ಕೆ.ಆರ್.ಪೇಟೆ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಂಧನ
ಕೆ.ಆರ್.ಪೇಟೆ, ಫೆಬ್ರವರಿ. 24 : ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಮುದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಾಮನಹಳ್ಳಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಕಾಮನಹಳ್ಳಿ ಮಂಜುನಾಥ್ ಎಂಬುವವರ ಪುತ್ರ ಪ್ರದೀಪ್(22) ಬಂಧಿತ ಕಾಮುಕನಾಗಿದ್ದಾನೆ. ಈತ ಕಾಮನಹಳ್ಳಿಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ ಎಸ್ಎಸ್ಎಲ್ ಸಿ ಓದುತ್ತಿದ್ದ ಬಾಲಕಿಯ ಪರಿಚಯ ಮಾಡಿಕೊಂಡಿದ್ದನಲ್ಲದೆ, ಆಕೆಯೊಂದಿಗೆ ಸಲುಗೆಯಿಂದ ಮಾತನಾಡುತ್ತಾ ಮದುವೆಯಾಗುವುದಾಗಿ ನಂಬಿಸಿದ್ದನು.[ಕೆ.ಆರ್.ಪೇಟೆ: ಕಾಮುಕ ವೃದ್ದನಿಂದ ಬಾಲಕಿ ಮೇಲೆ ಅತ್ಯಾಚಾರ]
ಫೆಬ್ರವರಿ 21ರಂದು ಶಾಲೆಯಿಂದ ಊಟಕ್ಕೆಂದು ಹೊರಬಂದ ವೇಳೆ ಆಕೆಯನ್ನು ಪುಸಲಾಯಿಸಿ ತನ್ನ ಬೈಕಿಗೆ ಹತ್ತಿಸಿಕೊಂಡು ಅಂಬಿಗರಹಳ್ಳಿಯ ಸಂಗಮದ ಸಮೀಪ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಿನ್ನನ್ನು ಮದುವೆಯಾಗುತ್ತೇನೆ ಭಯಪಡಬೇಡ ಎಂದು ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಶಾಲೆ ಬಳಿ ಬಿಟ್ಟು ಪರಾರಿಯಾಗಿದ್ದನು.
ಆ ನಂತರ ನಡೆದ ವಿಚಾರವನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಬಾಲಕಿಯ ಪೋಷಕರು ಅತ್ಯಾಚಾರ ಮಾಡಿದ ಪ್ರದೀಪನ ಪೋಷಕರ ಬಳಿ ಹೋಗಿ ಕೇಳಿದ್ದು ಈ ಸಂದರ್ಭ ಅವರು ಉಡಾಫೆಯ ಉತ್ತರ ನೀಡಿದ್ದರು.
ಇದರಿಂದ ಬೇಸತ್ತ ಬಾಲಕಿಯ ಪೋಷಕರು ನ್ಯಾಯಕ್ಕಾಗಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು. ತಕ್ಷಣ ಸಬ್ಇನ್ಸ್ಪೆಕ್ಟರ್ ಗಿರೀಶ್ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರದೀಪನನ್ನು ಬಂಧಿಸಿ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.