ಮಳೆ ಅವಾಂತರ: ದುರಸ್ತಿಯಾಗದ ಕೊಡಗು-ಕೇರಳ ರಸ್ತೆ
ಮಡಿಕೇರಿ, ಜುಲೈ 25: ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಕೊಡಗು ಕೇರಳ ನಡುವಿನ ರಸ್ತೆ ಸಂಪರ್ಕ ಕಡಿದುಕೊಂಡಿರುವ ಕಾರಣ ಭಾರೀ ನಷ್ಟ ಸಂಭವಿಸಿದೆಯಲ್ಲದೆ, ಸಂಪರ್ಕವಿಲ್ಲದೆ ಪರದಾಡುವಂತಾಗಿದೆ.
ಕೊಡಗು-ಕೇರಳ ಅಂತಾರಾಜ್ಯ ಹೆದ್ದಾರಿ ಪ್ರಮುಖ ಸಂಪರ್ಕ ಕೇಂದ್ರವಾಗಿತ್ತು. ಇದೇ ಮಾರ್ಗವಾಗಿ ದಿನದ 24 ಗಂಟೆ ವಾಹನಗಳು ಸಂಚರಿಸುತ್ತಿದ್ದವು, ಕಣ್ಣಾನೂರು, ತಲಚೇರಿ, ಕೊಡಗು, ಮೈಸೂರು, ಬೆಂಗಳೂರು ಕಡೆಗೆ ಸುಮಾರು 200ಕ್ಕೂ ಅಧಿಕ ಕರ್ನಾಟಕ, ಕೇರಳ ರಾಜ್ಯ ರಸ್ತೆ ಸಾರಿಗೆ, ಖಾಸಗಿ ಸಾರಿಗೆ ಬಸ್, ಪ್ರವಾಸಿ ಬಸ್ಗಳು, ಸಾವಿರಾರು ಕಾರು, ಜೀಪು, ಲಾರಿ, ಆಟೋರಿಕ್ಷಾ, ಗೂಡ್ಸ್ ಆಟೋಗಳು ಸೇರಿ ಹಲವು ರೀತಿಯ ವಾಹನಗಳು ಸಂಚರಿಸುತ್ತಿದ್ದವು. ಆದರೆ ಇದೀಗ ಎಲ್ಲವೂ ಸ್ತಬ್ದಗೊಂಡಿವೆ.
ರಸ್ತೆಯು ಸುಮಾರು 13 ಮೀಟರ್ ಅಗಲ ಕುಸಿತಗೊಂಡಿದ್ದು, ಇದನ್ನು ದುರಸ್ತಿಪಡಿಸಿ ಸಂಪರ್ಕಕ್ಕೆ ಅನುವು ಮಾಡಿಕೊಡುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ. ಸದ್ಯ ಕುಸಿತಗೊಂಡ ಬಿರುಕಿಗೆ ಕಾಡುಕಲ್ಲು, ಸೈಜ್ ಕಲ್ಲುಗಳನ್ನು ಹಾಕುವ ಕಾರ್ಯ ನಡೆಯುತ್ತಿದೆ. ಸುಮಾರು 150 ಲಾರಿ ಕಲ್ಲುಗಳು ಬೇಕಾಗಬಹುದು ಎನ್ನಲಾಗುತ್ತಿದೆ.
ಪ್ರವಾಹದ ನಡುವಲ್ಲೂ ಆ ತಾಯಿಮಗ ಬದುಕಿದ್ದು ಪವಾಡವೇ!
ಈಗಾಗಲೇ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದೆಯಾದರೂ ಮಳೆ ಸುರಿಯುತ್ತಿರುವ ಕಾರಣ ದುರಸ್ತಿ ಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಕಷ್ಟವಾಗಿದೆ.
ವೀರಾಜಪೇಟೆಯಿಂದ ಹಲವಷ್ಟು ಪ್ರಯಾಣಿಕರು ಇರಿಟ್ಟಿ, ತಲಚೇರಿಗೆ ಇದೇ ರಸ್ತೆಯನ್ನು ಅವಲಂಭಿಸಿದ್ದು ಇದೀಗ ಕಾಲುನಡಿಗೆಯಲ್ಲಿ ಪೆರುಂಬಾಡಿ ಕೆರೆ ಏರಿ ಮಾರ್ಗದ ರಸ್ತೆಯನ್ನು ದಾಟಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಮಾಕುಟ್ಟದತ್ತ ಪ್ರಯಾಣಿಸುತ್ತಿರುವುದು ಕಂಡು ಬರುತ್ತಿದೆ.
ಕೇರಳದ ಬಾಡಿಗೆ ಜೀಪುಗಳು ಪೆರುಂಬಾಡಿ ಕೆರೆಯ ಮಾಕುಟ್ಟ ಬದಿಯಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ. ಸದ್ಯ ರಸ್ತೆ ನಿರ್ಮಾಣ ಕಾರ್ಯಕ್ಕೆ ಸುಮಾರು ಐವತ್ತು ಲಕ್ಷ ರೂ. ಖರ್ಚಾಗುವ ಸಾಧ್ಯತೆಯಿದೆ. ವೀರಾಜಪೇಟೆ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಸಿಬ್ಬಂದಿ ವರ್ಗ ಸ್ಥಳದಲ್ಲಿಯೇ ಇದ್ದು ಕಾಮಗಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಕೊಚ್ಚಿಹೋದ ರಸ್ತೆಯ ಬದಿಯಲ್ಲೇ ಕೆರೆಯಿದ್ದು ಅಲ್ಲಿಂದ ನೀರು ಧುಮುಕುತ್ತಿದ್ದು ಒಂದು ರೀತಿಯಲ್ಲಿ ಇಲ್ಲಿ ಜಲಪಾತ ಸೃಷ್ಠಿಯಾದಂತಾಗಿದೆ. ರಸ್ತೆಯ ತಡೆಗೋಡೆಯೂ ಕುಸಿದು ಮಣ್ಣು ಕೊಚ್ಚಿಹೋಗಿದೆ. ರಸ್ತೆ ದುರಸ್ತಿಗೊಳ್ಳಬೇಕಾದರೆ ಇನ್ನೊಂದೆರಡು ವಾರಗಳು ಬೇಕಾಗಬಹುದಾಗಿದ್ದು ಅಲ್ಲಿ ತನಕ ಕೇರಳದ ಕಡೆಗಿನ ಸಂಚಾರ ಬಂದ್ ಮಾಡುವುದು ಅನಿವಾರ್ಯವಾಗಿದೆ.