ರಾತ್ರಿ 8 ದೇಗುಲದಲ್ಲಿ ಕಳವು
ಮಂಡ್ಯ, ಆಗಸ್ಟ್ 13: ಮಂಡ್ಯದಲ್ಲಿ 12 ಗಂಟೆ ಅವಧಿಯಲ್ಲಿ ಎಂಟು ದೇಗುಲದಲ್ಲಿ ಕಳವು ಮಾಡಲಾಗಿದೆ.
ಜಿಲ್ಲೆಯ ವಿವಿಧೆಡೆ ಇರುವ 6 ದೇವಾಲಯವನ್ನು ಗುರಿ ಮಾಡಿಕೊಂಡಿದ್ದ ದುಷ್ಕರ್ಮಿಗಳು ಹಣ, ಬೆಳ್ಳಿ ಒಡವೆ ಮತ್ತಿತರ ವಸ್ತುಗಳನ್ನು ಕಳೆದ ತಿಂಗಳು ಕಳವು ಮಾಡಿದ್ದರು.
ಈ ಪ್ರಕರಣ ಸಾರ್ವಜನಿಕರಿಗೆ ಇನ್ನೂ ನೆನಪಿರುವಾಗಲೇ ದುಷ್ಕರ್ಮಿಗಳು ಮತ್ತೆ ಕೈ ಚಳಕ ತೋರಿಸಿದ್ದಾರೆ.
ಹಳೇ ಎಲೆಕೆರೆಯ ಬಸವೇಶ್ವರ ದೇವಸ್ಥಾನ, ಎತ್ತಗದ ಹಳ್ಳಿಯ ಹೊಂಬಾಳಮ್ಮ, ಪಟ್ಟಲದಮ್ಮ ದೇವಸ್ಥಾನ, ಅಘಾಲಯದ ಭೈರವೇಶ್ವರ ದೇವಸ್ಥಾನ, ಮದುವಿನಕೋಡಿಯ ಆಂಜನೇಯಸ್ವಾಮಿ ದೇವಾಲಯ, ಕೆ.ಆರ್.ಪೇಟೆ ತಾಲೂಕಿನ ರಂಗನಾಥಪುರ ಗ್ರಾಮ ದೇವಾಲಯ, ನಗುವಿನಹಳ್ಳಿ ಗೇಟ್ ಸಮೀಪದ ಆಂಜನೇಯಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ ತಾಲ್ಲೂಕು ಮರಳಗಾಳ ಬಳಿಯ ಮಾರಲಿಂಗೇಶ್ವರ ದೇವಾಲಯದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. [ಸಕ್ಕರೆ ನಾಡಲ್ಲಿ ಹೈಅಲರ್ಟ್, ಕೆಆರ್ ಎಸ್ ಗೆ ಬಿಗಿಭದ್ರತೆ]
ಅಪರಿಚಿತ ವ್ಯಕ್ತಿಗಳು ಎಂಟು ದೇವಾಲಯಗಳ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣ, ತಾಳಿ, ಬೆಳ್ಳಿ ಒಡವೆಗಳು ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಎಲ್ಲ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಒಂದೇ ಗ್ಯಾಂಗ್ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.