ವಿಶೇಷ ವರದಿ: ಕೊಡಗಿನಲ್ಲೊಂದು ವಿಶಿಷ್ಟ ಬೇಡು ಹಬ್ಬ!
ಕೊಡಗಿನಲ್ಲಿ ಅಲ್ಲಲ್ಲಿ ಬೇಡು ಹಬ್ಬ ನಡೆಯುತ್ತಿದ್ದು, ಒಂದೊಂದು ಊರಲ್ಲಿ ಒಂದೊಂದು ರೀತಿಯ ವಿಶೇಷತೆಯನ್ನು ಕಾಣಬಹುದು. ಕೆಲವೆಡೆ ವೇಷ ಹಾಕಿ ಬೇಡಿದರೆ, ಮತ್ತೊಂದೆಡೆ ಬಾಯಿಗೆ ಬಂದಂತೆ ಬೈಯ್ಯುವುದು ಕಾಣುತ್ತದೆ.
ಮಡಿಕೇರಿ, ಮೇ 19: ದಕ್ಷಿಣ ಕೊಡಗಿನಲ್ಲಿ ನಡೆಯುವ ಹಬ್ಬಗಳಲ್ಲೊಂದಾದ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಮೇ. 20 ಮತ್ತು 21 ರಂದು ನಡೆಯಲಿದ್ದು, ಸರ್ವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೊಡಗಿನಲ್ಲಿ ಅಲ್ಲಲ್ಲಿ ಬೇಡು ಹಬ್ಬ ನಡೆಯುತ್ತಿದ್ದು, ಒಂದೊಂದು ಊರಲ್ಲಿ ಒಂದೊಂದು ರೀತಿಯ ವಿಶೇಷತೆಯನ್ನು ಕಾಣಬಹುದು. ಕೆಲವೆಡೆ ವೇಷ ಹಾಕಿ ಬೇಡಿದರೆ, ಮತ್ತೊಂದೆಡೆ ಬಾಯಿಗೆ ಬಂದಂತೆ ಬೈಯ್ಯುವುದು ಕಾಣುತ್ತದೆ. ಆದರೆ ಇಲ್ಲಿ ಸ್ವಲ್ವ ವಿಭಿನ್ನವಾಗಿದ್ದು, ತಾವೇ ಅವಲಕ್ಕಿ ತಯಾರಿಸಿ ಸೇವಿಸುವುದು, ಕೆಸರು ಎರಚಾಡುವುದು ಮುಖ್ಯವಾಗಿ ಕಂಡು ಬರುತ್ತದೆ.
ಎರಡು ದಿನಗಳ ಕಾಲ ನಡೆಯುವ ಹಬ್ಬವನ್ನು ಗ್ರಾಮಸ್ಥರು ತುಂಬಾ ಕಟ್ಟುನಿಟ್ಟಾಗಿ ಆಚರಿಸುವುದನ್ನು ಇಲ್ಲಿ ಕಾಣಬಹುದು. ಹಿಂದಿನಿಂದಲೂ ನಡೆದುಕೊಂಡು ಬಂದ ಹಬ್ಬದ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಲಾಗುತ್ತಿದೆ. ಅದರಂತೆ ಮೇ. 20ರಂದು ಗುಂಡಿಯತ್ತ್ ಅಯ್ಯಪ್ಪ ದೇವರ ಅವುಲ್ ಹಾಗೂ ರಾತ್ರಿ ಮನೆ ಮನೆ ಕಳಿ ಊರು ತಕ್ಕರಾದ ಚಮ್ಮಟೀರ ಮನೆಯಿಂದ ಹೊರಡುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದೆ.
ಅಂದು ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ ಪೆÇಲವಂದೆರೆ' ಹೊರಡುತ್ತದೆ. ಬಳಿಕ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೆÇಲವಪ್ಪಂಡ ಕೋಟದಲ್ಲಿ (ದೇವಸ್ಥಾನ) ನೆರೆದ ಪುರುಷ, ಮಹಿಳೆಯರು, ಮಕ್ಕಳ ಸಮ್ಮುಖದಲ್ಲಿ ಇಬ್ಬರು ಕೊಡವ ಪೂಜಾರಿಗಳು (ಒಬ್ಬರು ಚಮ್ಮಟೀರ ಹಾಗೂ ಮತ್ತೊಬ್ಬರು ಮೂಕಳೇರ) ಕಟ್ಟುನಿಟ್ಟಿನ ವೃತ ಕೈಗೊಂಡು ಮೂಕಳೇರ ಬಲ್ಯಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸುತ್ತಾರೆ. ಇದೇ ವೇಳೆ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಕುಟ್ಟಿ ಅವಲಕ್ಕಿಯನ್ನು ತಯಾರು ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ.
ಈ ಹಬ್ಬದ ಇನ್ನಿತರ ಆಚರಣೆಗಳು ಇಲ್ಲಿವೆ ನಿಮಗಾಗಿ...
ವಿಶೇಷ ಪೂಜೆ
ಬಳಿಕ ಪೂಜಾರಿಗಳಿಬ್ಬರು ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಕುಟ್ಟಿ ತಯಾರಿಸಿದ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಮಾಡಿದ ಪ್ರಸಾದವನ್ನು ನೀಡುತ್ತಾರೆ. ಇದೇ ವೇಳೆ ಅಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ.
ಆ ನಂತರ ಸಂಜೆಯಾಗುತ್ತಿದ್ದಂತೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. (ಇಲ್ಲಿಗೆ ಮಹಿಳೆಯರು ತೆರಳುವುದಿಲ್ಲ. ಈ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ಬ್ರಾಹ್ಮಣರ ಪೂಜೆಯೂ ನಿಷೇಧವಾಗಿದೆ.) ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸÀಲಾಗುತ್ತದೆ.ಕೊಬರಿ ತಿನ್ನುವ ಮೂಲಕ ಉಪವಾಸಕ್ಕೆ ಅಂತ್ಯ
ನೂರಾರು ತೆಂಗಿನಕಾಯಿಗಳನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆಯುತ್ತಾರೆ. ಇಲ್ಲಿಂದ ಹೊರಟು ಇಲ್ಲಿನ ಸಮೀಪದ ನಿಗದಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ತಾವು ಕೈಗೊಂಡಿದ್ದ ಉಪವಾಸ ವೃತವನ್ನು ಅಂತ್ಯಗೊಳಿಸಿ ಮೂಕಳೇರ ಹಿರಿಮನೆಯಲ್ಲಿ ಸಾಮೂಹಿಕ ಬೋಜನ ಮಾಡುತ್ತಾರೆ.
ಆ ನಂತರ ಚಮ್ಮಟೀರ ಹಿರಿಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆ ಹೊರಡುತ್ತಾರೆ ಅಲ್ಲಿಗೆ ಮೊದಲ ದಿನ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.
ಅಂಬಲಕ್ಕೆ ತೆರಳುವ ಭಕ್ತರು
ಎರಡನೆಯ ದಿನವಾದ ಮೇ.21ರಂದು ಮಧ್ಯಾಹ್ನದ ನಂತರ ಹಬ್ಬದ ಕೈಂಕರ್ಯಗಳು ಆರಂಭವಾಗುತ್ತವೆ. ಚಮ್ಮಟೀರ ಹಾಗೂ ಮೂಕಳೇರ ಕುಟುಂಬದ ಮನೆಯಿಂದ ಕೃತಕವಾದ ಒಂದೊಂದು ಕುದುರೆ ಹಾಗೂ ಮೊಗವನ್ನು ಸಿಂಗಾರ ಮಾಡಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ.
ದೇಗುಲಕ್ಕೆ ಮೂರು ಸುತ್ತು
ಎರಡು ಕುಟುಂಬದವರು ಕೃತಕ ಕುದುರೆಯೊಂದಿಗೆ ಆಗಮಿಸಿ ಮುಖಾಮುಖಿ ಆಗುತ್ತಿದ್ದಂತೆಯೇ ಪರಸ್ಪರ ಅಲಂಗಿಸಿಕೊಂಡು ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಹಿರಿಯರು, ಕಿರಿಯರು, ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿಕೊಳ್ಳುತ್ತಾ ಅಲಂಗಿಸಿಕೊಳ್ಳುತ್ತಾರೆ. ಆ ನಂತರ ಎಲ್ಲರೂ ಒಟ್ಟಾಗಿ ಸೇರಿ ಕುಣಿಯುತ್ತಾರೆ. ಹೀಗೆ ಕುಣಿಯುತ್ತಾ ಭದ್ರಕಾಳಿ ದೇವಸ್ಥಾನಕ್ಕೆ ಮೂರು ಸುತ್ತು ಬಂದು ಕಾಣಿಕೆ ಹಾಕಲಾಗುತ್ತದೆ ಅಲ್ಲಿಗೆ ಎರಡು ದಿನಗಳಿಂದ ನಡೆದ ಹಬ್ಬ ಮುಕ್ತಾಯವಾಗುತ್ತದೆ.
ಆಧುನಿಕವಾಗಿ ಎಷ್ಟೇ ಮುಂದುವರೆದರೂ ಹಿಂದಿನ ಕಾಲದಿಂದಲೂ ಹಿರಿಯರು ಆಚರಿಸಿಕೊಂಡು ಬಂದಂತ ಹಬ್ಬಗಳನ್ನು ಕೊಡಗಿನಲ್ಲಿ ಚಾಚೂ ತಪ್ಪದೆ ನಡೆಸಲಾಗುತ್ತದೆ ಎಂಬುದಕ್ಕೆ ಈ ಹಬ್ಬವೇ ಸಾಕ್ಷಿಯಾಗಿದೆ.
ಊರವರೆಲ್ಲರ ಸಂಧಿಸುವ ಸುಯೋಗ
ಸಾಮಾನ್ಯವಾಗಿ ಗ್ರಾಮದಲ್ಲಿ ನಡೆಯುವ ಹಬ್ಬಕ್ಕೆ ದೂರದಲ್ಲಿ ನೆಲೆಸಿದ್ದರೂ ಕೂಡ ಬಂದೇ ಬರುತ್ತಾರೆ. ಕುಟುಂಬದ, ಊರಿನವರೊಂದಿಗೆ ಬೆರೆತು ಒಂದಷ್ಟು ಸಮಯವನ್ನು ಕಳೆದು ಹಿಂತಿರುಗುತ್ತಾರೆ. ಸೇನೆಯಲ್ಲಿ ಕಾರ್ಯನಿರ್ವಹಿಸುವ ಹೆಚ್ಚಿನ ಜನ ಗ್ರಾಮದ ಹಬ್ಬಗಳಿಗೆ ರಜೆ ಪಡೆದು ಬರುವುದನ್ನು ಕಾಣಬಹುದು. ವರ್ಷಕ್ಕೊಮ್ಮೆ ರಜೆಯಲ್ಲಿ ಬರುವ ಯೋಧರು ಗ್ರಾಮದ ಹಬ್ಬಕ್ಕೆ ಬಂದು ಊರವರೆಲ್ಲರೊಂದಿಗೆ ಬೆರೆಯುವುದನ್ನು ಕಾಣಬಹುದು.