ಬಿಎಸ್ ವೈ ತೀರ್ಮಾನ : ಕೊಡಗಿನ ಬಿಜೆಪಿಯಲ್ಲಿ ಅತೃಪ್ತಿ
ಮಡಿಕೇರಿ ಮಾರ್ಚ್ 9: ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ತಮ್ಮ ಹಿಂಬಾಲಕರಿಗೆ ಅಧಿಕಾರ ನೀಡಿ ಪಕ್ಷದಲ್ಲಿ ನಿಷ್ಠೆಯಿಂದ ದುಡಿಯುವವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಸಮಾಧಾನ ಬಿಜೆಪಿ ಭದ್ರಕೋಟೆ ಕೊಡಗಿಗೂ ತಟ್ಟಿದೆ. ಇದರಿಂದಾಗಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.
ಕೊಡಗು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರ ದಿಢೀರ್ ಬದಲಾವಣೆ ಇದಕ್ಕೆ ಕಾರಣವಾಗಿದೆ. ಹಾಲಿ ಅಧ್ಯಕ್ಷರಾಗಿ ಕಳೆದ ಆರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಅವರನ್ನು ಬದಲಾಯಿಸಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿರುವ ಬಿ.ಬಿ. ಭಾರತೀಶ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಿಢೀರ್ ಆದೇಶ ಹೊರಡಿಸಿದ್ದಾರೆ. ಇದು ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಈಗಾಗಲೇ ಮನು ಮುತ್ತಪ್ಪ ಪಕ್ಷದ ಸಂಘಟನೆಯ ವಿಚಾರದಲ್ಲಿ ಶಕ್ತಿಮೀರಿ ಕಾರ್ಯನಿರ್ವಹಿಸುತ್ತಿದ್ದು, ತಳಮಟ್ಟದಿಂದಲೇ ಪಕ್ಷಕ್ಕಾಗಿ ದುಡಿಯುತ್ತಾ ಬಂದವರಾಗಿದ್ದಾರೆ. ಇವರನ್ನು ನೇಮಕ ಮಾಡಿ ಆರು ತಿಂಗಳು ಕಳೆಯುವ ಮುನ್ನವೇ ಯಾವುದೇ ಸೂಚನೆ ನೀಡದೆ ಮತ್ತು ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ಬದಲಾವಣೆ ಮಾಡಿರುವುದು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗಿನ ದಿಢೀರ್ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಜಿಪಂನ ಕೆಲವು ಸದಸ್ಯರು ಮತ್ತು ಮುಖಂಡರು ಸಭೆ ನಡೆಸಿದ್ದು, ಬೆಂಗಳೂರಿಗೆ ತೆರಳಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜಿಲ್ಲಾಧ್ಯಕ್ಷರನ್ನು ಬದಲಾಯಿಸದಂತೆ ಮನವಿ ಮಾಡಲಿದ್ದಾರೆ.
ಕೊಡಗಿನಿಂದ ಸುಮಾರು 40ಕ್ಕೂ ಹೆಚ್ಚು ಮುಖಂಡರು ಬೆಂಗಳೂರಿಗೆ ತೆರಳಿದ್ದು, ಈ ನಿಯೋಗ ಬಿಎಸ್ ವೈ ಮಾತ್ರವಲ್ಲದೆ ಇತರೆ ಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎನ್ನಲಾಗಿದೆ. ಇವರ ಮನವಿಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಂದಿಸದೆ ಇದ್ದಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಒಡಕು ಕಾಣಿಸಿಕೊಳ್ಳುವುದು ಖಂಡಿತ ಎನ್ನಲಾಗುತ್ತಿದೆ.