ಕೊಡವರ ನಿಸರ್ಗ ಆರಾಧನೆ ಸಾಕ್ಷಿಯಾದ 'ದೇವರಕಾಡು'
ಮಡಿಕೇರಿ, ಜುಲೈ 13: ಅನಾದಿಕಾಲದಿಂದಲೂ ಕೊಡಗಿನ ಜನ ಪ್ರಕೃತಿಯ ಆರಾಧಕರಾಗಿ, ಅದರ ಒಡನಾಟದಲ್ಲಿ ಬೆಳೆದು ಬಂದಿದ್ದಾರೆ ಎನ್ನುವುದಕ್ಕೆ ಪ್ರತಿ ಊರಿನಲ್ಲಿ ಕಾಣಸಿಗುವ ದೇವರಕಾಡುಗಳೇ ಸಾಕ್ಷಿಯಾಗಿವೆ.
ಕೃಷಿಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಬೆಟ್ಟಗುಡ್ಡ, ನೀರಿನಾಶ್ರಯವಿರುವ ಸ್ಥಳದಲ್ಲಿ ನೆಲೆಯೂರುತ್ತಿದ್ದ ಜನ ತಮಗೆ ಸಾಮರ್ಥ್ಯವಿರುವಷ್ಟು ಪ್ರದೇಶದಲ್ಲಿ ಗದ್ದೆಯನ್ನು ನಿರ್ಮಿಸಿ ಭತ್ತ, ತರಕಾರಿ, ಗೆಡ್ಡೆಗೆಣಸು, ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗೆ ಪೂರಕವಾದ ಸಲಕರಣೆಗಳನ್ನು ಕಾಡುಗಳಲ್ಲಿ ಸಿಗುವ ಗಟ್ಟಿಮುಟ್ಟಾದ ಕಾಡು ಮರಗಳಿಂದ ತಯಾರು ಮಾಡುತ್ತಿದ್ದರು.
ಕೊಡಗಿನ ಕೃಷಿಕರ ನಿದ್ದೆಗೆಡಿಸಿದ ವನ್ಯಪ್ರಾಣಿಗಳು!
ತಾನು ಕೃಷಿ ಮಾಡುತ್ತಿದ್ದ ಪ್ರದೇಶಗಳಲ್ಲಿ ತನ್ನ ಕೃಷಿ ಕಾರ್ಯಕ್ಕೆ ಹೆಗಲಾಗಿ ದುಡಿಯುವ ಜಾನುವಾರುಗಳಿಗೆ ಕ್ರೂರ ಪ್ರಾಣಿಗಳಿಂದ ತೊಂದರೆಯಾಗದಿರಲಿ, ಕೃಷಿಯನ್ನು ವನ್ಯಪ್ರಾಣಿಗಳು ನಾಶಮಾಡದಿರಲಿ ಎಂದು ಹೆಮ್ಮರದ ಬುಡದಲ್ಲಿ ಕಲ್ಲನ್ನಿಟ್ಟು, ಅದನ್ನು ದೇವರ ರೂಪದಲ್ಲಿ ಪೂಜಿಸುತ್ತಿದ್ದರು. ಪ್ರತಿವರ್ಷ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದನು. ಮನೆಗಳಲ್ಲಿ ಸಾಕು ಪ್ರಾಣಿಗಳು ವೃದ್ಧಿಯಾಗದಿದ್ದಾಗ ಹರಕೆ ಹೊತ್ತು ಬಳಿಕ ವರ್ಷದ ಹಬ್ಬದ ಸಂದರ್ಭದಲ್ಲಿ ಒಪ್ಪಿಸಲಾಗುತ್ತಿತ್ತು. ಹೀಗೆ ಹುಟ್ಟಿಬಂದ ವನದೇವರು ಇವತ್ತಿಗೂ ಜಿಲ್ಲೆಯ ಹಲವೆಡೆ ವಿವಿಧ ಅವತಾರಗಳಲ್ಲಿ ಪೂಜಿಸಲ್ಪಡುತ್ತಿವೆ.
'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..!
ನಾಗರಿಕತೆ ಬೆಳೆದಂತೆಲ್ಲ ಗದ್ದೆಯೊಂದಿಗೆ ಕಾಫಿ, ಏಲಕ್ಕಿ ತೋಟಗಳು ಹೆಚ್ಚಾಗತೊಡಗಿದವು. ಈ ವೇಳೆ ಕಾಡುಗಳೆಲ್ಲವೂ ಮಾಯವಾಗತೊಡಗಿತ್ತು. ಈ ಸಂದರ್ಭ ಹಿರಿಯರು ಕಾಡನ್ನು ಉಳಿಸುವ ಸಲುವಾಗಿ ತಾವು ಪೂಜಿಸಿಕೊಂಡು ಬಂದಿದ್ದ ವನದೇವತೆಗಾಗಿ ಕಾಡನ್ನು ಆಯಾಯ ಊರಿನ ಸಾಮರ್ಥ್ಯಕ್ಕೆ ತಕ್ಕಂತೆ ಮೀಸಲಿಟ್ಟರು. ಅದು ಇವತ್ತಿಗೂ ದೇವರಕಾಡಾಗಿಯೇ ಉಳಿದು ಬಂದಿದೆ.
ಒಂದೊಂದು ಕಾಡಿಗೂ ಒಬ್ಬೊಬ್ಬ ದೇವರು!
ಈ ದೇವರ ಕಾಡುಗಳಲ್ಲಿ ಭದ್ರಕಾಳೇಶ್ವರಿ, ಭದ್ರಕಾಳಿ, ವನಭದ್ರಕಾಳಿ, ಬೇಟೆ ಅಯ್ಯಪ್ಪನಾಗಿ ದೇವರು ನೆಲೆ ನಿಂತಿದ್ದು, ಒಂದೊಂದು ಊರುಗಳಲ್ಲಿರುವ ದೇವರಕಾಡುಗಳಲ್ಲಿ ಒಂದೊಂದು ರೀತಿಯ ದೇವರನ್ನು ಪೂಜಿಸುವುದನ್ನು ಕೊಡಗಿನಾದ್ಯಂತ ಕಾಣಬಹುದು. ಕೆಲವು ಕಡೆ ದೇವರಕಾಡಿನ ಆಧಿದೈವದ ಪೂಜೆ ವರ್ಷಕ್ಕೊಮ್ಮೆ ನಡೆದರೆ, ಮತ್ತೆ ಕೆಲವೆಡೆ ಎರಡು ವರ್ಷಕ್ಕೊಮ್ಮೆ ಹಬ್ಬವನ್ನು ಊರಿನವರು ನಡೆಸುತ್ತಾರೆ.
ಗುಡಿಕಟ್ಟುವುದೂ ನಿಷಿದ್ಧ
ಬಹಳಷ್ಟು ದೇವರಕಾಡುಗಳು ಊರಿನ ಒಳಭಾಗದಲ್ಲಿದ್ದು, ಅದರ ವ್ಯಾಪ್ತಿಯ ಕುಟುಂಬಸ್ಥರು ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುತ್ತಾರೆ. ಹುತ್ತರಿ ಹಬ್ಬದ ದಿನ ಭತ್ತದ ಕದಿರು ಕೊಯ್ದು ದೇವರಿಗೆ ಅರ್ಪಿಸುತ್ತಾರೆ. ಇಲ್ಲಿರುವ ದೇವರ ಕಾಡುಗಳಲ್ಲಿ ಕೆಲವು ದೇವರಿಗೆ ಮಾತ್ರ ಗುಡಿಗೋಪುರವಿದೆ. ಕೆಲವು ದೇವರಿಗೆ ಗುಡಿಕಟ್ಟುವುದು ನಿಷಿದ್ಧವಾಗಿದ್ದು, ಮರದ ಬುಡವೇ ಆ ದೇವರುಗಳ ನೆಲೆಯಾಗಿದೆ. ಇವತ್ತು ಬಹಳಷ್ಟು ಗ್ರಾಮಗಳಲ್ಲಿರುವ ದೇವರಕಾಡುಗಳ ಉಸ್ತುವಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಂಡಿದ್ದರೂ ವರ್ಷಕ್ಕೊಮ್ಮೆ ಪೂಜೆ ಪುರಸ್ಕಾರವನ್ನು ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ.
ಕಗ್ಗೊಡ್ಲುವಿನ ದೇವರ ಕಾಡು
ಮಡಿಕೇರಿ ಬಳಿಯ ಕಗ್ಗೋಡ್ಲುವಿನ ದೇವರ ಕಾಡಿನಲ್ಲಿ ದೇವರ ನೆಲೆಯಿದ್ದು, ಇಲ್ಲಿ ವರ್ಷದ ಕೊನೆಯಲ್ಲಿ ಇಲ್ಲಿರುವ ಆದಿದೈವ ಬೇಟೆ ಅಯ್ಯಪ್ಪನಿಗೆ ಒಂದು ತಿಂಗಳ ಕಾಲ ಪೂಜೆ ಸಲ್ಲಿಸಿ ಕೊನೆಯ ದಿನ ಸುತ್ತಮುತ್ತಲ ಕುಟುಂಬಸ್ಥರು ಸೇರಿ ಪೂಜಾ ಕಾರ್ಯವನ್ನು ನೆರವೇರಿಸುತ್ತಾರೆ. ಈ ವೇಳೆ ಅಲ್ಲಿಯೇ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ತಾವು ಊಟ ಮಾಡಿ ಮನೆಯ ಕಡೆಗೆ ಮರಳುತ್ತಾರೆ.
ಅರಣ್ಯ ಉಳಿಸುವುದೇ ಮೂಲ ಉದ್ದೇಶ
ತಮ್ಮ ಗ್ರಾಮಗಳಲ್ಲಿರುವ ದೇವರ ಕಾಡಿನಲ್ಲಿ ನೆಲೆನಿಂತ ದೇವರನ್ನು ಪೂಜಿಸುವ ಆರಾಧಿಸುವ ಕ್ರಮಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿದ್ದರೂ ಮೂಲ ಉದ್ದೇಶ ಮಾತ್ರ ಒಂದೇ. ಅದು ಅರಣ್ಯವನ್ನು ಕಾಪಾಡುವುದು ಎಂಬುದಂತು ಸತ್ಯ.