ಕಾವೇರಿ ನಮ್ಮದು ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಸಾಥ್
ಮಂಡ್ಯ, ಸೆ. 9: ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪದಿಂದಾಗಿ ಇಂದು ಕರ್ನಾಟಕದ ಕಾವೇರಿ ಕೊಳ್ಳದ ರೈತರು ಹಾಗೂ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ರೈತರಿಗೆ ಬೆಂಬಲ ವ್ಯಕ್ತಪಡಿಸಲು ಕಾವೇರಿ ಕೊಳ್ಳದ ಅನೇಕ ಕಡೆ ಆಮ್ ಆದ್ಮಿ ಪಕ್ಷ, ಕರ್ನಾಟಕ ಘಟಕ ಪ್ರತಿಭಟನೆಯಲ್ಲಿ ಭಾಗವಹಿಸಿತು.
ರಾಜ್ಯಾದ್ಯಂತ ಕಾವೇರಿ ನದಿ ನೀರಿನ ವಿಷಯವಾಗಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಹಾಗೂ ಲಜ್ಜೆಗೇಡಿತನಕ್ಕೆ ವಿರುದ್ಧವಾಗಿ ಭಾರೀ ಸಂಖ್ಯೆಯಲ್ಲಿ ತಿರುಗಿಬಿದ್ದಿದ್ದು, ಮಾನ್ಯ ಮುಖ್ಯಮಂತಿಗಳಾದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಈಗಲಾದರೂ ನಿದ್ದೆಯಿಂದ ಎದ್ದು ರಾಜ್ಯದ ರೈತರ ಹಾಗೂ ಜನರ ಹಿತ ಕಾಯುವ ಕೆಲಸ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.
ರಾಜ್ಯ ಸರ್ಕಾರ ಈ ಕೂಡಲೇ ಸುಪ್ರೀಂ ಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಜವಾಬ್ದಾರಿಯುತವಾಗಿ ಕರ್ನಾಟಕ ನೀರಿನ ಲಭ್ಯತೆಯ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಸಿ ರಾಜ್ಯದ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ. ಈ ಇಡೀ ಸಂಕಷ್ಟಕ್ಕೆ ಕಾರಣರಾದ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ ತತಕ್ಷಣ ರಾಜೀನಾಮೆ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತದೆ.
ಚನ್ನಪಟ್ಟಣದಲ್ಲೂ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಸಾತನೂರು ವೃತ್ತ ಹಾಗೂ ಗಾಂಧಿ ಭವನದ ಎದುರು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಮದ್ದೂರಿನಲ್ಲೂ ಆಮ್ ಆದ್ಮಿ ಪಾರ್ಟಿ-ಮದ್ದೂರು ಘಟಕದ ಕಾರ್ಯಕರ್ತರು ಮದ್ದೂರು ಘಟಕದ ಉಸ್ತುವಾರಿ ರಾಮಣ್ಣ ನೇತೃತ್ವದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಮದ್ದೂರು ಬಸ್ ನಿಲ್ದಾಣ ಹಾಗೂ ಕೊಲ್ಲಿ ವೃತ್ತದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯ ಘಟಕದ ಮುಖಂಡರು, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ನಡೆಸಿದರು.
ಮಂಡ್ಯದ ಜಿಲ್ಲಾ ಸಂಚಾಲಕರಾದ ಕಿರಣ್. ಕೆ ಗೌಡರವರ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ-ಮಂಡ್ಯದ ಕಾರ್ಯಕರ್ತರು ಕೆ.ಎಂ.ಎಫ್ ಎದುರು, ಗೆಜ್ಜನಗೆರೆ ಹಳ್ಳಿ, ಮೈಶುಗರ್ ಕಾರ್ಖಾನೆ ವೃತ್ತ, ಮಹಾವೀರ ವೃತ್ತ, ಸಂಜಯ್ ವೃತ್ತ ಹಾಗೂ ಡಿಸಿ ಕಚೇರಿ ವೃತ್ತ ಸೇರಿದಂತೆ ಹಲವಾರು ಕಡೆ ತಮ್ಮ ಪ್ರತಿಭಟನೆ ನಡೆಸಿದರು.