ಸುಂಟಿಕೊಪ್ಪ ಬಳಿ ಕಾಡಾನೆ ದಾಳಿಗೆ ಮಹಿಳೆ ಬಲಿ
ಬೆಳಗ್ಗೆ 6.15 ರ ಸಂದರ್ಭದಲ್ಲಿ ಮನೆಯ ಹಿಂಬದಿಯಲ್ಲಿ ಮನೆಕೆಲಸದಲ್ಲಿ ತೊಡಗಿದ್ದ ಸರೋಜ ಎಂಬುವರ ಮೇಲೆ ಕಾಡಾನೆ ಹಠಾತ್ ದಾಳಿ ಮಾಡಿದ್ದು, ಅವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ..
ಮಡಿಕೇರಿ, ಏಪ್ರಿಲ್ 10: ಕಾಡಾನೆ ದಾಳಿಯಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಸುಂಟಿಕೊಪ್ಪ ಬಳಿಯ 7ನೇ ಹೊಸಕೋಟೆಯಲ್ಲಿ ನಡೆದಿದೆ. ಇಲ್ಲಿನ ಮೆಟ್ನಹಳ್ಳ ನಿವಾಸಿ ದಿವಂಗತ ಮಣಿ ಅವರ ಪತ್ನಿ ಸರೋಜ (45) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ.
ಬೆಳಗ್ಗೆ 6.15 ರ ಸಂದರ್ಭದಲ್ಲಿ ಮನೆಯ ಹಿಂಬದಿಯಲ್ಲಿ ಮನೆಕೆಲಸದಲ್ಲಿ ತೊಡಗಿದ್ದ ಈಕೆಯ ಮೇಲೆ ಈರಪ್ಪ ಎಂಬುವವರ ತೋಟದಲ್ಲಿ ಬೀಡುಬಿಟ್ಟಿದ ಕಾಡಾನೆ ಹಠಾತ್ ದಾಳಿ ಮಾಡಿ, ಸೊಂಡಿಲಿನಿಂದ ಅವರನ್ನು ಎತ್ತಿ, ನೆಲಕ್ಕೆಸೆದು ಅರಣ್ಯಕ್ಕೆ ವಾಪಾಸ್ಸಾಗಿತ್ತು. [ಕ್ಯಾಮೆರಾವನ್ನು ಕೋವಿಯೆಂದು ಭ್ರಮಿಸಿ ಓಡಿತೆ ಸಾಕಾನೆ? ]
ತೀವ್ರ ಗಾಯಗೊಂಡಿದ್ದ ಸರೋಜ ಸ್ಥಳದಲ್ಲೇ ಮೃತಪಟ್ಟರು. ಸ್ಥಳಕ್ಕೆ ಆಗಮಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.
ಆತಂಕದಲ್ಲಿ ಗ್ರಾಮಸ್ಥರು: ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಟ್ನಹಳ್ಳ ಗ್ರಾಮ ಹಾಗೂ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಂದಗೋವೆ ಪೈಸಾರಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಹಾಡುಹಗಲಿನಲ್ಲಿ ಕಾಫಿತೋಟಗಳಲ್ಲಿ ಕಾಡಾನೆಗಳು ವಾಸ್ತವ್ಯ ಹೂಡಿ ಉಪಟಳ ನೀಡುತ್ತಿರುವುದರಿಂದ ತೋಟಗಳಲ್ಲಿ ಕೆಲಸ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. [ಕೊಡಗಿನಲ್ಲಿ ಗುಡುಗು ಸಹಿತ ಮಳೆ: ಧರೆಗುರುಳಿದ ಮರ ]
ಜನರ ಅಸಮಾಧಾನ: ಆನೆಕಾಡು ಅರಣ್ಯದಂಚಿನಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ಹಾಗೂ ಸರಕಾರ ಕೋಟ್ಯಂತರ ರೂ ವ್ಯಯಿಸಿ ಕಂದಕ ನಿರ್ಮಿಸಿದ್ದರೂ ಅವುಗಳು ಅವೈಜ್ಞಾನಿಕವಾಗಿದ್ದು, ಕಾಡಾನೆಗಳು ಆಹಾರ ಅರಸಿ ತೋಟಗಳಿಗೆ ಲಗ್ಗೆಯಿಡುತ್ತಿದ್ದು ಕೃಷಿಫಸಲನ್ನು ನಾಶಮಾಡುತ್ತಿವೆ. ಕೂಡಲೇ ಅರಣ್ಯ ಇಲಾಖೆ ಇತ್ತ ಗಮನಹರಿಸುವಂತೆ ಮನವಿ ಮಾಡಿರುವ ಜನರು, ತಪ್ಪಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.