ಕೊಡಗಿನ ಗದ್ದೆ ಹಬ್ಬ ‘ಬೇಲ್ ನಮ್ಮೆ’ ವಿಶೇಷ ಗೊತ್ತಾ?
ಒಂದೆಡೆ ಜಿಟಿಜಿಟಿ ಮಳೆ, ಮತ್ತೊಂದೆಡೆ ಸುಯ್ಯೆಂದು ಬೀಸುವ ಕುಳಿರ್ಗಾಳಿ ಸಣ್ಣಗೆ ನಡುಕ ಹುಟ್ಟಿಸುತ್ತದೆ. ಅಲೆ ಅಲೆಯಾಗಿ ತೇಲಿ ಬರುವ ಸಾಂಪ್ರದಾಯಿಕ ಕೊಡವ ವಾಲಗ, ಆಗೊಮ್ಮೆ ಈಗೊಮ್ಮೆ ಹರಹೊಯ್ ಎಂಬ ಗದ್ದೆ ಉಳುಮೆ ಮಾಡುವ ರೈತನ ಸದ್ದು.
ಸೂಟು- ಬೂಟು ತೊಟ್ಟು ಸಭೆ, ಸಮಾರಂಭಗಳಲ್ಲಿ ಬಿಜಿಯಾಗಿರುತ್ತಿದ್ದ ಜನಪ್ರತಿನಿಧಿಗಳು, ತಮ್ಮ ದೈನಂದಿನ ಜಂಜಾಟವನ್ನೆಲ್ಲ ಬದಿಗೊತ್ತಿ ಅಪ್ಪಟ ರೈತರಾಗಿ, ಮುಖಂಡರು ಕೆಲವರು ನೇಗಿಲು ಹಿಡಿದು ಉಳುಮೆ ಮಾಡಿದರೆ, ಮತ್ತೆ ಕೆಲವರು ಪೈರು ಹಿಡಿದು ನಾಟಿ ಮಾಡುತ್ತಾರೆ.
ಈ ದೃಶ್ಯವನ್ನೆಲ್ಲ ನೋಡಬೇಕಾದರೆ ಕೊಡಗಿನ ನಾಪೋಕ್ಲು ಸಮೀಪದ ಬಿದ್ದಾಟಂಡ ಕುಟುಂಬಸ್ಥರ ಭತ್ತದ ಗದ್ದೆಯಲ್ಲಿ ಆ.14ರಂದು ನಡೆಯುವ 'ಬೇಲ್ ನಮ್ಮೆ 2016'ಕ್ಕೆ ಬರಲೇಬೇಕು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಪೋಕ್ಲು ಕೊಡವ ಸಮಾಜದ ಕ್ರೀಡಾ, ಸಾಂಸ್ಕೃತಿಕ ಮತ್ತು ಮನರಂಜನಾ ಕೂಟ ಹಾಗೂ ಬಿದ್ದಾಟಂಡ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. [ಕೊಡಗಿನಲ್ಲಿ ಕೈಕೊಟ್ಟ ಮುಂಗಾರು, ಆತಂಕದಲ್ಲಿ ಕೃಷಿಕರು]
ಇಷ್ಟಕ್ಕೂ 'ಬೇಲ್ ನಮ್ಮೆ'ನಾ ಇದೇನಪ್ಪಾ ಎಂಬ ಪ್ರಶ್ನೆ ಕಾಡಿರಬಹುದಲ್ಲವೆ? ಕನ್ನಡದಲ್ಲಿ 'ಗದ್ದೆ ಹಬ್ಬ' ಎಂಬ ಅರ್ಥ ನೀಡುತ್ತದೆ. ಈ ಹಬ್ಬವನ್ನು ಈಗ ಏಕೆ ಮಾಡಲಾಗುತ್ತಿದೆ ಎಂಬುದು ತಿಳಿಯುವ ಮುನ್ನ ಕೊಡಗಿನಲ್ಲಿ ನಡೆದು ಬಂದಿರುವ ಭತ್ತದ ಕೃಷಿಯ ಹಿಂದಿನ ದಿನಗಳನ್ನು ಮೆಲುಕು ಹಾಕಲೇಬೇಕು. [ಸತ್ಯವನ್ನೇ ಹೇಳುತ್ತೇವೆ: ಇದು ಕೆಸರು ಗದ್ದೆಯಲ್ಲ, ರಸ್ತೆ...]
ಭತ್ತದ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ
ಹಿಂದಿನ ಕಾಲದಲ್ಲಿ ಕೊಡಗಿನಲ್ಲಿ ಭತ್ತದ ಕೃಷಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿತ್ತು. ಆಗೆಲ್ಲ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯೂ ಇರಲಿಲ್ಲ. ಹೀಗಾಗಿ ಭತ್ತದ ಕೃಷಿಗೆ ಒತ್ತು ನೀಡುತ್ತಿದ್ದರು. ಅಷ್ಟೇ ಅಲ್ಲ, ಭತ್ತದ ಕೃಷಿಯನ್ನು ಆಧಾರವಾಗಿಟ್ಟುಕೊಂಡೇ ಹಬ್ಬ- ಹರಿದಿನಗಳನ್ನು ಹುಟ್ಟು ಹಾಕಿ ಅದರಂತೆ ಆಚರಿಸಿಕೊಂಡು ಬರುತ್ತಿದ್ದರು. ಈಗಲೂ ಬರಲಾಗುತ್ತಿದೆ.
ನೇಗಿಲು ಹಿಡಿದು ಗದ್ದೆಗಿಳಿಯುತ್ತಿದ್ದ ರೈತ
ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆಯೇ ನೇಗಿಲು ಹಿಡಿದು ಗದ್ದೆಗಿಳಿಯುತ್ತಿದ್ದ ರೈತ ಉಳುಮೆ, ನಾಟಿ ಹೀಗೆ ಕೃಷಿ ಚಟುವಟಿಕೆಯಲ್ಲಿಯೇ ನಿರತನಾಗುತ್ತಿದ್ದ. ತನ್ನ ಕೆಲಸ- ಕಾರ್ಯ ಸುಗಮವಾಗಿ ಸಾಗಲು ಹಾಗೂ ಕೆಲಸದ ಬಳಲಿಕೆಯನ್ನು ದೂರ ಮಾಡಲು ನಾಟಿ ಸಂದರ್ಭ ಒಯ್ಯ ಹಾಕುತ್ತಿದ್ದ.
ಭತ್ತದ ನಾಟಿ ನಡುವೆ ಹಾಡು, ಓಟ
ಗದ್ದೆಯಲ್ಲಿ ಒಬ್ಬ ಯಾವುದಾದರೂ ವಿಷಯದ ಬಗ್ಗೆ ಹಾಡು ಕಟ್ಟಿ ಹೇಳುತ್ತಿದ್ದರೆ, ಉಳಿದವರು ಇದಕ್ಕೆ ದನಿಗೂಡಿಸುತ್ತಿದ್ದರು. ಇದು ಹಾಸ್ಯಮಯವಾಗಿರುತ್ತಿತ್ತು. ಇದರಿಂದ ನಾಟಿ ಮಾಡುವ ಶ್ರಮವೂ ತಿಳಿಯುತ್ತಿರಲಿಲ್ಲ. ನಾಟಿ ಮುಗಿದ ನಂತರ ಗದ್ದೆಯಲ್ಲಿ ನಾಟ ಓಟ ಏರ್ಪಡಿಸಿ ಗೆದ್ದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು.
ಅಲ್ಲಿ ಲಾಭನಷ್ಟದ ಲೆಕ್ಕಾಚಾರವಿರುತ್ತಿರಲಿಲ್ಲ
ಭತ್ತದ ಕೃಷಿ ಚಟುವಟಿಕೆ ಮುಗಿಸಿದ ಸಂತೋಷಕ್ಕೆ 'ಕೈಲುಮೂಹೂರ್ತ', ಭತ್ತ ಕೊಯ್ಲಿಗೆ ಬಂದಾಗ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭ 'ಹುತ್ತರಿ' ಹಬ್ಬವನ್ನು ಆಚರಿಸಲಾಗುತ್ತಿತ್ತು. ಆಗಿನ ದಿನಗಳಲ್ಲಿ ಹೆಚ್ಚು ಗದ್ದೆ ಹೊಂದಿದವರನ್ನು ಶ್ರೀಮಂತನೆಂದೇ ಪರಿಗಣಿಸಲಾಗುತ್ತಿತ್ತು. ಹೆಚ್ಚಿನ ಕುಟುಂಬಗಳು ಒಬ್ಬರಿಗೊಬ್ಬರು ಸಹಕರಿಸುತ್ತಾ ಕೂಡುಆಳುಗಳಾಗಿ ಕೃಷಿ ಚಟುವಟಕೆ ನಡೆಸುತ್ತಿದ್ದರು. ಲಾಭ-ನಷ್ಟದ ಲೆಕ್ಕಚಾರವಿರಲಿಲ್ಲ.
ಭತ್ತದಿಂದ ವಿಮುಖರಾದ ಕೊಡಗಿನ ರೈತರು
ವರ್ಷಗಳು ಉರುಳಿದಂತೆ ವಾಣಿಜ್ಯ ಬೆಳೆಗಳ ಭರಾಟೆಯಿಂದಾಗಿ ಭತ್ತದ ಕೃಷಿಯತ್ತ ರೈತರಿಗೆ ಆಸಕ್ತಿ ಕಡಿಮೆಯಾಗತೊಡಗಿತು. ಲಾಭ-ನಷ್ಟದ ಲೆಕ್ಕಚಾರ ಹಾಕಿದ ಕೆಲವು ರೈತರು ಗದ್ದೆಯನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದರೆ, ಮತ್ತೆ ಕೆಲವರು ಭತ್ತದ ಬದಲಿಗೆ ಬೇರೆ ಬೆಳೆಗಳನ್ನು ಬೆಳೆಯತೊಡಗಿದರು.
ಆಚಾರ ವಿಚಾರ ಮತ್ತೆ ನೆನಪಿಸಲು ಬೇಲ್ಪ್ ನಮ್ಮೆ
ಹೀಗಾಗಿ ಭತ್ತದ ಬಗೆಗಿನ ಆಸಕ್ತಿಯೇ ಕಡಿಮೆಯಾದ ಮೇಲೆ ಆಚಾರ, ವಿಚಾರ, ಪದ್ಧತಿ, ಪರಂಪರೆಯೂ ಕೂಡ ನೇಪಥ್ಯಕ್ಕೆ ಸರಿಯತೊಡಗಿತು. ಇದನ್ನು ಅರಿತೇ ಬೇಲ್ಪ್ ನಮ್ಮೆ ಆಚರಣೆಗೆ ಮುಂದಾಗಿದ್ದಾರೆ.
ತರಬೇತಿಯ ಜೊತೆ ಸ್ಪರ್ಧೆ, ಬಹುಮಾನ
ಭತ್ತದ ಕೃಷಿಯತ್ತ ಜಾಗೃತಿ ಮೂಡಿಸಲು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪೈರು ನೆಡುವ ತರಬೇತಿಯೊಂದಿಗೆ ನಿಧಿ ಶೋಧನೆ, ಸಾರ್ವಜನಿಕರಿಗೆ ಕೆಸರು ಗದ್ದೆ ಓಟ, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಶಕ್ತಿ ಕೋಲು ಪೈಪೋಟಿ, ಹಗ್ಗ ಜಗ್ಗಾಟ, ಕೊಡಿನಾಟಿ ಮೊದಲಾದ ಸ್ಪರ್ಧೆಗಳು ಆಯೋಜಿಸಲಾಗುತ್ತದೆ. ಅದರೊಂದಿಗೆ ಪಾಳು ಬಿಟ್ಟ ಗದ್ದೆಗಳಲ್ಲಿ ಮತ್ತೆ ಭತ್ತದ ಕೃಷಿ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಪಂಡೆತ ಬೇಲ್ ಪಣಿ - ಆಧುನಿಕ ಬೇಲ್ ಪಣಿ
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ 'ಪಂಡೆತ ಬೇಲ್ ಪಣಿ - ಆಧುನಿಕ ಬೇಲ್ ಪಣಿ' (ಹಿಂದಿನ ಕಾಲದ ಮತ್ತು ಆಧುನಿಕ ಭತ್ತದ ಕೃಷಿ) ಎಂಬ ವಿಷಯದಲ್ಲಿ ಸಂವಾದ ಕೂಡ ನಡೆಯಲಿದೆ. ಕೃಷಿ ಅಧಿಕಾರಿ ಅಜ್ಜಿಕುಟ್ಟೀರ ಗಿರೀಶ್ 'ಪಡ್ಪೆ'ನ ಬೇಲ್ ಸಾಂಸ್ಕೃತಿಕ ಬದ್ಕ್ ಕುತ್ತ್? ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳೂ ಭಾಗಿ
ಸಚಿವರು, ಶಾಸಕರು, ಜಿ.ಪಂ ಅಧ್ಯಕ್ಷರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಕೊಡವ ಸಮಾಜದ ಪದಾಧಿಕಾರಿಗಳು, ಕೊಡವ ಕುಟುಂಬದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [ಟಿಲ್ಲರ್ ಏರಿ ಭತ್ತದ ಗದ್ದೆಗಿಳಿದ ಸಚಿವ ಕೃಷ್ಣ ಬೈರೇಗೌಡ!]