ಮಡಿಕೇರಿಗೂ ಬಂದ ಸರಗಳ್ಳರು, ಶಿವರಾತ್ರಿಯಂದೇ ಸರ ಕಸಿದೊಯ್ದರು!
ಮಡಿಕೇರಿ, ಫೆಬ್ರವರಿ 27: ಇದುವರೆಗೆ ಬೆಂಗಳೂರು, ಮೈಸೂರು ಮುಂತಾದೆಡೆ ರಾಜಾರೋಷವಾಗಿ ನಡೆಯುತ್ತಿದ್ದ ಸರಗಳ್ಳತನ ಜಾಲ ಇದೀಗ ಮಡಿಕೇರಿಯಲ್ಲಿ ಬೀಡು ಬಿಟ್ಟಿದ್ದರಿಂದ ಮಹಿಳೆಯರಲ್ಲಿ ಆತಂಕ ಶುರುವಾಗಿದೆ.
ಶಿವರಾತ್ರಿಯಂದು ಮಧ್ಯಾಹ್ನ ಜ್ಯೋತಿ ನಗರದ ನಿವಾಸಿ ಸುಮಿತ್ರಾ ಎಂಬುವವರು ಕಾನ್ವೆಂಟ್ ಜಂಕ್ಷನ್ ನಲ್ಲಿರುವ ಮನೆಯೊಂದರಲ್ಲಿ ಮನೆಗೆಲಸ ಮುಗಿಸಿ, ತಮ್ಮ ಮನೆಗೆ ವಾಪಸು ನಡೆದು ಹೋಗುತ್ತಿರುವಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ವ್ಯಕ್ತಿಗಳಿಬ್ಬರು ಕೊರಳಿಗೆ ಕೈಹಾಕಿ, ಸರ ಎಳೆ ಶರವೇಗದಲ್ಲಿ ಪರಾರಿಯಾಗಿದ್ದರು.
ಈ ವೇಳೆ ಭಯದಿಂದ ಸುಮಿತ್ರಾ ಅವರು ಕಿರುಚಿಕೊಂಡಿದ್ದನ್ನು ಗಮನಿಸಿದ ಸಾರ್ವಜನಿಕರು ಏನೆಂದು ವಿಚಾರಿಸುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಸುಮಿತ್ರಾ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲಾ ಅಪರಾಧ ಪತ್ತೆ ದಳ ಮತ್ತು ನಗರ ಅಪರಾಧ ವಿಭಾಗದ ಪೊಲೀಸರಿಗೆ ಈ ಪ್ರಕರಣವನ್ನು ವರ್ಗಾಯಿಸಲಾಗಿದ್ದು, ಮಡಿಕೇರಿಯಲ್ಲಿ ಬೀಡು ಬಿಟ್ಟಿರಬಹುದಾದ ಸರಗಳ್ಳರ ಜಾಲವನ್ನು ಪತ್ತೆ ಹಚ್ಚುವತ್ತ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಕಾರ್ಯಾಪ್ರವೃತ್ತರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಈಗಾಗಲೇ ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದರಿಂದ ಈ ಪ್ರಕರಣವನ್ನು ಪತ್ತೆ ಹಚ್ಚಲು ಡಿಸಿಐಬಿ ಮತ್ತು ನಗರದ ಅಪರಾಧ ದಳದ ತಂಡದವರನ್ನು ನಿಯೋಜಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸರಗಳ್ಳರನ್ನು ತಲೆಎತ್ತಲು ಬಿಡುವುದಿಲ್ಲ ಎಂದು ಎಸ್ಪಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಮಹಿಳೆಯರೇ
ಎಚ್ಚರವಾಗಿರಿ
ಮಹಿಳೆಯರು
ಬೆಲೆಬಾಳುವ
ಚಿನ್ನಾಭರಣಗಳನ್ನು
ಧರಿಸಿಕೊಂಡು
ರಸ್ತೆಯಲ್ಲಿ
ಹೋಗುವಾಗ
ಎಚ್ಚರದಿಂದ
ಇರಬೇಕು,
ತಾವು
ಧರಿಸಿರುವ
ಆಭರಣಗಳನ್ನು
ಇತರರಿಗೆ
ಕಾಣುವಂತೆ
ಪ್ರದರ್ಶಿಸಬಾರದು.
ಅನುಮಾನಾಸ್ಪದವಾಗಿ ಬೈಕ್ ಅಥವಾ ಇತರೆ ವಾಹನಗಳಲ್ಲಿ ಬಂದರೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಂ ನಂಬರ್ 100ಕ್ಕೆ ಕರೆ ಮಾಡುವ ಮೂಲಕ ಮತ್ತು ಅನುಮಾನಿತರ, ಬೈಕ್ ಮತ್ತು ಇತರೆ ವಾಹನಗಳಲ್ಲಿ ಯಾರಾದರೂ ಬಂದರೆ ಅವರ ಚಹರೆ, ಮುಖದ ಗುರುತನ್ನು ಕಂಡುಹಿಡಿಯುವ ರೀತಿಯಲ್ಲಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.