ದಿಡ್ಡಳ್ಳಿ ಗುಂಡಿನ ದಾಳಿ ಪ್ರಕರಣ:ಆರೋಪಿ ಬಂಧನ
ದಿಡ್ಡಳ್ಳಿಯ ಆದಿವಾಸಿ ಗುಡಿಸಿಲಿನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕಾಫಿ ತೋಟದ ಮಾಲೀಕ ಪೂಣಚ್ಚ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಇದು ನಕ್ಸಲ್ ಕೃತ್ಯವಲ್ಲ ಎಂಬುದು ದೃಢವಾಗಿದೆ.
ಮಡಿಕೇರಿ, ಏಪ್ರಿಲ್ 13: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಗ್ರಾಮದಲ್ಲಿ ಆದಿವಾಸಿಗಳ ಗುಡಿಸಲಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿದ್ದಾಪುರ ಠಾಣೆ ಪೊಲೀಸರು ಬೆಳೆಗಾರನೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಸೋಮವಾರಪೇಟೆ ತಾಲೂಕಿನ ಚೆನ್ನಂಗಿ ಸಮೀಪದ ಗುಡ್ಲೂರು ಕಾಫಿ ತೋಟದ ಮಾಲಿಕ ಪೂಣಚ್ಚ(50) ಎಂದು ತಿಳಿದು ಬಂದಿದೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.[ಆದಿವಾಸಿ ಗುಡಿಸಿಲಿನ ಮೇಲೆ ಗುಂಡಿನ ದಾಳಿ: ಕೊಡಗಿನಲ್ಲಿ ನಕ್ಸಲರ ಅಟ್ಟಹಾಸ?!]
ಗುಂಡು ಹಾರಿಸಿರುವುದು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದೇ ಹೊರತು, ಇದರ ಹಿಂದೆ ಯಾವುದೇ ನಕ್ಸಲ್ ಕೈವಾಡವಿಲ್ಲ ಎಂಬುದು ದೃಡವಾಗಿದೆ. ಹಾಡಿ(ಗುಡಿಸಲು)ಯಲ್ಲಿದ್ದ ಆದಿವಾಸಿಗಳು ಕೂಲಿಗೆ ಬರುವುದಾಗಿ ಹಣ ಪಡೆದು ಬಾರದ ಕಾರಣದಿಂದ ಕೋಪಗೊಂಡು ಅವರ ಮೇಲೆ ತೋಟದ ಮಾಲಿಕ ಪೂಣಚ್ಚ ಎಂಬುವವರೇ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಸ್ವತಃ ಪೂಣಚ್ಚ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ.
ದಿಡ್ಡಳ್ಳಿಯಲ್ಲಿ ನೆಲೆಸಿರುವ ನಿರಾಶ್ರಿತರಲ್ಲಿ ಕೆಲವರು ಪೂಣಚ್ಚ ಅವರ ಬಳಿ ತೋಟದ ಕೆಲಸಕ್ಕೆ ಬರುವುದಾಗಿ ಹೇಳಿ ಮುಂಗಡವಾಗಿ ಹಣ ಪಡೆದಿದ್ದರು. ಹಣ ಪಡೆದ ಮೇಲೂ ತೋಟಕ್ಕೆ ಬಾರದ ಇವರೊಂದಿಗೆ ಪೂಣಚ್ಚ ಜಗಳ ಆಡಿದ್ದರು ಎನ್ನಲಾಗಿದೆ. ನಂತರ ಮನೆಗೆ ತೆರಳಿ ಪಾನಮತ್ತರಾಗಿ ಬಂದು ಮಧ್ಯರಾತ್ರಿ 10ರ ಸಮಯದಲ್ಲಿ ಇವರ ಗುಡಿಸಿಲಿನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದನು. ಈ ವೇಳೆ ಕೋವಿಯಿಂದ ಹಾರಿದ ಗುಂಡುಗಳ ಪೈಕಿ ಒಂದು ಗುಡಿಸಿಲಿನ ಟಾರ್ಪಲ್ ನ ಸೀಳಕೊಂಡು ಹೋಗಿದ್ದರೆ ಮತ್ತೆರಡು ಗಾಳಿಯಲ್ಲಿ ಹಾರಿದೆ ಎನ್ನಲಾಗಿದೆ.
ಘಟನೆ ನಡೆದ ಬಳಿಕ ನಕ್ಸಲ್ ದಾಳಿ ಎಂದು ಶಂಕಿಸಿ ಇಲ್ಲಿನ ಸಿದ್ದಾಪುರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಗುಂಡು ಹಾರಿಸಿದ ದುಷ್ಕರ್ಮಿಯನ್ನು ಗುಡ್ಲೂರಿನ ಅವರ ತೋಟದಲ್ಲಿ ಬುಧವಾರ ಸಂಜೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ನಡುವೆ ಪೂಣಚ್ಚ ಅವರ ಕುಟುಂಬಸ್ಥರು ಪೊಲೀಸ್ ಠಾಣೆಗೆ ಆಗಮಿಸಿ ಬಂಧಿತ ಪೂಣಚ್ಚ ಮಾನಸಿಕ ಅಸ್ವಸ್ಥನಾಗಿದ್ದು, ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ