ಸ್ವಚ್ಛ ಕುಶಾಲನಗರಕ್ಕಾಗಿ ಕಸದ ಮೇಲೆ ಧರಣಿ!
ಮಡಿಕೇರಿ, ಆಗಸ್ಟ್ 18: ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರ ಪ್ರಮುಖ ವಾಣಿಜ್ಯ ವಹಿವಾಟಿನ ಕೇಂದ್ರವೂ ಹೌದು. ಕೊಡಗು, ಮೈಸೂರು, ಹಾಸನ ಜಿಲ್ಲೆಯೊಂದಿಗೆ ಬೆಸೆದುಕೊಂಡಿರುವ ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಪಟ್ಟಣಕ್ಕೆ ಅಶುಚಿತ್ವ ಮಾತ್ರ ಕಪ್ಪುಚುಕ್ಕೆಯಾಗಿದೆ.[ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ : ತನಿಖೆ ತೀವ್ರ]
ಪಟ್ಟಣದ ಹೃದಯ ಭಾಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಆವರಣ ಸೇರಿದಂತೆ ಸುತ್ತಮುತ್ತ ಅಶುಚಿತ್ವ ಕಂಡು ಬರುತ್ತಿದ್ದು, ವಾಕರಿಕೆ ತರುತ್ತಿದೆ. ಇಲ್ಲಿ ರಾಶಿ ಬಿದ್ದಿರುವ ಕಸವನ್ನು ತೆರವು ಮಾಡುವಲ್ಲಿ ಬಸ್ ನಿಲ್ದಾಣದ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿರುವ ಕಾರಣದಿಂದಾಗಿ ಅಸಹ್ಯ ವಾತಾವರಣ ನಿರ್ಮಾಣವಾಗಿದೆ.[ವಿಶೇಷ ಲೇಖನ: ಕಾವೇರಿ ನದಿ ದಡ 'ಗುಹ್ಯ'ದ ಗುಟ್ಟು]
ಕುಶಾಲನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಇಲ್ಲಿನ ಅಶುಚಿತ್ವ ನೋಡಿ ಹಿಡಿಶಾಪ ಹಾಕಿಕೊಂಡು ಹಿಂತಿರುಗುತ್ತಾರೆ. ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತ ಶುಚಿತ್ವ ಕಾಪಾಡಿ ಎಂಬ ಹೋರಾಟಕ್ಕೆ ಕಿಮ್ಮತ್ತು ಇಲ್ಲದಾಗಿದೆ. ದೇಶದಾದ್ಯಂತ ಸ್ವಚ್ಛ ಭಾರತ್ ಅಭಿಯಾನ ನಡೆಯುತ್ತಿದ್ದರೆ, ಇಲ್ಲಿ ಮಾತ್ರ ಅಶುಚಿತ್ವ ತಾಂಡವವಾಡುತ್ತಿದೆ.[ಕೊಡಗಿನಲ್ಲೂ ತಮಿಳು, ಮಲಯಾಳಂ ಶಾಲೆ ಇದೆ ಕಣ್ರೀ...]
ಸಂಘಟನೆ ಮೂಲಕ ಪ್ರತಿಭಟನೆ, ಸಾರ್ವಜನಿಕರಿಂದ ದೂರು ಸಲ್ಲಿಕೆಯಾದರೂ ಬಸ್ ನಿಲ್ದಾಣದ ಶುಚಿತ್ವ ಮಾತ್ರ ಸಾಧ್ಯವಾಗುತ್ತಲೇ ಇಲ್ಲ. ಇದರಿಂದ ನೊಂದ ಕುಶಾಲನಗರ ಬಿಜೆಪಿ ಘಟಕ ಅಧ್ಯಕ್ಷ ಕೆ.ಜಿ.ಮನು ಏಕಾಂಗಿಯಾಗಿ ಕಸದ ರಾಶಿ ಮೇಲೆ ಕುಳಿತು ಮೌನ ಧರಣಿ ನಡೆಸಿದ್ದಾರೆ. ಆ ಮೂಲಕ ಅಧಿಕಾರಿಗಳಿಗೆ 'ಶುಚಿತ್ವದತ್ತ ಒತ್ತು ನೀಡಿ' ಎಂಬ ಸಂದೇಶವನ್ನು ರವಾನಿಸಿದ್ದಾರೆ.[ಕೊಡಗಿನಲ್ಲೂ ತಮಿಳು, ಮಲಯಾಳಂ ಶಾಲೆ ಇದೆ ಕಣ್ರೀ..]
ಎರಡು ವರ್ಷಗಳಿಂದ ಕೆಎಸ್ಆರ್ ಟಿಸಿ ನಿಲ್ದಾಣದ ಆವರಣದಲ್ಲಿ ಕಸ ವಿಲೇವಾರಿ ಆಗದಿರುವ ಹಿನ್ನೆಲೆಯಲ್ಲಿ ಇಡೀ ವಾತಾವರಣದಲ್ಲಿ ಮೂಗು ಮುಚ್ಚಿ ತೆರಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಸ್ ನಿಲ್ದಾಣದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವ ಖಂಡಿಸಿ, ಈ ಪ್ರತಿಭಟನೆ ನಡೆಸಿದ್ದಾಗಿ ಅವರು ತಿಳಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡೋಣ.