ಏಪ್ರಿಲ್ 17ರಿಂದ ಕೊಡವ ಕುಟುಂಬಗಳ ಹಾಕಿ ಉತ್ಸವ ಆರಂಭ
ಕೊಡಗಿನ ನಾಪೋಕ್ಲುವಿನ ಜನರಲ್ ಕೆಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಿದ್ದಾಟಂಡ ಕಪ್ ಪಂದ್ಯಾವಳಿ ಆರಂಭವಾಗಲಿದೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಪಂದ್ಯಾವಳಿಗೆ ಸಿದ್ಧತೆ ಮಾಡಲಾಗಿದೆ
ಮಡಿಕೇರಿ, ಏಪ್ರಿಲ್ 8: ಇದೇ ಏಪ್ರಿಲ್ 17 ರಿಂದ ನಾಪೋಕ್ಲುವಿನಲ್ಲಿ ಆರಂಭವಾಗಲಿರುವ ಬಿದ್ದಾಟಂಡ ಕಪ್ ಹಾಕಿನಮ್ಮೆಗೆ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸಂಪೂರ್ಣ ಸಜ್ಜುಗೊಂಡಿದೆ. ಈ ಬಾರಿ ಹಾಕಿ ಉತ್ಸವದಲ್ಲಿ 260 ಕುಟುಂಬಗಳ ತಂಡ ಪಾಲ್ಗೊಳ್ಳಲಿದ್ದು, ತಮ್ಮ ಕ್ರೀಡಾ ಪ್ರತಿಭೆ ಮೆರೆದು ಕಪ್ ನ ಒಡೆತನ ಸಾಧಿಸುವ ತಯಾರಿಯಲ್ಲಿದ್ದಾರೆ.
ಈ ಬಾರಿ ನಡೆಯುತ್ತಿರುವ ಹಾಕಿ ಉತ್ಸವ 21ನೇ ವರ್ಷದ್ದಾಗಿದ್ದು, ಅಚ್ಚುಕಟ್ಟಾಗಿ ನಡೆಸಲು ಬಿದ್ದಾಟಂಡ ಕುಟುಂಬದ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾಪೋಕ್ಲುನಲ್ಲಿ ಸಜ್ಜುಗೊಂಡಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣವನ್ನು ಈಗಾಗಲೇ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ, ಉತ್ಸವದ ಸಂಘಟಕರಾದ ಬಿದ್ದಾಟಂಡ ಬೆಲ್ಲುಬೆಳ್ಯಪ್ಪ, ರಮೇಶ್ ಚಂಗಪ್ಪ ಮತ್ತು ಬಿದ್ದಾಟಂಡ ಕುಟುಂಬಸ್ಥರು ಪರಿಶೀಲನೆ ನಡೆಸಿದ್ದಾರೆ.[ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಸಂಚಕಾರ!]
ಹಾಕಿ ಉತ್ಸವಕ್ಕೆ ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದ ಪಕ್ಕದಲ್ಲಿಯೂ ಸಹ ಮೂರು ಎಕರೆ ಜಾಗದಲ್ಲಿ ಹೊಸ ಮೈದಾನವನ್ನು 15 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಏಪ್ರಿಲ್ 17 ರಂದು ಮಧ್ಯಾಹ್ನ ಚಾಲನೆಗೊಳ್ಳಲಿದೆ. ಮೇ 7 ಅಥವಾ 14 ರಂದು ಅಂತಿಮ ಪಂದ್ಯ ನಡೆಯಲಿದೆ.
ಕಾರ್ಯಕ್ರಮ ಉದ್ಘಾಟನೆಗೆ ಕೇಂದ್ರ ಸಚಿವರಾದ ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.[ಕೊಡವ ಹಾಕಿ ಉತ್ಸವಕ್ಕೆ 40ಲಕ್ಷ ರೂ. ಅನುದಾನ]
ಸರಕಾರರದಿಂದ 40 ಲಕ್ಷ ರುಪಾಯಿ ಬಿಡುಗಡೆಯಾಗಲಿದೆ, ಸಂಸದರಾದ ಪ್ರತಾಪ್ ಸಿಂಹ ಅವರು 20 ಲಕ್ಷ ರುಪಾಯಿ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ 5 ಲಕ್ಷ ರುಪಾಯಿ, ಜಿ.ಪಂ.ಸ್ಥಳೀಯ ಸದಸ್ಯರಾದ ಮುರಳಿ ಕರುಂಬಮಯ್ಯ 2 ಲಕ್ಷ ರುಪಾಯಿ ನೀಡಿದ್ದಾರೆ. ಹಾಕಿ ಉತ್ಸವಕ್ಕೆ ಈ ಬಾರಿ ಭಾರತೀಯ ಹಾಕಿ ತಂಡ ಮತ್ತು ಭಾರತೀಯ ಸೇನೆಯ ಹಾಕಿ ತಂಡ ಆಗಮಿಸುತ್ತಿರುವುದು ವಿಶೇಷವಾಗಿದೆ.
ಉದ್ಘಾಟನಾ ಸಂದರ್ಭದಲ್ಲಿ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಮ್ಮತ್ತಾಟ್, ಬೊಳಕಾಟ್, ಕತ್ತಿಯಾಟ್ ಹಾಗೂ ನಾಟಕ ಪ್ರದರ್ಶನಗೊಳ್ಳಲಿದೆ. ಈ ಬಾರಿ ಹಾಕಿ ಉತ್ಸವಕ್ಕೆ ಸುಮಾರು 1.60 ಕೋಟಿ ರುಪಾಯಿ ವೆಚ್ಚವಾಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.