ಮಡಿಕೇರಿಯಲ್ಲಿ ಟಿಪ್ಪು ಜಯಂತಿಗೆ ಅಡ್ಡಿ: ಶಾಸಕರ ಬಂಧನ ಬಿಡುಗಡೆ
ಕೊಡಗು ಜಿಲ್ಲೆಯಾದ್ಯಂತ ಬಿಜೆಪಿ ಮತ್ತು ಸಂಘ ಪರಿವಾರದವರ ತೀವ್ರ ವಿರೋಧ, ಸ್ವಯಂ ಘೋಷಿತ ಬಂದ್ ಇದ್ದರೂ ಪೊಲೀಸರ ಸರ್ಪಗಾವಲಿನೊಂದಿಗೆ ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆ ಶಾಂತಿಯುತವಾಗಿ ನಡೆದಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟ
ಮಡಿಕೇರಿ ನವೆಂಬರ್ 10: ಕೊಡಗು ಜಿಲ್ಲೆಯಾದ್ಯಂತ ಬಿಜೆಪಿ ಮತ್ತು ಸಂಘ ಪರಿವಾರದವರ ತೀವ್ರ ವಿರೋಧ, ಸ್ವಯಂ ಘೋಷಿತ ಬಂದ್ ಇದ್ದರೂ ಪೊಲೀಸರ ಸರ್ಪಗಾವಲಿನೊಂದಿಗೆ ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆ ಶಾಂತಿಯುತವಾಗಿ ನಡೆದಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದ ಶಾಸಕತ್ರಯರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ವಿರೋಧಗಳ ನಡುವೆ ಜರುಗಿತು. ಬಿಜೆಪಿಯ ಶಾಸಕತ್ರಯರಾದ ಬಿಜೆಪಿ ಶಾಸಕತ್ರಯರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಎಂ.ಪಿ.ಸುನಿಲ್ ಸುಬ್ರಮಣಿ ಕಪ್ಪುಪಟ್ಟಿ ಪ್ರದರ್ಶಿಸಿ ಧಿಕ್ಕಾರದ ಘೋಷಣೆಗಳೊಂದಿಗೆ ವೇದಿಕೆಯಲ್ಲಿ ಇತರ ಜನಪ್ರತಿನಿಧಿಗಳು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲೆತ್ನಿಸಿದರು.
ಅಲ್ಲದೆ ಪ್ರಾದೇಶಿಕ ಬಿಜೆಪಿ ಜನಪ್ರತಿನಿಧಿಗಳು ಸೇರಿದಂತೆ ಶಾಸಕರು ಸಭಾಂಗಣವನ್ನು ಪ್ರವೇಶಿಸಿ ಅತಿಥಿ ಸ್ಥಾನ ಕುಳಿತುಕೊಳ್ಳಬೇಕಿದ್ದ ಶಾಸಕರುಗಳು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು ನಿಗದಿತ ಸ್ಥಾನಗಳಲ್ಲಿ ಕುಳಿತುಕೊಳ್ಳದೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. [ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ: ಬಿಜೆಪಿಯಿಂದ ಕರಾಳ ದಿನಾಚರಣೆ]
ಆರಂಭದಲ್ಲಿ ಪ್ರಸ್ತಾಪಿಸಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ..ಬೋಪಯ್ಯ, ಕೊಡಗಿನಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದೂಗಳು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರಕಾರವು ಕ್ಷಮಿಸಲಾರದ ತಪ್ಪೆಸಗಿರುವ ಟಿಪ್ಪು ಜಯಂತಿ ಆಚರಣೆಗೆ ಆದೇಶಿಸುವುದರೊಂದಿಗೆ ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗಿದೆ ಎಂದು ಆರೋಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಅಪ್ಪಚ್ಚುರಂಜನ್ ಅವರು ಜಯಂತಿ ನಡೆಸಬೇಕೇ ಬೇಡವೇ ಎಂಬ ತೀರ್ಮಾನ ಪ್ರಕಟಿಸಬೇಕೆಂದು ಕೋರಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಅಪ್ಪಚ್ಚು ರಂಜನ್ ಅವರು, ಟಿಪ್ಪು ಸುಲ್ತಾನ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂಬುದಾಗಿ ಬಿಂಬಿಸಲಾಗುತ್ತಿದ್ದು, ಆತ ಆಡಳಿತ ನಡೆಸಿದ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯೇ ಇರಲಿಲ್ಲ. ಕೇವಲ ತನ್ನ ರಾಜ್ಯ ವಿಸ್ತರಣೆ ಮತ್ತು ರಕ್ಷಣೆಯ ಉದ್ದೇಶಕ್ಕಾಗಿ ಹಲವಾರು ಪ್ರಮಾದಗಳನ್ನು ಎಸಗಿರುವುದರಿಂದ ತಾನು ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಪ್ರಕಟಿಸಿದರು. [ಟಿಪ್ಪು ಜಯಂತಿ: ಗುಪ್ತಚರ ಇಲಾಖೆಯಿಂದ ಸರಕಾರಕ್ಕೆ ಸ್ಪೋಟಕ ವರದಿ]
ಶಾಸಕ ಅಪ್ಪಚ್ಚು ರಂಜನ್ ಅವರ ಈ ಹೇಳಿಕೆಯಿಂದ ಪ್ರೇರಣೆಗೊಂಡ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಹಾಗೂ ಸಭಾಂಗಣದಲ್ಲಿದ್ದ ಬಿಜೆಪಿಯ ಜನಪ್ರತಿನಿಧಿಗಳು ಕಪ್ಪು ಪಟ್ಟಿ ತೋರಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಘೋಷಣೆ ಕೂಗುತ್ತಾ ಕೆಳಗಿಳಿದು ಬರುತ್ತಿದ್ದಂತೆ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಾಸಕರುಗಳನ್ನು ಮತ್ತು ಜಿ.ಪಂ.ಅಧ್ಯಕ್ಷರು ಸೇರಿದಂತೆ 25ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಾಹನದಲ್ಲಿ ಕೊಂಡೊಯ್ದರು. ನಂತರ ಬಿಡುಗಡೆ ಮಾಡಿದರು.