ಕೊಡವ ಕುಟುಂಬದಿಂದ ಸಂಭ್ರಮವ ಕೈಲ್ ಮುಹೂರ್ತ ಆಚರಣೆ
ಕುಶಾಲನಗರ, ಸೆಪ್ಟೆಂಬರ್ 3: ಕೊಡಗಿನ ಪ್ರಮುಖ ಹಬ್ಬವಾದ ಕೈಲ್ ಮುಹೂರ್ತವನ್ನು ಜಿಲ್ಲೆಯಾದ್ಯಂತ ಸಡಗರ- ಸಂಭ್ರಮದಿಂದ ಶನಿವಾರ ಆಚರಿಸಲಾಯಿತು. ಕೊಡವ ಕುಟುಂಬದ ಹಿರಿಯರು ತಮ್ಮ ಐನ್ ಮನೆಗಳಲ್ಲಿ ಹಿರಿಯರಿಗೆ ಮೀದಿ(ಎಡೆ) ಇಡುವ ಮೂಲಕ ಹಾಗೂ ಗುರು- ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಕುಶಾಲನಗರ ವ್ಯಾಪ್ತಿಯ ಕೂಡಿಗೆ, ಗುಡ್ಡೆಹೊಸೂರು, ಕೊಡಗರಹಳ್ಳಿ, ಸುಂಟಿಕೊಪ್ಪ, ನಂಜರಾಯಪಟ್ಟಣ, ಹುದುಗೂರು, ವಾಲ್ನೂರು, 7ನೇ ಹೊಸಕೋಟೆ, ರಂಗಸಮುದ್ರ, ಹಾರಂಗಿ, ಚಿಕ್ಕತ್ತೂರು ಮೊದಲಾದೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ ತಮ್ಮ ನಿವಾಸದಲ್ಲಿ ಹಬ್ಬವನ್ನು ಕೊಡವ ಸಂಪ್ರದಾಯದಂತೆ ಆಚರಿಸಿದರು.[ಸಿಎನ್ ಸಿಯಿಂದ ಮಡಿಕೇರಿಯಲ್ಲಿ ಕೈಲ್ ಪೋಳ್ದ್]
ಇದೇ ಸಂದರ್ಭ ಕೋವಿ, ಕತ್ತಿ, ನೇಗಿಲು, ನೊಗ ಸೇರಿದಂತೆ ನಿತ್ಯ ಬಳಕೆ ಆಯುಧಗಳನ್ನು ಮನೆ ಮುಂಭಾಗದಲ್ಲಿ ಜೋಡಿಸಿ, ಸಾಂಪ್ರದಾಯಿಕ ಉಡುಗೆ ಧರಿಸಿ, ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು. ಕೊಡಗಿನ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಆಯುಧಗಳು, ಕೃಷಿ ಹತ್ಯಾರುಗಳು ಹಾಗೂ ಇನ್ನಿತರ ಗೃಹ ಬಳಕೆಯ ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ಕೊಡಗಿನ ವಿವಿಧ ಸ್ಥಳಗಳಿಂದ ಮತ್ತು ಜನರಿಂದ ಸಂಗ್ರಹಿಸಿದ ಪುರಾತನ ಆಯುಧಗಳಾದ ಅಂಬ್ಕತ್ತಿ, ಪೀಚೆಕತ್ತಿ, ಪಿಲ್ಕತ್ತಿ, ಕೊಯಕತ್ತಿ, ಬಾಳ್ಕತ್ತಿ, ಮರದುಡಿ, ಮುಂಬಟ್ಟ, ಲಾಟೀನ್, ಕರಿಕುಟ್ಟು, ಜರಡಿ, ತೊಟ್ಟಿಲು, ಕೈಕಣೆ, ನೊಗ, ತಾವೆ, ಗುಜಾಯಿ, ಪೊಳಿಯ, ಒಟ್ಟಮರಿಯ, ಕೊರಂಬೆ, ನೂಪುಟ್ಟೊರ, ಮೇರ್ಕುತ್ತಿ, ತಾಪೆ, ಪೋಳಿಯ, ಕೂಪಾರ್, ತೊಟ್ಟನೇತಿ, ನೇಂಗಿ, ಕರಗಂಟೆ, ಮಣ್ಣಿನ ದೀಪಗಳು, ಉದಿ ಮುಂತಾದ ಅಪರೂಪದ ವಸ್ತುಗಳು ಸುತ್ತಮುತ್ತಲಿನ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾದವು.[ಭತ್ತದ ಕೃಷಿಯ ಬತ್ತದ ಖುಷಿ: ಕೊಡಗಿನಲ್ಲಿ ಕೈಲ್ ಮುಹೂರ್ತದ ಸಂಭ್ರಮ]
ಪೂಜೆಯ ನಂತರ ಹಬ್ಬದ ಸಾಂಪ್ರದಾಯಿಕ ಭಕ್ಷ್ಯಗಳಾದ ಕಡುಬಿಟ್ಟು, ತಳಿಯಪುಟ್ಟ್, ಪಣಿಪುಟ್ಟ್, ಇಡ್ಲಿ, ಕೋಳಿಕರಿ, ಕೊರಿಕರಿ, ಪಾಯಸ, ಶ್ಯಾವಿಗೆ ಹಾಗೂ ಪಂದಿಕರಿಯಂತಹ ವಿಶಿಷ್ಟ ಭೋಜನವನ್ನು ಒಟ್ಟಿಗೆ ಸೇರಿ ಸವಿಯುಂಡರು.
ನಂತರ ಈ ಹಬ್ಬದ ವಿಶೇಷವೆನಿಸಿದ ತೆಂಗಿನ ಕಾಯಿಯನ್ನು ಮರದ ಕೊಂಬೆಗೆ ಕಟ್ಟಿ ಅದನ್ನು ಗುರಿಯಿಟ್ಟು ಗುಂಡು ಹೊಡೆಯುವಲ್ಲಿ ಡಾ.ವಿಕ್ರಂಅಪ್ಪಣ್ಣ, ಡಾ.ಶಾನೀಲ್ ವಿಕ್ರಂ ಯಶಸ್ವಿಯಾದರು.[ದಾಂಪತ್ಯಕ್ಕೆ ಕಾಲಿರಿಸಿದ ಸಾಧಕಿ ಕೊಡಗಿನ ಪ್ರೀತ್]
ಅಕಾಡೆಮಿಯ ಮಾಜಿ ಸದಸ್ಯೆ ರಾಣುಅಪ್ಪಣ್ಣ ಮಾತನಾಡಿ, ನಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಮೂಲ ಕೊಡವ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದರು.
ಹಬ್ಬದ ಅಂಗವಾಗಿ ಹಳ್ಳಿಗಳಲ್ಲಿ ತಮ್ಮ ಕೃಷಿ ಕಾರ್ಯಕ್ಕೆ ಬಳಸುವ ಎತ್ತುಗಳಿಗೆ ಸ್ನಾನ ಮಾಡಿಸಿ, ಪೂಜೆ ಸಲ್ಲಿಸಿ, ಪಣಿಪುಟ್ಟ್ ತಿನ್ನಿಸಲಾಯಿತು.