ಮಡಿಕೇರಿ: ಹುತ್ತರಿ ಸಂಭ್ರಮಕ್ಕೆ ತಣ್ಣೀರೆರಚಿದ ವಾರ್ಧಾ
ಮಡಿಕೇರಿ, ಡಿಸೆಂಬರ್ 13: ಕೊಡಗಿನವರ ಸುಗ್ಗಿ ಹಬ್ಬ ಹುತ್ತರಿಯ ಸಂಭ್ರಮಕ್ಕೆ ವಾರ್ಧಾ ಚಂಡಮಾರುತ ತಣ್ಣೀರೆರೆಚಿದೆ. ಕವಿದ ಮೋಡ, ಸುರಿದ ಜಿಟಿಜಿಟಿ ಮಳೆ ಜನ ಆಚೆ ಬರದಂತೆ ಮಾಡಿದೆ.
ಮಂಗಳವಾರ ಮುಂಜಾನೆಯಿಂದಲೇ ಆರಂಭವಾಗಿರುವ ಜಿಟಿಜಿಟಿ ಮಳೆ ಮುಂಗಾರು ಮಳೆಯನ್ನು ನೆನಪಿಸುವಂತೆ ಮಾಡಿದೆ. ಸಂಪೂರ್ಣ ಕಾರ್ಮೋಡ ಕವಿದು, ಮಂಜು ಮುಸುಕಿರುವ ಕಾರಣದಿಂದ ಜನ ಮನೆಯಿಂದ ಆಚೆ ಬರಲು ಪರದಾಡುವಂತಾಗಿದೆ.[ಕರ್ನಾಟಕಕ್ಕೂ ತಟ್ಟಿದ ವಾರ್ಧಾ ಚಂಡಮಾರುತ ಭೀತಿ!]
ಮೈಕೊರೆಯುವ ಚಳಿ, ಜಿಟಿಜಿಟಿ ಮಳೆಯಿಂದಾಗಿ ಜನ ಬೇಸರಗೊಂಡಿದ್ದಾರೆ. ಈಗಾಗಲೇ ಭತ್ತದ ಗದ್ದೆಗಳು ಕೊಯ್ಲಿಗೆ ಬಂದಿದ್ದರೆ, ಕಾಫಿ ಹಣ್ಣಾಗುವ ಹಂತದಲ್ಲಿದೆ. ಈ ಸಂದರ್ಭ ಮಳೆ ಸುರಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಆದ್ದರಿಂದ ಕೊಡಗಿಗೆ ಫೆಬ್ರವರಿ ಅಥವಾ ಮಾರ್ಚಿನಲ್ಲಿ ಮಳೆ ಬಂದರೆ ಉತ್ತಮ. ಆದರೆ ಇಷ್ಟು ದಿನ ಬಾರದ ಮಳೆ ಈಗ ಬರುತ್ತಿದೆಯಲ್ಲ ಎಂಬ ಬೇಸರದ ನುಡಿ ಇಲ್ಲಿನ ಬೆಳೆಗಾರರದ್ದಾಗಿದೆ.
ಜೋರಾಗಿಯೂ ಬಾರದೆ, ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಹೊರಗೆ ಹೋಗಿ ಕೆಲಸ ಮಾಡುವರು ಗೊಣಗುತ್ತಿದ್ದಾರೆ. ಬಹಳಷ್ಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಬ್ಬಕ್ಕೆ ಮಳೆ ಬಂದಿರುವುದು ಬೇಸರ ತರಿಸಿದೆ. ಒಂದು ಕಡೆ ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚುವುದರೊಂದಿಗೆ ಬೆಳೆಗಾರರಿಗೆ ಸಂಕಟ ತಂದಿದೆ.
ಒಮ್ಮೆಗೆ ದಿಢೀರ್ ಸುರಿದು ಬಳಿಕ ಬಿಸಿಲು ಬಂದರೆ ಜನ ಖುಷಿ ಪಡುತ್ತಿದ್ದರು. ಆದರೆ ಜಿಟಿಜಿಟಿ ಸುರಿಯುತ್ತಿರುವುದರಿಂದ ಮನೆಯಿಂದ ಹೊರಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ.[ಇಂದು ಹುತ್ತರಿ ಹಬ್ಬ, ಮನೆಗೆ ಬಂದಳು ಧಾನ್ಯಲಕ್ಷ್ಮಿ!]
ಪಟಾಕಿ ವ್ಯಾಪಾರ ಠುಸ್: ಕೊಡಗಿನಲ್ಲಿ ಹುತ್ತರಿ ಹಬ್ಬಕ್ಕೆ ಪಟಾಕಿ ಸಿಡಿಸುತ್ತಾರೆ. ಹೀಗಾಗಿ ಅಲ್ಲಲ್ಲಿ ಪಟಾಕಿ ಮಳಿಗೆಗಳನ್ನು ತೆರೆದಿದ್ದಾರೆ. ಸಾಮಾನ್ಯವಾಗಿ ಹಬ್ಬದ ದಿನವಾದ ಇಂದು(ಮಂಗಳವಾರ) ಜನ ಖರೀದಿಸಲು ಮಳಿಗೆಯತ್ತ ತೆರಳುತ್ತಾರೆ. ಇದೀಗ ಮಳೆ ಸುರಿಯುತ್ತಿರುವುದರಿಂದ ಪಟಾಕಿ ವ್ಯಾಪಾರಕ್ಕೆ ಹಿನ್ನಡೆಯಾಗಿದೆ. ಮೊದಲೇ ಇಡೀ ವಾತಾವರಣ ತೇವವಾಗಿರುವುದರಿಂದ ಪಟಾಕಿಗಳು ಕೂಡ ಠುಸ್ ಎನ್ನುತ್ತಿವೆ. ಮಳೆ ಬರಬಹುದು ಎಂಬ ನಿರೀಕ್ಷೆಯೂ ಇಲ್ಲದೆ ಪಟಾಕಿ ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿಗಳು ಈಗ ಸಂಕಷ್ಟಕ್ಕೀಡಾಗಿದ್ದಾರೆ.