ಸೊಸೆ ನೇಣಿಗೆ ಶರಣು, ಅತ್ತೆಗೆ ಹೃದಯಾಘಾತ!
ಕೊಡಗು, ಆಗಸ್ಟ್ 10 : ಒಂದು ಕುಟುಂಬದಲ್ಲಿ ಒಂದು ಸಾವೇ ಇಡೀ ಮನೆಯ ನೆಮ್ಮದಿ, ಸಂತೋಷವನ್ನು ಕಸಿದುಕೊಂಡು ಬಿಡುತ್ತದೆ. ಅಂಥದ್ದರಲ್ಲಿ ಎರಡೆರಡು ಸಾವು ಸಂಭವಿಸಿದರೆ ಗತಿ ಏನು?
ಇಂಥ ಘಟನೆಯೊಂದು ಕುಶಾಲನಗರ ಸಮೀಪ ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದ ನವವಿವಾಹಿತೆ ನೇಣಿಗೆ ಶರಣಾದರೆ, ಆಕೆಯ ಅತ್ತೆ ಹೃದಯಾಘಾತದಿಂದ ಸಾವನ್ನಪಿದ್ದಾರೆ.
ಈ ಘಟನೆ ಕುಶಾಲನಗರ ಸಮೀಪದ ಶಿರಂಗಾಲದಲ್ಲಿ ನಡೆದಿದ್ದು, ಗ್ರಾಮದ ಗಣೇಶ ಎಂಬಾತನ ಪತ್ನಿ ಶ್ರುತಿ (22) ನೇಣು ಬಿಗಿದುಕೊಂಡು ಸಾವನ್ನಪ್ಪಿದರೆ, ಆಕೆಯ ಅತ್ತೆ ಪಾರ್ವತಮ್ಮ (55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.[ಮಡಿಕೇರಿಯ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್]
ಮೂಲತಃ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದ ನಿಂಗರಾಜೇಗೌಡ ಹಾಗೂ ರಾಧಾ ದಂಪತಿಯ ಪುತ್ರಿ ಶ್ರುತಿಯನ್ನು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಕೊಪ್ಪಲು ಗ್ರಾಮದ ತಮ್ಮಣ್ಣ ಎಂಬುವರ ಪುತ್ರ ಗಣೇಶ 2 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ. ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಗಣೇಶಗೆ ಪಟ್ಟಣದಲ್ಲಿ ಮನೆ ಮಾಡುವಂತೆ ಪತ್ನಿ ಶ್ರುತಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.
ಇದೇ ವಿಚಾರವಾಗಿ ಮನೆಯಲ್ಲಿ ಜಗಳ ಆರಂಭವಾಗಿತ್ತು. ಇದಕ್ಕೆ ಗಣೇಶನ ಸಹೋದರ ಲೋಕೇಶ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಗಳವಾಗಿದ್ದು, ಮನ ನೊಂದ ಶ್ರುತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆಯೇ ಆಕೆಯ ಸಂಬಂಧಿಕರು ಆಗಮಿಸಿದ್ದರು. ಅಷ್ಟರಲ್ಲೇ ಅತ್ತೆ ಪಾರ್ವತಮ್ಮ ಹೊರತುಪಡಿಸಿ ಮೃತಳ ಪತಿ ಗಣೇಶನ ಕುಟುಂಬದವರು ತಲೆ ಮರೆಸಿಕೊಂಡಿದ್ದರು.[ಭೂಸೇನಾ ಮುಖ್ಯಸ್ಥನ ನೋಡಿ ತೃಪ್ತರಾದ ಮಾಜಿ ಯೋಧರು]
ಈ ವೇಳೆ ಶ್ರುತಿಯ ಸಂಬಂಧಿಕರು ಪಾರ್ವತಮ್ಮನೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಪಾರ್ವತಮ್ಮ ಘಟನೆ ಮಾಹಿತಿಯನ್ನು ನೀಡಿದ್ದಾರೆ. ಇದಾದ ಬಳಿಕ ಮನೆಯಲ್ಲಿದ್ದ ಪಾರ್ವತಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹತ್ಯೆ ಆರೋಪ : ಆದರೆ, ಪಾರ್ವತಮ್ಮ ಕುಟುಂಬದವರು ಹೇಳುತ್ತಿರುವುದೇ ಬೇರೆ. ಶ್ರುತಿಯ ಕುಟುಂಬದವರು ಹಲ್ಲೆ ನಡೆಸಿ, ಪಾರ್ವತಮ್ಮ ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿ, ದೂರು ನೀಡಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.