ಮಡಿಕೇರಿ: ಸೈಬರ್ ಕ್ರೈಂ ತಡೆಗೆ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್
ಮಡಿಕೇರಿ, ಜುಲೈ 17 : ಸಾಮಾಜಿಕ ಜಾಲ ತಾಣಗಳತ್ತ ಕೊಡಗಿನ ಪೊಲೀಸರು ಕಣ್ಣಿಟ್ಟಿದ್ದು, ಪ್ರಚೋದನೆ ನೀಡುವುದು, ಶಾಂತಿ ಕದಡುವ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮುಂದಾಗಲಿದೆ.
ಇದೊಂದು ಉತ್ತಮ ಕಾರ್ಯವಾಗಿದ್ದು, ಈ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನಿಂದ ಸಾಮಾಜಿಕ ಜಾಲ ತಾಣಗಳನ್ನು ದುರುಪಯೋಗಿಸುವವರನ್ನು ಹತ್ತಿಕ್ಕಲು ಸಾಧ್ಯವಾಗಲಿದೆ.
ಸಾಮಾಜಿಕ ಜಾಲ ತಾಣಗಳಾದ ವಾಟ್ಸಾಪ್, ಟ್ವಿಟ್ಟರ್, ಫೇಸ್ಬುಕ್, ಟೆಲಿಗ್ರಾಮ್ ಹಾಗೂ ಇನ್ನಿತರ ಜಾಲತಾಣಗಳಲ್ಲಿ ದೇಶದ ಸುರಕ್ಷತೆ ಹಾಗೂ ಜನರಲ್ಲಿ ಪ್ರಚೋದನೆ ಮೂಡಿಸುವಂತಹ ಪೋಸ್ಟ್ ಗಳನ್ನು ಹರಿ ಬಿಡುತ್ತಿರುವುದರಿಂದ ಶಾಂತಿಗೆ ಭಂಗವಾಗುತ್ತಿದ್ದು, ಇದರಿಂದ ಸಮಾಜದಲ್ಲಿನ ಶಾಂತಿ ಹಾಗೂ ಸುವ್ಯವಸ್ಥೆ ಹದಗೆಡುತ್ತಿದೆ.
ಇನ್ನು ಮುಂದೆ ಪೊಲೀಸ್ ಕಚೇರಿಯಲ್ಲಿರುವ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಸಿಬ್ಬಂದಿ ಯಾವುದೇ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಮಾಹಿತಿಯನ್ನು, ಕಾನೂನು ಬಾಹಿರ ಮಾಹಿತಿಯನ್ನು ದೇಶದ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಮಾಹಿತಿಯನ್ನು, ಕೋಮು ಪ್ರಚೋದನೆ ಉಂಟು ಮಾಡುವ, ಜಾತಿ ಭಾಷೆ ಜನಾಂಗಗಳ ಬಗ್ಗೆ ವಿಷಯವನ್ನು ಅನವಶ್ಯಕವಾಗಿ ಚರ್ಚೆ ಹಾಗೂ ರವಾನೆ ಮಾಡುವವರತ್ತ ಕಣ್ಣಿಡಲಿದೆ.
ಕಾನೂನು ಬಾಹಿರ ಸಂದೇಶಗಳನ್ನು ರವಾನಿಸುವುದು ಕಂಡು ಬಂದರೆ ಅಂತಹ ವ್ಯಕ್ತಿ, ವಾಟ್ಸಾಪ್, ಟೆಲಿಗ್ರಾಮ್ ಗ್ರೂಪ್ನ ಅಡ್ಮಿನ್ ಹಾಗೂ ಮಾಹಿತಿ ರವಾನಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಿದ್ದಾರೆ.
ಕೊಡಗಿನಲ್ಲಿ ಕೆಲವು ಕಿಡಿಗೇಡಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಮಾಹಿತಿ ಪೊಲೀಸ್ ಇಲಾಖೆ ತಲುಪಿದ್ದು ಅಂತಹವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಎಸ್ಪಿ ರಾಜೇಂದ್ರ ಪ್ರಸಾದ್ ಈ ಸಂಬಂಧ ಸಾರ್ವಜನಿಕ ಪ್ರಕಟಣೆ ನೀಡಿ ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸುವ, ಪ್ರಚೋದನಕಾರಿ ಸಂದೇಶ ರವಾನಿಸುವ ವ್ಯಕ್ತಿಗಳ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದೆಂದು ತಿಳಿಸಿದ್ದಾರೆ.
ಈಗಾಗಲೇ ಪೆÇಲೀಸ್ ಇಲಾಖೆವತಿಯಿಂದ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಲಹಾ ಪೆಟ್ಟಿಗೆಯನ್ನು ಇರಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.