ಕೊಡಗಿನಲ್ಲಿ ಆಸ್ತಿಗಾಗಿ ತಮ್ಮನನ್ನೇ ಗುಂಡಿಕ್ಕಿ ಹತ್ಯೆಗೈದ ಅಣ್ಣ
ಮಡಿಕೇರಿ, ಜುಲೈ 16: ಆಸ್ತಿ ವಿಚಾರಕ್ಕಾಗಿ ಕಲಹ ವೇರ್ಪಟ್ಟು ಅಣ್ಣನೇ ತಮ್ಮನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಸುಂಟಿಕೊಪ್ಪ ಬಳಿಯ ಹರದೂರು ಗ್ರಾಮದಲ್ಲಿ ನಡೆದಿದೆ.
ಹರದೂರು ಗ್ರಾಮದ ಸುಕ್ರುಬಾಣೆ ನಿವಾಸಿ ಮೇದೂರ ಡಿ.ಸುರೇಶ (42) ಗುಂಡೇಟಿಗೆ ಬಲಿಯಾದ ದುರ್ದೈವಿ.
ಘಟನೆಯ ವಿವರ
ಹರದೂರು ಸುಕ್ರುಬಾಣೆಯ ಕಾಫಿ ಬೆಳೆಗಾರರಾದ ಮೇದೂರ ದೇವಯ್ಯ ಕಳೆದ ವರ್ಷ ನಿಧನರಾಗಿದ್ದರು. ಇವರ ಪುತ್ರರಾದ ಎಂ.ಡಿ.ಕಾವೇರಪ್ಪ ಅಲಿಯಾಸ್ ಹರೀಶ ಹಾಗೂ ಎಂ.ಡಿ.ಸುರೇಶ ಪಿತ್ರಾರ್ಜಿತ ಅಸ್ತಿಯನ್ನು ಹಂಚಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆನ್ನಲಾಗಿದೆ.
ಈ ಸಂದರ್ಭ ಎಂ.ಡಿ.ಕಾವೇರಪ್ಪ ಖಾಲಿ ಪೇಪರಿಗೆ ತನ್ನ ತಾಯಿಯ ಸಹಿಯನ್ನು ಪಡೆದಿದ್ದರು. ಈ ವಿಚಾರ ತಮ್ಮ ಸುರೇಶನಿಗೂ ಗೊತ್ತಾಗಿ ಅಣ್ಣ ಕಾವೇರಪ್ಪನಲ್ಲಿ ಈ ಬಗ್ಗೆ ಕೇಳಲೆಂದು ಶುಕ್ರವಾರ ಮಧ್ಯಾಹ್ನ ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಎಲ್ಲಾ ಅಸ್ತಿಯನ್ನು ನೀನೇ ಕಬಳಿಸಲು ಯತ್ನಿಸುತ್ತಿದ್ದೀಯ ಇದು ಸರಿಯಲ್ಲ ಎಂದು ತಮ್ಮ ಸುರೇಶ ಹೇಳಿದ್ದಾನೆ. ವಿಚಾರ ಅಲ್ಲಿಗೆ ಮುಗಿಯದೆ ಕಲಹ ಮುಂದುವರೆದು ಒಬ್ಬರ ಮೇಲೊಬ್ಬರು ಹಲ್ಲೆಗೆ ಮುಂದಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ಮತ್ತೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದ್ದು ಆಕ್ರೋಶ ತಾರಕಕ್ಕೇರಿದೆ. ಆ ನಂತರ ಬೆಳಿಗ್ಗೆ 8 ಗಂಟೆಗೆ ಸುಮಾರಿಗೆ ತಮ್ಮ ಸುರೇಶ್ ತೋಟಕ್ಕೆ ತೆರಳಿದ್ದರೆನ್ನಲಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡ ಅಣ್ಣ ಎಂ.ಡಿ.ಕಾವೇರಪ್ಪ ತನ್ನ ಕಾರಿನಲ್ಲಿ ಒಂಟಿ ನಳಿಕೆಯ ಕೋವಿಯೊಂದಿಗೆ ಸುರೇಶ್ ನನ್ನು ಹಿಂಬಾಲಿಸಿದ್ದು, ನಡೆದುಕೊಂಡು ತೋಟಕ್ಕೆ ಹೋಗುತ್ತಿದ್ದ ತಮ್ಮನ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದುಕೇಳಿ ಸುರೇಶನ ಪತ್ನಿ ಶಾರಾದ ಓಡಿ ಗಾಬರಿಯಿಂದ ತೋಟದ ಕಡೆ ಬಂದಾಗ ಕಾವೇರಪ್ಪ ಕೋವಿ ತೋರಿಸಿ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಸಿದನು ಎನ್ನಲಾಗಿದೆ.
ಸೊಂಟಕ್ಕೆ ಗುಂಡು ತಗುಲಿದ ಸುರೇಶನನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಸುಂಟಿಕೊಪ್ಪ ಪೊಲೀಸರು ಕೊಲೆ ಆರೋಪಿ ಎಂ.ಡಿ. ಕಾವೇರಪ್ಪನನ್ನು ಬಂಧಿಸಿದ್ದು ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.