ಮಡಿಕೇರಿಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಜೆಡಿಎಸ್ ಹರಸಾಹಸ
ಮಡಿಕೇರಿ, ಜುಲೈ 27: ಕೊಡಗಿನಲ್ಲಿ ಇದುವರೆಗೆ ತನ್ನ ಗೆಲುವಿನ ಪತಾಕೆ ಹಾರಿಸದ ಜೆಡಿಎಸ್ ಈ ಬಾರಿಯಾದರೂ ಗೆದ್ದೇ ತೀರಬೇಕೆಂಬ ಹಠಕ್ಕೆ ಬಿದ್ದಿದೆ. ಈ ಹಿಂದೆ ಈ ಪಕ್ಷದಲ್ಲಿ ಒಂದಷ್ಟು ನಾಯಕರು ಕಾಣಿಸಿಕೊಂಡಿದ್ದರಾದರೂ ಇತ್ತೀಚೆಗೆ ಅವರು ತೆರೆಮರೆಗೆ ಸರಿದಿದ್ದಾರೆ.
ಇದೀಗ ಚುನಾವಣೆ ಬರುತ್ತಿದ್ದಂತೆಯೇ ಮತ್ತೆ ಪಕ್ಷಕ್ಕೆ ಜೀವ ಬಂದಂತೆ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಂಕೇತ್ ಪೂವಯ್ಯ ಅವರು ಇದೀಗ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ಮಾಜಿ ಸಚಿವ, ಜೆಡಿಎಸ್ ನ ಜೀವಿಜಯ 'ಕೈ' ಹಿಡಿಯೋದು ವದಂತಿಯಂತೆ!
ಕೆಲವು ತಿಂಗಳುಗಳ ಹಿಂದೆಯಷ್ಟೆ ಹಲವು ಹೋರಾಟ, ಸಂಘಟನೆ ಹೀಗೆ ಚಟುವಟಿಕೆಯಲ್ಲಿದ್ದ ಅವರನ್ನು ಕುಮಾರಸ್ವಾಮಿ ಅವರು ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿದ್ದರು.
ಜಿಲ್ಲೆಯಲ್ಲಿ ಛಿದ್ರವಾಗಿ ಹೋಗಿದ್ದ ಜೆಡಿಎಸ್ ನಾಯಕರನ್ನು ಒಗ್ಗೂಡಿಸುವ ಕೆಲಸವನ್ನು ಉತ್ಸಾಹದಿಂದ ಮಾಡಿದ್ದ ಅವರು ವೀರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇರಾದೆಯಲ್ಲಿದ್ದರು.
ಸಂಕೇತ್ಪೂವಯ್ಯ ಅವರ ಹುಮ್ಮಸ್ಸನ್ನು ಕಂಡು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಹೀಗಿರುವಾಗ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಸಭೆಗಳಲ್ಲಿ ಅವರೇ ಕಾಣಿಸಿಕೊಳ್ಳದಿರುವುದು ಮತ್ತು ಸಭೆ ನಡೆಸಿದ ಮುಖಂಡರು ಹಾರಿಕೆಯ ಉತ್ತರಗಳನ್ನು ನೀಡಿರುವುದನ್ನು ಗಮನಿಸಿದರೆ ಕೊಡಗಿನ ಜೆಡಿಎಸ್ ನಲ್ಲಿ ಒಮ್ಮತ ಮೂಡುವುದು ಕಷ್ಟಸಾಧ್ಯ ಎಂಬುದು ಸಾಬೀತಾಗತೊಡಗಿದೆ.
ವಲಸಿಗರಿಗೆ ಆಧ್ಯತೆ, ಕೊಡಗು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ
ಉತ್ಸಾಹದಿಂದ ಇದ್ದ ಸಂಕೇತ್ಪೂವಯ್ಯ ಅವರು ಮಾಜಿ ಸಂಸದ ಎಚ್.ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಂತೆಯೇ ಮೌನವಾಗಿದ್ದೇಕೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಜೀವಿಜಯ ಜೆಡಿಎಸ್ ಅಭ್ಯರ್ಥಿ?
ಈ ನಡುವೆ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಬಿ.ಎ.ಜೀವಿಜಯ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದು ತಿಳಿಯುತ್ತಿದ್ದಂತೆಯೇ ಕೆಲವರು ಜೀವಿಜಯ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಡಿದ್ದರು. ಅದರೆ ಜೆಡಿಎಸ್ ಮುಖಂಡರು ಇದೀಗ ಬಿ.ಎ.ಜೀವಿಜಯ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಶಕ್ತಿಪ್ರದರ್ಶನಕ್ಕೆ ಸಜ್ಜಾದ ವಿಶ್ವನಾಥ್
ಇನ್ನು ಮಡಿಕೇರಿಯಲ್ಲಿ ಮಾಜಿ ಸಂಸದ ವಿಶ್ವನಾಥ್ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಒಂದಷ್ಟು ಬೆಂಬಲಿಗರನ್ನು ಕಾಂಗ್ರೆಸ್ ನಿಂದ ಎಳೆದು ತಂದು ಜೆಡಿಎಸ್ ಗೆ ಸೇರ್ಪಡೆಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರ ಮೊದಲ ಹೆಜ್ಜೆ ಎನ್ನುವಂತೆ ಕಾಂಗ್ರೆಸ್ ನ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರೂ, ನಗರಸಭಾಸದಸ್ಯರೂ ಆಗಿರುವ ಕೆ.ಎಂ.ಗಣೇಶ್ ಜೆಡಿಎಸ್ ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರೊಂದಿಗೆ ಒಂದಷ್ಟು ಮಂದಿ ಕಾರ್ಯಕರ್ತರು ಜೆಡಿಎಸ್ ಸೇರುವ ಲಕ್ಷಣಗಳಿವೆ.
ಜೆಡಿಎಸ್ ಅಸ್ತಿತ್ವ ಕಾಣುವುದು ಸಾಧ್ಯನಾ?
ಹಾಗೆನೋಡಿದರೆ ಮಡಿಕೇರಿ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ, ಜನ ನಾಯಕರಾದ ಪ್ರಭಾವಿ ವ್ಯಕ್ತಿಗಳು ಜೆಡಿಎಸ್ ನಲ್ಲಿ ಇಲ್ಲ. ಹೀಗಾಗಿ ಜೀವಿಜಯ ಹೊರತುಪಡಿಸಿದರೆ ಬೇರೆ ಯಾರೂ ಕಾಣಿಸುತ್ತಿಲ್ಲ. ಮಾಜಿ ಸಚಿವ ಎಂ.ಸಿ.ನಾಣಯ್ಯ ರಾಜಕೀಯದಿಂದಲೇ ದೂರ ಸರಿದಿದ್ದಾರೆ. ಉಳಿದಂತೆ ಸಣ್ಣಪುಟ್ಟ ನಾಯಕರಷ್ಟೆ ಕಾಣಸಿಗುತ್ತಿದ್ದಾರೆ. ಅವರನ್ನೇ ಬಳಸಿಕೊಂಡು ಕೊಡಗಿನಲ್ಲಿ ಜೆಡಿಎಸ್ ಅನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೊರಟಿದ್ದಾರೆ. ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಬದಿಗೊತ್ತಿ ಜೆಡಿಎಸ್ ಅಸ್ತಿತ್ವ ಕಾಣುವುದು ಸಾಧ್ಯನಾ ಎಂಬುದು ಪ್ರಶ್ನೆಯಾಗಿ ಕಾಣುತ್ತಿದೆ.
20-20 ಸರ್ಕಾರದ ಸಾಧನೆ ಮತನೀಡೀತೆ?
ನಿನ್ನೆ ಮೊನ್ನೆ ನಡೆದಿದ್ದನ್ನೇ ಮರೆಯುವ ಈ ಕಾಲದಲ್ಲಿ ಹಲವು ವರ್ಷಗಳ ಹಿಂದಿನ ಹೆಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಅವಧಿಯ ಆಡಳಿತವನ್ನು ಮುಂದಿಟ್ಟುಕೊಂಡು ಮತಪಡೆಯುತ್ತೇವೆ ಎಂದು ಹೊರಟಿರುವ ಸ್ಥಳೀಯ ನಾಯಕರ ಉತ್ಸಾಹಕ್ಕೆ ಅದ್ಯಾವ ಪ್ರತಿಕ್ರಿಯೆ ಸಿಗುತ್ತೋ ಕಾದು ನೋಡಬೇಕಿದೆ.