ರೋಮಾಂಚನಗೊಳಿಸಿದ ಜೋಡೆತ್ತಿನ ಗಾಡಿ ಓಟ
ಮಂಡ್ಯ, ಆಗಸ್ಟ್ 14 : ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆ ಪ್ರೇಕ್ಷಕರ ಮೈನವಿರೇಳಿಸಿತು. 80ಕ್ಕೂ ಹೆಚ್ಚು ಜೋಡಿ ಎತ್ತುಗಳು ಮತ್ತು ಒಂದು ಒಂಟಿ ಎತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಆನೆಕೆರೆ ಬೀದಿಯ ಶ್ರೀ ಕಾಳಿಕಾಂಬ ದೇವಾಲಯ ಮತ್ತು ಬಿಸಿಲು ಮಾರಮ್ಮ ದೇವಾಲಯ ಗೆಳೆಯರ ಬಳಗದ ವತಿಯಿಂದ ನಮ್ಮ ರಾಷ್ಟ್ರ, ನಮ್ಮ ಭಕ್ತಿ, ನಮ್ಮ ಮನರಂಜನೆ, ನಮ್ಮ ಸ್ಪರ್ಧೆ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ಚಿಕ್ಕಮಗಳೂರು, ಮಂಡ್ಯ, ಹುಣಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜೋಡಿ ಎತ್ತುಗಳು ಪಾಲ್ಗೊಂಡಿದ್ದವು.
ಎತ್ತಿನ ಗಾಡಿಗಳನ್ನು ಓಡಿಸಿಕೊಂಡು ಹೋಗುತ್ತಿದ್ದರೆ ಸ್ಪರ್ಧಾಳುಗಳಿಗೆ ನೆರೆದಿದ್ದ ಪ್ರೇಕ್ಷಕರು ಕೇಕೆ, ಶಿಳ್ಳೆ, ಕರತಾಡನದ ಮೂಲಕ ಹುರಿದುಂಬಿಸುತ್ತಿದ್ದರು. ಸ್ಪರ್ಧಾಳುಗಳು ತಮ್ಮ ಎತ್ತುಗಳಿಗೆ ಆಜ್ಞೆಗಳನ್ನು ಮಾಡುತ್ತಾ ಹುರುಪಿನಿಂದ ಎತ್ತಿನ ಗಾಡಿಗಳನ್ನು ಓಡಿಸುತ್ತಿದ್ದುದು ಪ್ರೇಕ್ಷಕರನ್ನು ರೋಮಾಂಚನಗೊಳಿಸುವಂತೆ ಮಾಡಿತ್ತು. ಈ ಸಂದರ್ಭ ನೆರೆದವರ ಕಿರುಚಾಟ, ಶಿಳ್ಳೆ ಕರತಾಡನ ಮುಗಿಲು ಮುಟ್ಟುತ್ತಿತ್ತು.
ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ 20 ಸಾವಿರ, ತೃತೀಯ 10 ಸಾವಿರ ಹಾಗೂ 7,500 ಸಮಾಧಾನಕರ ಬಹುಮಾನ ಮತ್ತು ಪಾಲ್ಗೊಂಡ ಸ್ಪರ್ಧಾಳುಗಳಿಗೆ ಪ್ರಶಸ್ತಿ, ಫಲಕ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡ ಡಾ. ಎಂ.ಎಸ್. ಸತ್ಯಾನಂದ, ಸರ್ಕಾರಿ ಪಶು ಚಿಕಿತ್ಸಾಲಯದ ವೈದ್ಯ ಡಾ. ಸುರೇಶ್, ಎತ್ತಿನ ಗಾಡಿ ಆಯೋಜಕರಾದ ನಾಗೇಶ್, ಪ್ರಮೋದ್, ಸಂದೀಪ್, ಅರುಣ್, ಮಹೇಶ್ ಇತರರು ಭಾಗವಹಿಸಿದ್ದರು.