ಭಾಗಮಂಡಲದಲ್ಲಿ ಭಾರೀ ಮಳೆ: ಉಕ್ಕಿದ ಕಾವೇರಿ, ಜನ ಜೀವನ ಅಸ್ತವ್ಯಸ್ತ
ಮಡಿಕೇರಿ, ಜುಲೈ 20 : ಪ್ರಾರಂಭದಲ್ಲಿ ಮುಂಗಾರ ರಾಜ್ಯದ ಜನತೆಗೆ ಕೊಂಚ ನಿರಾಸೆ ಮೂಡಿಸಿತ್ತಾದರೂ, ಕಳೆದ ಎರಡು ದಿನಗಳಿಂದ ರಾಜ್ಯದ ನಾನಾ ಕಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.
ಕೊಡಗು:ಅಬ್ಬರಿಸುತ್ತಿರುವ ಪುಷ್ಯ ಮಳೆ, ಇಂದು ಶಾಲಾ ಕಾಲೇಜುಗಳಿಗೆ ರಜೆ
ಭಾಗಮಂಡಲದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತ್ರಿವೇಣಿ ಸಂಗಮ ಜಲಾವೃತವಾಗಿದೆ. ಇಲ್ಲಿ ಒಂದೇ ದಿನದಲ್ಲಿ ದಾಖಲೆಯ 287 ಮಿ.ಮೀ. ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೀರು ಸಮೀಪದ ಗದ್ದೆ ಬಯಲು, ತೋಟಗಳಿಗೆ ನುಗ್ಗಿದೆ.
ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ಸರಾಸರಿ 121 ಮಿ.ಮೀ. ಮಳೆ ಸುರಿದಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ತೊರೆ, ನದಿಗಳು ಉಕ್ಕಿಹರಿಯುತ್ತಿದ್ದು, ಅಲ್ಲಲ್ಲಿ ಚಿಕ್ಕಪುಟ್ಟ ಅನಾಹುತಗಳು ಸಂಭವಿಸಿವೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಅಯ್ಯಂಗೇರಿ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಕೊಡಗಿನ ಮೂರು ತಾಲೂಕುಗಳಲ್ಲಿ ಗುರುವಾರ(ಜು.20) ದಂದು ಮಡಿಕೇರಿಯಲ್ಲಿ ಸರಾಸರಿ 156.1 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 126.77 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 82 ಮಿ.ಮೀ. ಮಳೆ ಸುರಿದಿದೆ.
ಉಳಿದಂತೆ ಪೊನ್ನಂಪೇಟೆ 266.2, ನಾಪೋಕ್ಲು 127.6 ಮಿ.ಮೀ.ನಷ್ಟು ಅತ್ಯಧಿಕ ಮಳೆ ಸುರಿದಿದೆ. ಇನ್ನು ಮಡಿಕೇರಿಯ ಸುತ್ತಮುತ್ತ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, 13,596 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಗರಿಷ್ಠ ಮಟ್ಟ 2,859 ಅಡಿಯಿರುವ ಜಲಾಶಯದಲ್ಲಿ ಈಗಿನ ನೀರಿನ ಮಟ್ಟ 2849.73 ಅಡಿಗೇರಿದೆ. ಇದೇ ರೀತಿ ಮಳೆ ಸುರಿದರೆ ಶೀಘ್ರವೇ ಹಾರಂಗಿ ಜಲಾಶಯ ಭರ್ತಿಯಾಗಲಿದೆ.