ಕೊಡಗಿನ ಅಂಗನವಾಡಿಗಳಿಗೆ ಹೊಸ ಮೆರಗು!
ಮಡಿಕೇರಿ, ಜನವರಿ 10: ಅಂಗನವಾಡಿ ಎಂದರೆ ನಮ್ಮ ಕಣ್ಣಮುಂದೆ ಗ್ರಾಮೀಣ ಪ್ರದೇಶ, ಮಾಸಲು ಬಟ್ಟೆ ತೊಟ್ಟ ಮಕ್ಕಳು, ಹಾಡುಹೇಳಿಕೊಂಡು ಓಡಾಡುವ ಕಾರ್ಯಕರ್ತೆಯರು, ಮತ್ತು ಅಡುಗೆ ತಯಾರಿಸುವ ಸಹಾಯಕಿಯರು ಕಂಡು ಬರುತ್ತಾರೆ. ಇಂತಹ ಅಂಗನವಾಡಿಗಳಿಗೆ ಆಧುನಿಕ ಸ್ಪರ್ಶ ನೀಡಲು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮುಂದಾಗಿದ್ದಾರೆ.[ಮೈಸೂರು : ಸ್ವಂತ ಸೂರಿಲ್ಲದ ಹುಣಸೂರಿನ ಅಂಗನವಾಡಿಗಳು]
ಮಡಿಕೇರಿ ತಾಲೂಕಿನ 10 ವೃತ್ತದ ಪೈಕಿ ಮಡಿಕೇರಿ ಕಸಬಾ, ಮೂರ್ನಾಡು, ಮರಗೋಡು, ಚೇರಂಬಾಣೆ ಈ ನಾಲ್ಕು ವೃತ್ತದ 91 ಅಂಗನವಾಡಿಗಳ ಜವಾಬ್ದಾರಿಯನ್ನು ಮೇಪಾಡಂಡ ಸವಿತಾ ಕೀರ್ತನ್ ಹೊಂದಿದ್ದಾರೆ. ಇಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಖಾಸಗಿ ನರ್ಸರಿಗಳಂತೆ ಪರಿವರ್ತಿಸಿ ಆ ಮೂಲಕ ಮಕ್ಕಳು ಮತ್ತು ಪೋಷಕರನ್ನು ಅಂಗನವಾಡಿಯತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಇದನ್ನು ಸೆಪ್ಟಂಬರ್ 2015ರಿಂದ ಆರಂಭಿಸಿದ್ದು, ಮೊದಲಿಗೆ ಅದು ಕಷ್ಟವಾಗಿ ಕಂಡರೂ ಕ್ರಮೇಣ ಎಲ್ಲರ ಸಹಕಾರದೊಂದಿಗೆ ಸಕಾರವಾಗುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗುತ್ತಿದೆ.
ಸರಕಾರದಿಂದ ದೊರೆಯುವ ಸವಲತ್ತನ್ನು ಪರಿಣಾಮಕಾರಿಯಾಗಿ ಬಳಸಿದ್ದಲ್ಲದೆ, ದಾನಿಗಳ ಸ್ವ ಇಚ್ಚೆಯಂತೆ ಕೊಡುಗೆ ಪಡೆದು ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಖಾಸಗಿ ನರ್ಸರಿಗಳಂತೆ ಸಮವಸ್ತ್ರ, ಅಗತ್ಯವಿರುವ ಕುರ್ಚಿ, ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಕುರಿತು ಇರುವ ಗೋಡೆ ಬರಹ, ಕೇಂದ್ರದ ಒಳಾಂಗಣ ಅಡುಗೆ ಮನೆ, ಸ್ವಚ್ಛತೆಗೆ, ಕಪಾಟು, ಆಟಿಕೆ ಇಡಲು ವ್ಯವಸ್ಥೆ, ಮಕ್ಕಳಿಗೆ ಮಧ್ಯಾಹ್ನ ಮಲಗಲು ಹಾಸಿಗೆ ಎಲ್ಲದರ ವ್ಯವಸ್ಥೆ ಮಾಡಲಾಗುತ್ತಿದೆ. ತಮ್ಮೂರಿನ ಅಂಗನವಾಡಿಯ ಅಭಿವೃದ್ಧಿಗೆ ಗ್ರಾಮಸ್ಥರು ಕೈಜೋಡಿಸುತ್ತಿರುವುದರಿಂದ ಸವಿತಾ ಕೀರ್ತನ್ ಅವರ ಕಾರ್ಯಕ್ಕೆ ಉತ್ತಮವಾದ ಸ್ಪಂದನೆ ದೊರೆಯುತ್ತಿದೆ.
ಇನ್ನು ಖಾಸಗಿ ನರ್ಸರಿ ಶಾಲೆಗಳಲ್ಲಿ ನಡೆಸುವಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸಾಮೂಹಿಕ ಮಕ್ಕಳ ದಿನಾಚರಣೆ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಚಿಕ್ಕಂದಿನಿಂದಲೇ ಅವರನ್ನು ಚಟುವಟಿಕೆಯಲ್ಲಿ ತೊಡಗಿಸುವ ಪ್ರಯತ್ನಗಳು ನಡೆಯುತ್ತಿವೆ.
ಪ್ರಸ್ತುತ 35 ಅಂಗನವಾಡಿಗಳಲ್ಲಿ ಸಮವಸ್ತ್ರ, 25 ಕಡೆ ತರಕಾರಿ ಕೈತೋಟ, 12 ಕಡೆ ಗೋಡೆ ಬರಹ, 25 ಕಡೆ ಹೂ ಕುಂಡ ನಿರ್ಮಾಣದ ಕಾರ್ಯವೂ ನಡೆಯುತ್ತಿದೆ. ಇದರ ಜೊತೆಯಲ್ಲಿ ಅಂಗನವಾಡಿ ಕೇಂದ್ರದ ಸುತ್ತ ಸ್ಥಳಾವಕಾಶವಿದ್ದಲ್ಲಿ ಅಲ್ಲಿ ಕೈತೋಟ ನಿರ್ಮಾಣದ ಕಾರ್ಯವೂ ನಡೆಯುತ್ತಿದೆ. ಇಲ್ಲಿ ತರಕಾರಿ ಬೆಳೆಯುವ ಕೆಲಸವೂ ಆಗುತ್ತಿದೆ. ಇನ್ನು ಅಂಗನವಾಡಿಗೆ ಬರುವ ಮಗುವಿನ ಪೋಷಕರಿಂದ ಹೂಕುಂಡ ಪಡೆದು ಅದರಲ್ಲಿ ಗಿಡವೊಂದನ್ನು ನೆಟ್ಟು ಅದಕ್ಕೆ ನೀರೆಯುವ ಪೋಷಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲು ಸಹಕಾರಿಯಾಗುತ್ತಿದೆ.
ಒಟ್ಟಾರೆ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುವಲ್ಲಿ ಮೇಪಾಡಂಡ ಸವಿತಾ ಕೀರ್ತನ್ ಹಿಂದೆ ಬೀಳದೆ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಮೂಲಕ ಅಂಗನವಾಡಿಗಳಿಗೆ ಹೊಸ ಮೆರಗು ನೀಡುತ್ತಿದ್ದಾರೆ.