ಸೋಮವಾರಪೇಟೆ ಜನರಿಗೆ ಕಳ್ಳರದೇ ಚಿಂತೆ!
ಮಡಿಕೇರಿ, ಅಕ್ಟೋಬರ್ 18: ಕೊಡಗಿನ ಸೋಮವಾರಪೇಟೆಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು, ಜನ ಭಯದಲ್ಲಿ ದಿನ ಕಳೆಯುವಂತ ಸ್ಥಿತಿ ಬಂದಿದೆ. ಮನೆ ಮುಂದೆ ನಿಲ್ಲಿಸಿದ ಬೈಕ್ ಕದಿಯುವ ಕಳ್ಳರು ಬಳಿಕ ಅದರಲ್ಲೇ ಬೇರೆ ಕಡೆ ಕಳವು ಮಾಡಿ, ಆ ಬೈಕ್ ಎಲ್ಲಿಯಾದರೂ ನಿಲ್ಲಿಸಿ ಪರಾರಿಯಾಗುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳ ಅಂಗಡಿ, ದೇವಾಲಯ ಸೇರಿದಂತೆ ಮನೆಗಳಿಗೂ ಕನ್ನ ಹಾಕುತ್ತಿರುವ ಕಳ್ಳರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದಾರೆ. ಕಳ್ಳರು ಸ್ಥಳೀಯರೇ ಅಥವಾ ಹೊರಗಿನವರೇ ಎಂಬುದು ಇನ್ನೂ ಗೊತ್ತಾಗುತ್ತಿಲ್ಲ. ಗ್ರಾಮದ ಕೆಲವರ ಪ್ರಕಾರ ಇವೆಲ್ಲವೂ ಗೊತ್ತಿರುವವರೇ ಮಾಡುತ್ತಿರುವ ಕೈಚಳಕವಂತೆ.[ಎಚ್ಚರ, ಹುಬ್ಬಳ್ಳಿ ಬಿಟ್ಟು ಧಾರವಾಡಕ್ಕೆ ಬಂದ್ರು ಸರಗಳ್ಳರು!]
ಎರಡು ತಿಂಗಳ ಹಿಂದೆ ಬಜೆಗುಂಡಿ ಗ್ರಾಮದ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದ ಹುಂಡಿ ಒಡೆದು, ಕಳ್ಳತನ ಮಾಡುವ ಸಂದರ್ಭ ಒಬ್ಬನನ್ನು ಸ್ಥಳಿಯರೇ ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿದ್ದರು. ಆ ಸಂದರ್ಭದಲ್ಲಿ ಜೊತೆಗಿದ್ದ ನಾಲ್ವರು ಪರಾರಿಯಾಗಿದ್ದರು. ಸಿಕ್ಕಿ ಬಿದ್ದ ಕಳ್ಳನ ವಿಚಾರಣೆಯನ್ನು ಪೊಲೀಸರು ಯಾವ ರೀತಿಯಾಗಿ ಮಾಡಿದರೋ ಗೊತ್ತಿಲ್ಲ, ಈಗ ಮತ್ತೆ ಕಳ್ಳತನ ಮುಂದುವರೆದಿದೆ.
ಈ ಮಧ್ಯೆ ಕರ್ಕಳ್ಳಿ ಗ್ರಾಮದ ಬಸವೇಶ್ವರ ದೇವಾಲಯದ ಹುಂಡಿ ಒಡೆದು ಕಾಣಿಕೆ ಹಣವನ್ನು ಕದ್ದರೆ, ಕುಳ್ಳಾರಿಗುಡಿ ದೇವಾಲಯದ ಬಳಿನಿಂತಿದ್ದ ಬೈಕ್ ಎಗರಿಸಿದ್ದಾರೆ. ಕ್ಯಾಂಟೀನ್ ವೊಂದರ ಬೀಗ ಒಡೆದು ಒಂದು ಸಾವಿರ ಹಣ ಸೇರಿದಂತೆ ಬೈಕ್ ಎತ್ತಿಕೊಂಡು ಹೋಗಿದ್ದಾರೆ.[ಭೂತದಂತೆ ಬಂದು ಕಳ್ಳತನಕ್ಕಿಳಿಯುತ್ತಿದ್ದವ ಸಿಸಿಟಿವಿಯಲ್ಲಿ ಸೆರೆ]
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಆಪ್ತ ಸಹಾಯಕ, ಗಾಂಧಿನಗರದ ನಿವಾಸಿ ರವಿ ಎಂಬುವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದಿದ್ದಾರೆ. ಬೈಕ್ ಕಳವಾದ ಬಗ್ಗೆ ರವಿ ಅವರು ಸೋಮವಾರಪೇಟೆ ಸುತ್ತಮುತ್ತ ಹುಡುಕಾಟ ನಡೆಸಿ, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಆದರೆ, ಬಜೆಗುಂಡಿ ಗ್ರಾಮದ ಮಸೀದಿ ಬಳಿ ಬೈಕ್ ಪತ್ತೆಯಾಗಿದೆ. ಬೈಕ್ ನಲ್ಲಿ ಪೆಟ್ರೋಲ್ ಇಲ್ಲದ ಕಾರಣ ಅಲ್ಲಿ ಬಿಟ್ಟು ಕಳ್ಳರು ಪರಾರಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಸೆರೆ ಹಿಡಿಯುವ ತನಕ ಜನ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದಂತಾಗಿದೆ.