ಮದುವೆ ದಿಬ್ಬಣದವರಂತೆ ಬಂದು ದಾಳಿ ನಡೆಸಿದ ಐಟಿ ಅಧಿಕಾರಿಗಳು
ಕೊಡಗು/ಮಡಿಕೇರಿ, ಏಪ್ರಿಲ್ 26 : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾವ್ಯಾವ ರೀತಿಯಲ್ಲಿ ದಾಳಿ ನಡೆಸುತ್ತಾರೆಂಬುದಕ್ಕೆ ಇಲ್ಲೊಂದು ನೂತನ ನಿದರ್ಶನವಿದೆ.
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಸಂಬಂಧಿಕರಿಗೆ ಸೇರಿದ ಎಸ್ಎಲ್ಎನ್ ಸಮೂಹ ಸಂಸ್ಥೆಗಳ ಮೇಲೆ ಬುಧವಾರ ಏಕಕಾಲದಲ್ಲಿ ನಡೆದ ರೈಡ್ ನೋಡಿದರೆ, ಅಚ್ಚರಿಯಾಗದಿರದು. ಚಿದಂಬರಂ ಅವರ ಸಂಬಂಧಿಗಳಾದ ಸಾತಪ್ಪನ್, ವಿಶ್ವನಾಥನ್ ಎಂಬುವರಿಗೆ ಈ ಸಮೂಹ ಸಂಸ್ಥೆಗಳು ಸೇರಿವೆ ಎಂದು ಹೇಳಲಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಮ್ಮ 15ಕ್ಕೂ ಅಧಿಕ ಇನ್ನೋವಾ ಕಾರಿಗೆ ಮದುವೆ ದಿಬ್ಬಣಕ್ಕೆ ಹೊರಡುವ ಹಾಗೆ ಸಿಂಗಾರ ಮಾಡಿದ್ದು, ಕಾರಿನ ಮುಂಭಾಗದಲ್ಲಿ "ಧೀರಜ್ ವೆಡ್ಸ್ ಕಾಜಲ್" ಎಂಬ ಹೆಸರಿನ ಬೋರ್ಡ್ ಹಾಕಿಕೊಂಡು ಹೋಗಿ ದಾಳಿ ಮಾಡಿ ನಡೆಸಿದ್ದಾರೆ.
ಪ್ರತಿಯೊಂದು ಕಾರನ್ನೂ ಪುಷ್ಪ ಗುಚ್ಛಗಳಿಂದ ಆಕರ್ಷಕವಾಗಿ ಅಲಂಕೃತಗೊಳಿಸಲಾಗಿತ್ತಲ್ಲದೆ, ಕಾರಿನಲ್ಲಿ ಕುಳಿತಿದ್ದ ಅಧಿಕಾರಿಗಳೂ ಭರ್ಜರಿ ದಿರಿಸು ತೊಟ್ಟು ಮದುವೆಗೆ ಹೊರಟವರಂತೆ ಕುಳಿತಿದ್ದರು. ಹಾಗಾಗಿ, ನೋಡಿದವರಿಗೆ ಇವರು ಐಟಿ ಅಧಿಕಾರಿಗಳೆಂದು ಯಾರಿಗೂ ಅನ್ನಿಸಿರಲಿಲ್ಲ.
ಅಷ್ಟೇ ಅಲ್ಲ, ದಾಳಿ ನಡೆಸುವ ಅಧಿಕಾರಿಗಳಿಗೆ ಬಿಟ್ಟು ಅದೇ ಕಾರುಗಳಲ್ಲೇ ಪ್ರಯಾಣ ಬೆಳೆಸಿದ ಇತರ ಐಟಿ ಸಿಬ್ಬಂದಿಗಳಿಗೆ, ಕಾರು ಚಾಲಕರಿಗೂ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಹಾಗೆ ಬಂದ ಅಧಿಕಾರಿಗಳು, ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಎಸ್ಎಲ್ಎನ್ ಸಮೂಹ ಸಂಸ್ಥೆಗಳಿಗೆ ಸೇರಿದ ಎಸ್ಎಲ್ಎನ್ ಕಾಫಿ ಕ್ಯೂರಿಂಗ್ ವರ್ಕ್, ಎಸ್ಎಲ್ಎನ್ ಪೆಟ್ರೋಲ್ ಬಂಕ್, ಎಸ್ಎಲ್ಎನ್ ಮಾಲೀಕರಿಗೆ ಸೇರಿದ 2 ಮನೆಗಳು, ಈಡನ್ ಗಾರ್ಡನ್ ಲೇಔಟ್, ಪರ್ಪಲ್ ಪಾರ್ಮ್ ಎಂಬ ರೆಸಾರ್ಟ್ ಮೇಲೆ ದಾಳಿ ನಡೆದಿದೆ.
ಎಸ್ಎಲ್ಎನ್ ಸಮೂಹ ಸಂಸ್ಥೆಗಳ ಮಾಲೀಕರಾದ ವಿಶ್ವನಾಥ್ ಹಾಗೂ ಸಾತಪ್ಪನ್ ಸಹೋದರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕಡತಗಳ ಪರಿಶೀಲನೆ ನಡೆಸಿದ್ದಾರೆ.[ಹೋಟೆಲ್ ಕಬಳಿಕೆ ಆರೋಪ: ಚಿದು ವಿರುದ್ಧ ಸಿಬಿಐ ತೂಗುಗತ್ತಿ?]
ಮೈಸೂರು ಮತ್ತು ಬೆಂಗಳೂರಿನ 50ಕ್ಕೂ ಅಧಿಕ ಐಟಿ ಅಧಿಕಾರಿಗಳು 15ಕ್ಕೂ ಅಧಿಕ ಇನ್ನೋವಾ ವಾಹನಗಳಲ್ಲಿ ಎಸ್ಎಲ್ಎನ್ಗೆ ಸೇರಿದ ಐದಾರು ಕಚೇರಿಗಳ ಮೇಲೆ ಮುಂಜಾನೆ 8 ಗಂಟೆಯ ದಾಳಿ ನಡೆಸಿದ್ದಾರೆ.
ಬೆಳಗ್ಗಿನಿಂದ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಮತ್ತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ವಿರಾಜಪೇಟೆ ತಾಲೂಕಿನ ಪಾಳಿಘಟ್ಟ ಗ್ರಾಮದಲ್ಲಿ ಸುಮಾರು 500 ಎಕರೆ ಕಾಫೀ ತೋಟವಿದ್ದು ಅದನ್ನು ಎಸ್ಎಲ್ಎನ್ ಸಮೂಹ ಸಂಸ್ಥೆಗಳು ನಿರ್ವಹಿಸುತ್ತಿವೆ.
ಅಚ್ಚರಿಯ ವಿಚಾರವೆಂದರೆ, ಬುಧವಾರವಷ್ಟೇ ಪಿ.ಚಿದಂಬರ್ ಅವರ ಕುಟುಂಬವು ತಿರುಪೂರ್ ನಲ್ಲಿ ಹೋಟೆಲೊಂದನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಬಗ್ಗೆ ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು.
ವಿಚಾರಣೆಯಲ್ಲಿ ದಾವೆ ಹೂಡಿರುವವರು ಚಿದಂಬರಂ ವಿರುದ್ಧ ತಾವು 2016ರಲ್ಲೇ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದರು. ಹಾಗಾಗಿ, ವಿಚಾರಣೆ ನಂತರ, ದೆಹಲಿ ನ್ಯಾಯಾಲಯವು ಸಿಬಿಐಗೆ ಈ ಬಗ್ಗೆ ಸ್ಪಷ್ಟನೆ ಕೋರಿದೆ. ಇದರಿಂದಾಗಿ, ಒತ್ತಡದಲ್ಲಿರುವ ಸಿಬಿಐ, ಪಿ.ಚಿದಂಬರಂ ಕುಟುಂಬದ ವಿರುದ್ಧ ಅನಿವಾರ್ಯವಾಗಿ ತನಿಖೆಗೆ ಇಳಿಯಬೇಕಿದೆ.
ಕಾಕತಾಳೀಯವೆಂಬಂತೆ, ಬುಧವಾರವೇ ಇತ್ತ ಕೊಡಗಿನಲ್ಲಿ ಐಟಿ ಅಧಿಕಾರಿಗಳಿಂದ ಚಿದಂಬರಂ ಸಂಬಂಧಿಕರ ಉದ್ಯಮಗಳ ಮೇಲೆ ದಾಳಿ ನಡೆದಿದೆ.